ಮೀಟರ್ ಬಡ್ಡಿ ಸಾಲಗಾರರ ಕಿರುಕುಳ ಆರೋಪ: ವ್ಯಕ್ತಿ ಆತ್ಮಹತ್ಯೆ

Update: 2019-05-10 16:36 GMT

ಮೈಸೂರು,ಮೇ.10: ಮೀಟರ್ ಬಡ್ಡಿ ಸಾಲಗಾರರ ಕಿರುಕುಳ ತಾಳಲಾರದೆ ವಾಟರ್ ಬಾಟಲ್ ವಿತರಕ ತನ್ನ ಅಂಗಡಿಯ ಮುಂದೆ ನೇಣಿಗೆ ಶರಣಾಗಿರುವ ಘಟನೆ ಬಂಡಿಪಾಳ್ಯದಲ್ಲಿ ನಡೆದಿದೆ ಎನ್ನಲಾಗಿದೆ.

ಮೃತರನ್ನು ಚೈತನ್ಯ (43) ಎಂದು ಗುರುತಿಸಲಾಗಿದೆ. ಇವರು ಬಂಡಿಪಾಳ್ಯ ಸಗಟು ಮಾರುಕಟ್ಟೆಯಲ್ಲಿ ಡೈರೆಕ್ಟರ್ ಸ್ಪೆಷಲ್ ವಾಟರ್ ಏಜೆನ್ಸಿ ನಡೆಸುತ್ತಿದ್ದು, ವ್ಯವಹಾರಕ್ಕಾಗಿ ಹಲವು ಖಾಸಗಿ ವ್ಯಕ್ತಿಗಳಿಂದ ಹೆಚ್ಚಿನ ಬಡ್ಡಿಗೆ ಸಾಲ ಪಡೆದಿದ್ದರು. ಬಂದ ಆದಾಯವನ್ನೆಲ್ಲಾ ಬಡ್ಡಿಗೆ ಕಟ್ಟುತ್ತಿದ್ದರು. ಆದರೆ ಪ್ರತಿನಿತ್ಯ ಬಡ್ಡಿ ಹೆಚ್ಚಾಗುತ್ತಲೇ ಹೋಯಿತೇ ವಿನಾ ಸಾಲ ತೀರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಮೀಟರ್ ಬಡ್ಡಿಗೆ ಸಾಲ ನೀಡಿದವರು ಮನೆ ಮತ್ತು ಅಂಗಡಿಯ ಬಳಿ ಬಂದು ಗಲಾಟೆ ಮಾಡುತ್ತಿದ್ದರು ಎನ್ನಲಾಗಿದ್ದು, ಇದರಿಂದ ಮನನೊಂದ ಚೈತನ್ಯ ನಿನ್ನೆ ಹುಟ್ಟಿದ ಹಬ್ಬ ಆಚರಿಸಿಕೊಂಡು ರಾತ್ರಿ ಅಂಗಡಿಗೆ ಬಂದು ಅಂಗಡಿಯ ಮುಂದೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ತಾನು ಯಾರ ಬಳಿ ಎಷ್ಟೆಷ್ಟು ಸಾಲ ಪಡೆದಿದ್ದೆ, ಯಾರ್ಯಾರು ತನಗೆ ಕಿರುಕುಳ ನೀಡುತ್ತಿದ್ದರು ಎಂಬ ಬಗ್ಗೆ ವಿವರವಾಗಿ ಡೈರಿಯಲ್ಲಿ ನಮೂದಿಸಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಮೈಸೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News