×
Ad

ರೈಲಿನಲ್ಲಿ ಚಿನ್ನಾಭರಣ ದೋಚುತ್ತಿದ್ದ ದರೋಡೆಕೋರನ ಬಂಧನ

Update: 2019-05-07 22:58 IST

ಮೈಸೂರು,ಮೇ.7: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ನಗದು ಮತ್ತು ಚಿನ್ನಾಭರಣವನ್ನು ದೋಚಿದ್ದ ದರೋಡೆಕೋರನನ್ನು ಮೈಸೂರು ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬೆಂಗಳೂರಿನ ಕಮಲಾನಗರ ನಿವಾಸಿ ಗಂಗಾಧರ ಬಂಧಿತ ಆರೋಪಿ. ಮೈಸೂರಿನ ರತ್ನಮ್ಮ ಎಂಬವರ ಬಳಿ ಈತ ನಗದು ಚಿನ್ನಾಭರಣ ದೋಚಿದ್ದ. ಬಂಧಿತನಿಂದ 1.20 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು 4,270 ರೂ ನಗದನ್ನ ವಶಕ್ಕೆ ಪಡೆಯಲಾಗಿದೆ.

ಮೈಸೂರಿನ ನಿವಾಸಿ ರತ್ನಮ್ಮ ಮೇ 4ರಂದು ಟಿಪ್ಪು ಎಕ್ಸ್ ಪ್ರೆಸ್ ನಲ್ಲಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ರತ್ನಮ್ಮ ಬಳಿ ಬಂದ ಆರೋಪಿ ಗಂಗಾಧರ ಚಿನ್ನಾಭರಣ ಹಣವಿದ್ದ ಬ್ಯಾಗ್ ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದ. ಈ ಕುರಿತು ರತ್ನಮ್ಮ ಮೈಸೂರು ರೈಲ್ವೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣವನ್ನು ಭೇದಿಸಲು ಮತ್ತು ರೈಲಿನಲ್ಲಿ ಆಗುವ ಅಪರಾಧಗಳನ್ನ ತಡೆಗಟ್ಟಲು ಪೊಲೀಸ್ ಅಧೀಕ್ಷಕರಾದ ಭೀಮಾಶಂಕರ್ ಗುಳೇದ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎನ್.ಜಯಕುಮಾರ್ ಅವರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ನಡುವೆ ಇಂದು ಈ ತಂಡ ಕಾವೇರಿ ಎಕ್ಸ್ ಪ್ರೆಸ್ ನಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿ ಬರುವಾಗ ಆರೋಪಿ ಗಂಗಾಧರ ಸಿಕ್ಕಿಬಿದ್ದಿದ್ದಾನೆ. ಈತನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಕಳ್ಳತನದ ಬಗ್ಗೆ ಬಾಯ್ಬಿಟ್ಟಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News