ಸರಕು ಸಾಗಾಣಿಕೆ ವಾಹನದಲ್ಲಿ ಕಾರ್ಮಿಕರ ಸಾಗಾಟ ಅಪರಾಧ: ಧಾರವಾಡ ಡಿಸಿ ದೀಪಾ ಚೋಳನ್
ಧಾರವಾಡ, ಮೇ 4: ಕೃಷಿ, ಕೂಲಿ, ಕಟ್ಟಡ ಕಾರ್ಮಿಕರು ಸೇರಿದಂತೆ ಶಾಲಾ ಮಕ್ಕಳನ್ನು ನಿಯಮ ಬಾಹಿರವಾಗಿ ಸರಕು ಸಾಗಾಣಿಕೆ ವಾಹನದಲ್ಲಿ ಒಯ್ಯುವುದು ಅಪರಾಧ. ಉದ್ಯೋಗದಾತರು ತಮ್ಮ ಕಾರ್ಮಿಕರ ಬಗ್ಗೆ ಕಳಕಳಿ, ಸಂವೇದನಾಶೀಲತೆ ಹೊಂದಿರಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಶನಿವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕಾರ್ಮಿಕ ಇಲಾಖೆಯಿಂದ ಆಯೋಜಿಸಿದ್ದ ‘ಹೈಕೋರ್ಟ್ನಲ್ಲಿ ದಾಖಲಾಗಿರುವ ಸಾರ್ವಜನಿಕ ಹಿತಾಸಕ್ತಿ ರಿಟ್ ಅರ್ಜಿ ಪ್ರಕರಣ’ ಕುರಿತಂತೆ ಜರುಗಿದ ಉದ್ಯೋಗದಾತರ ಹಾಗೂ ಕಾರ್ಮಿಕ ವರ್ಗದ ಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಹೈಕೋರ್ಟ್ ಆದೇಶದಂತೆ ಮುಂದಿನ ತಿಂಗಳು ಕಾರ್ಮಿಕರ ಹಿತಾಸಕ್ತಿ ಕಾಪಾಡುವ ಕುರಿತು ಕ್ರಿಯಾಯೋಜನೆ ಸಲ್ಲಿಸಲಾಗುತ್ತಿದೆ. ಕ್ರಿಯಾಯೋಜನೆಯಲ್ಲಿ ಕಾರ್ಮಿಕರಿಗೆ ಉದ್ಯೋಗದಾತ ಕಾರ್ಖಾನೆ, ಕಂಪನಿ ಹಾಗೂ ಶಾಲಾ-ಕಾಲೇಜುಗಳಿಗೆ ಪ್ರತ್ಯೇಕವಾಗಿ ಜನಜಾಗೃತಿ ಮತ್ತು ತಿಳುವಳಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಅವರು ಹೇಳಿದರು.
ಆಡಳಿತ ಮಂಡಳಿಯವರು ಸಹಕಾರ ನೀಡಬೇಕು. ಸರಕು ಸಾಗಾಣಿಕೆ ವಾಹನದಲ್ಲಿ ಯಾವುದೇ ಕಾರಣಕ್ಕೂ ಕಾರ್ಮಿಕರನ್ನು, ಶಾಲಾ ಮಕ್ಕಳನ್ನು ಸಾಗಾಣಿಕೆ ಮಾಡುವಂತಿಲ್ಲ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಅವರ ಮನೆಯಿಂದ ಕರೆತಂದು ಶಾಲೆಯಿಂದ ಮರಳಿ ಅವರ ಮನೆಗೆ ತಲುಪುವಂತೆ ಮಾಡುವುದು ಆಯಾ ಶಾಲಾ ಆಡಳಿತ ಮಂಡಳಿ ಜವಾಬ್ದಾರಿಯಾಗಿದೆ ಎಂದು ದೀಪಾ ಚೋಳನ್ ತಿಳಿಸಿದರು.
ನಿಯಮ ಮೀರಿ ಮಕ್ಕಳನ್ನು ಸಾಗಿಸುವ ವಾಹನ ಹಾಗೂ ಸರಕು ಸಾಗಾಣಿಕೆ ವಾಹನದಲ್ಲಿ ಕಾರ್ಮಿಕರನ್ನು ಒಯ್ಯುವುದು ಅಪರಾಧವಾಗಿದೆ. ಆದುದರಿಂದ, ಎಲ್ಲ ಉದ್ಯೋಗದಾತರು ಕಾರ್ಮಿಕರ, ಶಾಲಾ ಮಕ್ಕಳ ಸುರಕ್ಷತೆ, ಕ್ಷೇಮದ ಬಗ್ಗೆ ಮುಂಜಾಗೃತೆ ವಹಿಸಿ, ಕ್ರಮ ಕೈಗೊಳ್ಳಬೇಕೆಂದು ಅವರು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕಾರ್ಮಿಕ ಇಲಾಖೆ ಆಯುಕ್ತ ಪಾಲಯ್ಯ ಮಾತನಾಡಿ, ಕಾರ್ಮಿಕರ ಹಿತಾಸಕ್ತಿ ಕಾಪಾಡಲು ಮತ್ತು ಅವರ ಸುರಕ್ಷತೆಗಾಗಿ ಇಲಾಖೆ ಹಲವಾರು ನಿಯಮಗಳನ್ನು ಜಾರಿ ಮಾಡಿ, ಅನುಷ್ಠಾನಗೊಳಿಸಿದೆ. ಹೈಕೋರ್ಟ್ ಕಾರ್ಖಾನೆಗಳಿಗೆ, ಕಂಪನಿಗಳಿಗೆ ಅಗತ್ಯವಿರುವ ಕೆಲಸಗಾರರು ಅಸುರಕ್ಷಿತ ವಾಹನ ಬಳಕೆ ಮಾಡುತ್ತಿರುವ ಕುರಿತು ಪರಿಶೀಲಿಸಿ, ಸೂಕ್ತ ಕ್ರಮ ತೆಗೆದುಕೊಳ್ಳಲು ಮಾರ್ಗಸೂಚಿ ನೀಡಿದೆ ಎಂದು ತಿಳಿಸಿದರು.
ಅದರಂತೆ ಕಾರ್ಖಾನೆ, ಕಂಪನಿ ಮತ್ತು ಶಾಲಾ-ಕಾಲೇಜು ಆಡಳಿತ ಮಂಡಳಿಗಳು ತಮ್ಮ ಕಾರ್ಮಿಕರ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕಾಳಜಿ ವಹಿಸಬೇಕು ಮತ್ತು ಈ ಕುರಿತು ಸೂಕ್ತ ಕ್ರಮಕೈಗೊಳ್ಳಬೇಕು. ಕಾರ್ಮಿಕ ಇಲಾಖೆಯೂ ಇತರ ಇಲಾಖೆಗಳ ನೆರವಿನೊಂದಿಗೆ ಸಹಕಾರ ನೀಡುತ್ತದೆ. ತಮ್ಮ ಬೇಡಿಕೆಗಳಿದ್ದರೆ ಚರ್ಚಿಸಿ ಸಲಹೆಗಳನ್ನು ನೀಡಬೇಕೆಂದು ಅವರು ಹೇಳಿದರು.
ಸಭೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಆರ್.ಎಸ್.ಚಿಣ್ಣನ್ನವರ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಸಿ.ಸತೀಶ್, ಉಪಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ ಮತ್ತು ಮಹಾನಗರ ಉಪಪೊಲೀಸ್ ಆಯುಕ್ತ ಶಿವಕುಮಾರ ಗುಣಾತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.