ಬೋನಿಗೆ ಬಿದ್ದ ಚಿರತೆ...
ಹಸು ತಿನ್ನಲೆಂದು ಬಂದ ಚಿರತೆಯೊಂದು ಬೋನಿಗೆ ಬಿದ್ದ ಘಟನೆ ಮೈಸೂರಿನ ಕೆ.ಸಾಲುಂಡಿ ಗ್ರಾಮದಲ್ಲಿ ನಡೆದಿದೆ. ಮೂರು ದಿನಗಳ ಹಿಂದಷ್ಟೇ ಹಸು ಮೇಲೆ ದಾಳಿ ಮಾಡಿ ಕೊಂದುಹಾಕಿದ್ದ ಇದೇ ಚಿರತೆ ಗ್ರಾಮದ ಜನರಲ್ಲಿ ಆತಂಕವನ್ನುಂಟುಮಾಡಿತ್ತು. ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಹಿಡಿಯಲೆಂದು ಬೋನು ಇರಿಸಲು ನಿರ್ಧರಿಸಿದ್ದರು. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಸಿಬ್ಬಂದಿ ಗ್ರಾಮದ ಚಿಕ್ಕಣ್ಣೇಗೌಡ ಎಂಬುವವರಿಗೆ ಸೇರಿದ ಜಮೀನಲ್ಲಿ ಚಿರತೆಗಾಗಿ ಬೋನು ಸಿದ್ಧಗೊಳಿ, ಅದರಲ್ಲಿ ಸತ್ತ ಹಸುವಿನ ಮಾಂಸವನ್ನು ಇಟ್ಟಿದ್ದರು. ಮಾಂಸವನ್ನು ತಿನ್ನಲೆಂದು ಬಂದ ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಕೊನೆಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ 2 ವರ್ಷದ ಹೆಣ್ಣು ಚಿರತೆಯನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದು, ಸಾರ್ವಜನಿಕರು ನಿಟ್ತುಸಿರುಬಿಟ್ಟಿದ್ದಾರೆ. ವನ್ಯಜೀವಿ ವಿಭಾಗದ ಡಿಸಿಎಫ್ ಡಾ.ಪ್ರಶಾಂತ್ ನೇತೃತ್ವದಲ್ಲಿ ಈ ಕಾರ್ಯಚರಣೆ ನಡೆದಿದೆ.