ಚಾಮರಾಜನಗರದ ಯುವಕನಿಂದ ದಯಾಮರಣಕ್ಕೆ ಮನವಿ

Update: 2019-05-09 14:05 GMT

ಚಾಮರಾಜನಗರ, ಮೇ 9: ಆತ ಹದಿ ಹರೆಯದ ಯುವಕ. ಪಿಯುಸಿ ಓದಿ ಪಾಸಾಗಿ ಮುಂದೆ ಪದವಿ ಪಡೆದು ಸರ್ಕಾರಿ ನೌಕರಿ ಗಿಟ್ಟಿಸಿ, ತನ್ನನ್ನು ಸಾಕಿ ಸಲಹಿದ ತಂದೆ ತಾಯಿಯನ್ನು ಸಾಕುವ ಕನಸು ಹೊತ್ತ ಚಿಗುರು ಮೀಸೆ ಹುಡುಗ. ಆದರೆ ವಿಧಿಯಾಟದ ಮುಂದೆ ಆತನ ಬದುಕು ದುಸ್ತರವಾಗಿದೆ. ಹೊಲದಲ್ಲಿ ಮಾವಿನ ಕಾಯಿ ಕೀಳಲು ಮರ ಹತ್ತಿದಾಗ ಮರದಿಂದ ಬಿದ್ದು ಬೆನ್ನು ಮೂಳೆ ಮುರಿದ ಕಾರಣ ಹಾಸಿಗೆ ಹಿಡಿದು 6 ವರ್ಷಗಳೇ ಕಳೆದೋಗಿವೆ. ಇವನ ಕೊರಗಿನಲ್ಲೇ ಆತನ ತಂದೆ ಕೂಡ ಪ್ರಾಣಬಿಟ್ಟಿದ್ದಾರೆ. ಎದೆ ಹಾಲು ಕುಡಿಸಿ ಬೆಳೆಸಿದ ಆ ಅಮ್ಮ ಈಗಲೂ ಮಗುವಿನಂತೆ ಸಾಕುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ಇದು ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲೂಕಿನ ಗುರುವಿನಪುರದ ಮಹೇಶನ ವ್ಯಥೆ. ಗುರುವಿನ ಪುರ ಗ್ರಾಮದ ಚಿಕ್ಕ ಮಾದಪ್ಪನಿಗೆ ಮಹೇಶ ಒಬ್ಬನೇ ಮಗ, ಒಬ್ಬಳೇ ಮಗಳು, ಬಡತನ, ಕೂಲಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳಲೇ ಬೇಕು, ಅದರ ನಡುವೆಯೂ ಮಗನನ್ನು ಚೆನ್ನಾಗಿ ಓದಿಸಿದ್ದರು ಆ ತಂದೆ ತಾಯಿ, ಪಿಯುಸಿ ಓದಿ ಪಾಸಾಗಿದ್ದ, ರಜಾ ಮುಗಿದ ಬಳಿಕ ಬಿ.ಕಾಂಗೆ ಸೇರಿಸುವ ಚಿಂತನೆ ಅಪ್ಪನದ್ದು, ಪದವಿ ಪಡೆದು, ನೌಕರಿ ಗಿಟ್ಟಿಸಿ ತಂದೆ ತಾಯಿಯನ್ನು ಸಾಕುವ ಕನಸು ಮಗನದ್ದು.

ರಜಾ ದಿನವೊಂದರಲ್ಲಿ ಜಮೀನಿನಲ್ಲಿದ್ದ ಅಪ್ಪ ಅಮ್ಮನ ಜೊತೆ ಕೆಲಸ ಮಾಡಲು ಹೋಗಿ, ಮಾವಿನ ಕಾಯಿ ತಿನ್ನಲು ಮರವೇರಿದ್ದ, ಕಾಲು ಜಾರಿ ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದು ಆಸ್ಪತ್ರೆ ಸೇರಿದ್ದ, ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಚಿಕಿತ್ಸೆ ಕೊಡಿಸಿದರೂ ಗುಣವಾಗಲೇ ಇಲ್ಲ, ಕೂಲಿ ಇಲ್ಲದೇ ಸಾಲ ಕೊಟ್ಟವರಿಗೆ ವಾಪಸ್ಸು ಕೊಡಲಾಗದೆ ಬಾಧೆ ಹೆಚ್ಚಾದಾಗ, ಇತ್ತ ವಯಸ್ಸಿಗೆ ಬಂದ ಮಗನನ್ನು ಉಳಿಸಿಕೊಳ್ಳಲು ಆಗದೆ, ಸಾಲವನ್ನು ತೀರಿಸಲಾಗದೆ ವಿಷ ಕುಡಿದು ಆತ್ಮಹತ್ಯೆಗೆ ಶರಣಾದರು ಮಹೇಶನ ತಂದೆ ಚಿಕ್ಕ ಮಾದಪ್ಪ. ನಂತರ ಮಗನನ್ನ ಸಾಕುವ ಹೊಣೆ ತಾಯಿಯದ್ದು, ತಮಗೆ ಬರುವ ವಿಧವಾ ವೇತನ, ಮಗನಿಗೆ ಬರುವ ಅಂಗವಿಕಲ ವೇತನ, ಸಂಘವೊಂದು ನೀಡುವ ಸಹಾಯ ಧನ ನಮ್ಮ ಜೀವನಕ್ಕೆ ಆಧಾರ. ಆದರೆ ಮಗನ ಚಿಕಿತ್ಸಾ ವೆಚ್ಚ ತಿಂಗಳಿಗೆ ನಾಲ್ಕಾರು ಸಾವಿರ ರೂಪಾಯಿಗಳು. ಹಾಗಾಗಿ 'ಜೀವನವೇ ದುಸ್ತರವಾಗಿದೆ. ನನಗೆ ಜೀವನ ಸಾಕಾಗಿ ಹೋಗಿದೆ ದಯಾಮರಣ ಕೊಡಿಸಿ' ಎಂದು ಜಿಲ್ಲಾಧಿಕಾರಿಗಳು ಮತ್ತು ರಾಜ್ಯಪಾಲರಿಗೆ ಮನವಿ ಮಾಡುತ್ತಾನೆ ಮಹೇಶ್.

