ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನಾನೂ ಆಕಾಂಕ್ಷಿ: ಶಾಸಕ ಯತ್ನಾಳ್
ಕಲಬುರ್ಗಿ, ಮೇ 6: ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನಾನು ಆಕಾಂಕ್ಷಿಯಾಗಿದ್ದೇನೆ. ಮುಂದಿನ ಅವಧಿಗೆ ಪಕ್ಷದ ರಾಜ್ಯಾಧ್ಯಕ್ಷರು ಉತ್ತರ ಕರ್ನಾಟಕದವರು ಆಗಬೇಕೆಂಬ ಬೇಡಿಕೆಯೂ ಇದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಹೇಳಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಬಿಜೆಪಿ ಭದ್ರಕೋಟೆ, ಹೀಗಾಗಿ ಉತ್ತರ ಕರ್ನಾಟಕದವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ನೀಡಬೇಕೆಂಬ ಆಗ್ರಹವೂ ಇದೆ. ಹೀಗಾಗಿ ವರಿಷ್ಠರು ಶೀಘ್ರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಕಾಂಗ್ರೆಸ್-ಜೆಡಿಎಸ್ ಪಕ್ಷದಲ್ಲಿ ಆಂತರಿಕ ಕದನ ಪ್ರಾರಂಭವಾಗಿದ್ದು, ಮೈತ್ರಿ ಸರಕಾರ ಮುಂದುವರೆದರೆ ಕಾಂಗ್ರೆಸ್ ಸಂಪೂರ್ಣ ನಿರ್ನಾಮವಾಗುತ್ತೆ ಎಂಬ ಭಯ ಕೆಲವರನ್ನು ಕಾಡುತ್ತಿದೆ. ಹೀಗಾಗಿ ಸಿಎಂ ಆಗಲು ಕಾಂಗ್ರೆಸ್ ಪಕ್ಷದಲ್ಲಿ ಸಾಲುಗಟ್ಟಿ ನಿಂತಿದ್ದಾರೆ ಎಂದು ಅವರು ಲೇವಡಿ ಮಾಡಿದರು.
ನಾನು ಮನಸ್ಸು ಮಾಡಿದರೆ ಗೃಹ ಸಚಿವ ಎಂ.ಬಿ.ಪಾಟೀಲ್ ಅವರನ್ನು ಬಿಜೆಪಿಗೆ ಕರೆತರುತ್ತೇನೆ. ಎಂ.ಬಿ.ಪಾಟೀಲ್ ನಮ್ಮ ಶಾಸಕರನ್ನು ಖರೀದಿ ಮಾಡಲು ಸಾಧ್ಯವಿಲ್ಲ. ‘ಬನ್ನಿ ರಾಜ್ಯದಲ್ಲಿ ಬಿಜೆಪಿ ಕಟ್ಟೋಣ’ ಎಂದು ನಾನೇ ಅವರನ್ನು ಆಹ್ವಾನ ಮಾಡುತ್ತೇನೆ ಎಂದು ಯತ್ನಾಳ್ ಆಹ್ವಾನಿಸಿದರು.