ಸಮಾಜಕ್ಕೆ ಒಳಿತು ತರುವ ಬದಲಾವಣೆ ಮಾಧ್ಯಮ ರಂಗದಲ್ಲಿ ಆಗಲಿ: ಸಚಿವ ಸತೀಶ್ ಜಾರಕಿಹೊಳಿ

Update: 2019-05-08 12:46 GMT

ಬೆಳಗಾವಿ, ಮೇ 8: ಎಲ್ಲ ರಂಗಗಳಂತೆ ಮಾಧ್ಯಮ ರಂಗವೂ ಬದಲಾಗುತ್ತಿದೆ. ಕೇವಲ ಪತ್ರಿಕೆಗಳು ಇದ್ದ ಕಾಲವಿತ್ತು. ನಂತರ ಎಲೆಕ್ಟ್ರಾನಿಕ್ ಮೀಡಿಯಾ ಹಾಗೂ ಈಗ ಡಿಜಿಟಲ್ ಮೀಡಿಯಾ ಯುಗ ಬಂದಿದೆ. ಈ ಬದಲಾವಣೆಯು ಸಮಾಜಕ್ಕೆ ಒಳಿತನ್ನು ತರುವ ಬದಲಾವಣೆ ಆಗಲಿ ಎಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಆಶಿಸಿದ್ದಾರೆ.

ನಗರದಲ್ಲಿಂದು ಪ್ರಗತಿ ಮೀಡಿಯಾ ಹೌಸ್ ಹಾಗೂ ಇನ್ಸ್‌ಪೈಯರ್ ಕರಿಯರ್ ಇನ್ಸ್‌ಟಿಟ್ಯೂಟ್ ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿಡಿದ ಅವರು, ಒಂದು ಕಾಲದಲ್ಲಿ ಸುದ್ದಿಗಾಗಿ ಕೇವಲ ಪಿಟಿಐ ಹಾಗೂ ಯುಎನ್‌ಐ ಸುದ್ದಿ ಸಂಸ್ಥೆಗಳನ್ನು ಅವಲಂಬಿಸಬೇಕಿತ್ತು. ಆದರೆ ಈಗ ಜಗತ್ತು ಚಿಕ್ಕದಾಗಿದ್ದು ಯಾವುದೇ ಸುದ್ದಿಯಾದರೂ ಕ್ಷಣಾರ್ಧದಲ್ಲಿ ಜನರಿಗೆ ತಲುಪುವಂತಾಗಿದೆ ಎಂದರು.

ಈ ತಾಂತ್ರಿಕತೆಯು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಲಿ. ಈ ಭಾಗದ ಜ್ವಲಂತ ಸಮಸ್ಯೆಗಳಾದ ಮಹಾದಾಯಿ, ಕೃಷ್ಣಾ ಸಮಸ್ಯೆ ಸೇರಿದಂತೆ ಇನ್ನುಳಿದ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಡಿಜಿಟಲ್ ಮೀಡಿಯಾ ಮುಂದಾಗಲಿ ಎಂದು ಅವರು ನುಡಿದರು.

ಸಂಸದ ಸುರೇಶ್ ಅಂಗಡಿ ಮಾತನಾಡಿ, ಬೆಳಗಾವಿಯು ಐದು ಭಾಷೆಗಳನ್ನಾಡುವ ಜನರ ಸಾಂಸ್ಕೃತಿಕ ಸಂಗಮದ ಜಿಲ್ಲೆಯಾಗಿದೆ. ಬೆಳಗಾವಿಯನ್ನು ಗಡಿನಾಡು ಎಂದು ಸಂಬೋಧಿಸುವ ಪರಿಪಾಠವನ್ನು ತಪ್ಪಿಸಬೇಕಿದೆ. ಬೆಳಗಾವಿ ದಕ್ಷಿಣ ಭಾರತದ ಹೆಬ್ಬಾಗಿಲು. ಹಾಗೆಯೇ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಎಂದು ಪ್ರತ್ಯೇಕಿಸುವ ಹಾಗೂ ಇಲ್ಲಿನ ನಾಯಕರನ್ನು ಉತ್ತರ ಕರ್ನಾಟಕಕ್ಕೆ ಸೀಮಿತಗೊಳಿಸುವುದನ್ನು ನಿಲ್ಲಿಸಬೇಕಿದೆ ಎಂದರು.

ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ನಾನು 20 ವರ್ಷಗಳಲ್ಲಿ ಖಾನಾಪುರದಿಂದ ರಾಜ್ಯಮಟ್ಟದ ರಾಜಕಾರಣಿಯಾಗಿ ಬೆಳೆಯಲು ಮಾಧ್ಯಮದ ಪಾತ್ರ ಬಹು ದೊಡ್ಡದು. ನಮ್ಮ ವಿಚಾರಗಳನ್ನು ಜನರಿಗೆ ತಿಳಿಸಲು, ನಮ್ಮ ಬಗ್ಗೆ ಅಭಿಪ್ರಾಯ ಮೂಡಿಸಲು ಮಾಧ್ಯಮಗಳು ಮುಖ್ಯ ಪಾತ್ರ ವಹಿಸುತ್ತವೆ. ಹಾಗೆಯೇ ನಾವು ತಪ್ಪು ಮಾಡಿದಾಗ ಅದನ್ನು ಎತ್ತಿ ತೋರಿಸಿ ತಿದ್ದಿಕೊಳ್ಳಲು ಸಹಾಯ ಮಾಡುತ್ತವೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಗತಿ ಮೀಡಿಯಾ ಹೌಸ್ ಮುಖ್ಯಸ್ಥ ಎಂ.ಕೆ. ಹೆಗಡೆ, ಇಂದು ಸುದ್ದಿ ಮಾಧ್ಯಮವು ಸಿಬ್ಬಂದಿ ಕೊರತೆ, ಸಮಯದ ಅಭಾವ, ಅನುಭವದ ಸಿಬ್ಬಂದಿ ಕೊರತೆಯಂತಹ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸಿದ್ಧಪಡಿಸಿದ ಗುಣಮಟ್ಟದ ಸುದ್ದಿಯನ್ನು ಮಾಧ್ಯಮಗಳಿಗೆ ತಲುಪಿಸಲು ಪ್ರಗತಿ ಮೀಡಿಯಾ ಹೌಸ್ ಶ್ರಮಿಸಲಿದೆ. ಸಮಾಜ ಹಾಗೂ ಮಾಧ್ಯಮ ಎರಡಕ್ಕೂ ಸಹಾಯಕವಾಗುವ ರೀತಿಯಲ್ಲಿ ಮೀಡಿಯಾ ಹೌಸ್ ಕೆಲಸ ಮಾಡಲಿದೆ ಎಂದರು.

ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್, ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಲಂಕೇಶ್ ಪತ್ರಿಕೆ ಒಂದು ಕಾಲದಲ್ಲಿ ಇಡೀ ರಾಜಕೀಯ ವ್ಯವಸ್ಥೆಯನ್ನೆ ಬದಲಾವಣೆ ಮಾಡಿತ್ತು. ಅಂತಹ ಶಕ್ತಿ ಮಾಧ್ಯಮಗಳಿಗೆ ಇದೆ. ಅದೇ ರೀತಿ ಈಗಲೂ ಮಾಧ್ಯಮಗಳು ಕೆಲಸ ಮಾಡಬೇಕಿದೆ.

-ಮಹಾಂತೇಶ್ ಕವಟಗಿಮಠ, ವಿಧಾನಪರಿಷತ್ ಸದಸ್ಯ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News