ಯಾವುದೇ ಸರ್ಕಾರ ಬಂದರೂ ರೈತರ ಸಮಸ್ಯೆ ಕೇಳುತ್ತಿಲ್ಲ: ಕುರುಬೂರು ಶಾಂತಕುಮಾರ್

Update: 2019-05-04 18:28 GMT

ಮೈಸೂರು,ಮೇ.4: ರೈತರು ಮತ್ತಷ್ಟು ಕಷ್ಟಕ್ಕೆ ಒಳಗಾಗಿದ್ದರೂ ರಾಜ್ಯ ಸರ್ಕಾರ ರೈತರ ಸಾಲಮನ್ನಾ ಸರಿಯಾಗಿ ಮಾಡಿಲ್ಲ ಎಂದು ರಾಜ್ಯ  ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ರೈತರಿಗೆ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಮೈಸೂರಿನ ಗನ್ ಹೌಸ್ ನಲ್ಲಿರುವ ಕುವೆಂಪು ಉದ್ಯಾನವನದಲ್ಲಿ ಶನಿವಾರ ತುರ್ತು ಸಭೆ ನಡೆಯಿತು. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ  ನಡೆದ ಸಭೆಯಲ್ಲಿ ಸರ್ಕಾರದ ವಿರುದ್ಧ ಹೋರಾಟ ಮಾಡುವುದರ ಕುರಿತು ಚರ್ಚೆ ನಡೆಸಲಾಯಿತು.

ಸಭೆಯ ನಂತರ ಅಲ್ಲೇ ರಾಜ್ಯ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು. ರಾಜ್ಯ ಸರ್ಕಾರ ,ಅಧಿಕಾರಿಗಳ ವಿರುದ್ಧ ವಿವಿಧ ಘೋಷಣೆ ಕೂಗಿ ಕೂಡಲೇ ರೈತರ ಸಾಲಮನ್ನಾ ಮಾಡುವಂತೆ ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ಯಾವುದೇ ಸರ್ಕಾರ ಬಂದರೂ ರೈತರ ಸಮಸ್ಯೆ ಕೇಳುತ್ತಿಲ್ಲ. ರೈತರು ಮೊದಲು ಎಚ್ಚೆತ್ತುಕೊಳ್ಳಬೇಕು. ರೈತರು ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು. ಇಲ್ಲವಾದರೆ ಸರ್ಕಾರಗಳು ರೈತರನ್ನು ಕಡೆಗಣಿಸುತ್ತವೆ ಎಂದು ರೈತರಿಗೆ ಕಿವಿಮಾತು ಹೇಳಿದರು.

ರಾಜ್ಯ ಸರ್ಕಾರ ಸರಿಯಾಗಿ ಸಾಲಮನ್ನಾ ಮಾಡಿಲ್ಲ. ರೈತರ ಕಬ್ಬು, ಭತ್ತದ ಹಣವನ್ನು ಬ್ಯಾಂಕುಗಳು ಸಾಲಕ್ಕಾಗಿ ಜಮಾ ಮಾಡಿಕೊಳ್ಳುತ್ತಿವೆ. ಯಾವುದೆ ಬ್ಯಾಂಕುಗಳು ಸರ್ಕಾರದ ನೀತಿಯನ್ನು ಪಾಲಿಸುತ್ತಿಲ್ಲ. ರೈತರ ಕಬ್ಬಿಗೆ ಎಫ್ ಆರ್ ಪಿ ದರ ಸಿಗುತ್ತಿಲ್ಲ. ರಾಜ್ಯದ ವಿವಿಧ ಕಾರ್ಖಾನೆಗಳಿಂದ 4 ಸಾವಿರ ಕೋಟಿ ರೂ. ಹಣ ರೈತರಿಗೆ ಬರಬೇಕು. ಹಣ ಬರದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗ ಬರಗಾಲ ಬೇರೆ ಬಂದಿದೆ. ರೈತರು ಮತ್ತಷ್ಟು ಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಹಣ ಕೊಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು. 

ಸಭೆಯಲ್ಲಿ ಅತ್ತಳ್ಳಿ ದೇವರಾಜ್, ಮರಿರಾಜು, ಮಹದೇವಯ್ಯ, ಸೋಮಣ್ಣ, ಗುರುಮೂರ್ತಿ, ಹರೀಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News