ಬೆನ್ನು ಮೂಳೆ ಮುರಿದು ಕೊಂಡು, ಆಸ್ಪತ್ರೆ ಸೇರಿ ಚಿಕಿತ್ಸೆ ಫಲಕಾರಿಯಾಗದೆ ಮನೆಗೆ ವಾಪಸ್ಸು ಬಂದ ಮಹೇಶ್ ಕಳೆದ ಆರು ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿದ್ದಾನೆ. ಲಕ್ಷ ಲಕ್ಷ ಸಾಲ ಮಾಡಿದರೂ ಗುಣಮುಖವಾಗದ ಖಾಯಿಲೆಯಿಂದ ಬಳಲುತ್ತಿರುವ ಯುವಕನಿಗೆ ಈಗ ಸಹಾಯ ಹಸ್ತ ಬೇಕಿದೆ.

'ಒಂದೊತ್ತಿನ ಊಟಕ್ಕೂ ಕಷ್ಟವಾಗುತ್ತಿದೆ. ನನಗೆ ವಿಧವಾ ವೇತನ ಮತ್ತು ಅವನಿಗೆ ಬರುವ ಅಂಗ ವಿಕಲವೇತನದಲ್ಲಿ ಜೀವನ ಸಾಗಿಸುತ್ತಿದ್ದೇವೆ. ಅವನ ಚಿಕಿತ್ಸೆಗಾಗಿ ತಿಂಗಳಿಗೆ 4 ರಿಂದ 5 ಸಾವಿರ ಖರ್ಚು ಆಗುತ್ತದೆ. ಅದನ್ನು ಭರಿಸಲು ನನಗೆ ಆಗುತ್ತಿಲ್ಲ ಇತ್ತ ಮಗನನ್ನೇ ನೋಡಿಕೊಳ್ಳಲಾ, ಜೀವನ ಮಾಡಲು ಕೂಲಿ ಮಾಡಲಾ ? ಏನು ಮಾಡಬೇಕು ಎಂದು ದಿಕ್ಕು ತೋಚದಂತಾಗಿದೆ ಎನ್ನುತ್ತಾರೆ ಮಹೇಶನ ತಾಯಿ.

ಇನ್ನು ನನ್ನ ತಾಯಿ ನನಗಾಗಿ ಕಷ್ಟ ಪಡುತ್ತಿದ್ದಾರೆ, ಅದನ್ನ ಸಹಿಸಿಕೊಳ್ಳಲು ಸಾಧ್ಯವಿಲ್ಲ, ನನಗೆ ಬಂದಿರುವ ಖಾಯಿಲೆ ಗುಣವಾಗಲೂ ಹತ್ತಾರು ಲಕ್ಷಗಳೆ ಬೇಕು. ಅದನ್ನು ಭರಿಸುವ ಶಕ್ತಿ ನಮಗಿಲ್ಲ. ನಮ್ಮದು ಬಡತನದ ಕುಟುಂಬ, ತನ್ನ ತಾಯಿ ನಿಶ್ಯಕ್ತಳು. ಅವಳಿಗೆ ತೊಂದರೆ ಕೊಡಲು ನನ್ನಿಂದ ಸಾಧ್ಯವಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಗಳ ಮುಖಾಂತರ ರಾಜ್ಯಪಾಲರಿಗೆ ಮನವಿ ಮಾಡುತ್ತೇನೆ. ನನಗೆ ದಯಾಮರಣ ಕಲ್ಪಿಸಿ, ನನ್ನ ಅಮ್ಮನಾದರು ನೆಮ್ಮದಿಯಾಗಿರಲಿ ಎನ್ನುತ್ತಾನೆ ನತದೃಷ್ಟ ಯುವಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News