ಮಡಿಕೇರಿಯಲ್ಲಿ ಬಂಟರ ಸಂಘದ ಕ್ರೀಡೋತ್ಸವಕ್ಕೆ ವಿದ್ಯುಕ್ತ ಚಾಲನೆ
ಮಡಿಕೇರಿ, ಮೇ11: ಕೊಡಗು ಜಿಲ್ಲಾ ಬಂಟರ ಯುವ ಘಟಕದ ವತಿಯಿಂದ ಜಿಲ್ಲಾಮಟ್ಟದ ಮುಕ್ತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹಾಗೂ 6ನೇ ವರ್ಷದ ಬಂಟರ ಸಂಘದ ಕ್ರೀಡೋತ್ಸವಕ್ಕೆ ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ವಿದ್ಯುಕ್ತ ಚಾಲನೆ ನೀಡಲಾಯಿತು.
ಜಿಲ್ಲಾ ಬಂಟರ ಸಂಘದ ಉಪಾಧ್ಯಕ್ಷ ರವೀಂದ್ರ ರೈ ದೀಪ ಬೆಳಗಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಬಂಟರ ಯುವ ಘಟಕ ವಿಭಿನ್ನ ಚಿಂತನೆಗಳೊಂದಿಗೆ ಸಮುದಾಯದ ಸಂಘಟನೆಗೆ ಪೂರಕವಾಗಿ ಕ್ರೀಡೋತ್ಸವವನ್ನು ಆಯೋಜಿಸಿರುವುದು ಹೆಮ್ಮೆಯ ವಿಚಾರ. ಮುಂಬರುವ ದಿನಗಳಲ್ಲಿ ಇಂತಹ ವಿಭಿನ್ನ ಕಾರ್ಯಕ್ರಮಗಳು ನಡೆಯುವಂತಾಗಬೇಕೆಂದು ಆಶಿಸಿ, ಇದಕ್ಕೆ ಎಲ್ಲರೂ ತುಂಬು ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.
ಜಿಲ್ಲಾ ಸಂಘದ ಗೌರವಾಧ್ಯಕ್ಷ ಕೆ.ಆರ್. ಬಾಲಕೃಷ್ಣ ರೈ ಮಾತನಾಡಿ, ಯುವ ಘಟಕ ಆಯೋಜಿಸಿರುವ ಕ್ರೀಡೋತ್ಸವದ ಉದ್ದೇಶ ಮತ್ತು ತಯಾರಿಯ ಕುರಿತು ವಿವರಿಸಿದರು.
ಶ್ರದ್ಧಾಂಜಲಿ-ಸಭಾ ಕಾರ್ಯಕ್ರಮಕ್ಕೂ ಮೊದಲು ಕಳೆದ ಸಾಲಿನ ಪ್ರಾಕೃತಿಕ ವಿಕೋಪದಲ್ಲಿ ಮಡಿದ ಜನಾಂಗ ಬಾಂಧವರಿಗೆ ಶ್ರದ್ಧಾಂಜಲಿ ಹಾಗೂ ದೇಶಕ್ಕಾಗಿ ಮಡಿದ ವೀರ ಯೋಧರಿಗೆ ಗೌರವ ನಮನ ಸಲ್ಲಿಸಲಾಯಿತು.
ಬಂಟರ ಸಂಘದ ಜಿಲ್ಲಾಧ್ಯಕ್ಷ ಬಿ.ಡಿ.ನಾರಾಯಣ ರೈ ಧ್ವಜಾರೋಹಣ ನೇರವೇರಿಸಿದರು. ನಂತರ ಇವರು ಮತ್ತು ಉಪಾಧ್ಯಕ್ಷ ರವೀಂದ್ರ ರೈ ಅವರು ಬ್ಯಾಟಿಂಗ್ ಮಾಡುವ ಮೂಲಕ ಕ್ರಿಕೆಟ್ ಪಂದ್ಯಾಟಗಳಿಗೆ ಚಾಲನೆ ನೀಡಿದರು. ಬಳಿಕ ಬಂಟರ ಯುವ ಘಟಕ ಹಾಗೂ ಪತ್ರಕರ್ತರ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು.
ಕೊಡಗು ಜಿಲ್ಲಾ ಬಂಟರ ಯುವ ಘಟಕ ಅಧ್ಯಕ್ಷ ಶರತ್ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಉದ್ಯಮಿ ಜಯಪ್ರಕಾಶ್ ರೈ, ಬಂಟರ ಸಂಘದ ನಗರಾಧ್ಯಕ್ಷ ಕೃಷ್ಣ ಶೆಟ್ಟಿ, ತಾಲೂಕು ಅಧ್ಯಕ್ಷ ದುಶ್ಯಂತ್ ರೈ, ಸಹಕಾರ್ಯದರ್ಶಿ ಬಿ.ಸಿ.ಹರೀಶ್ ರೈ, ಕಾರ್ಯದರ್ಶಿ ವಿಠಲ್ ರೈ, ವಿರಾಜಪೇಟೆ ತಾಲೂಕು ಬಂಟರ ಸಂಘದ ಅಧ್ಯಕ್ಷ ಶಬರೀಶ್ ಶೆಟ್ಟಿ, ನಗರ ಮಹಿಳಾ ಬಂಟರ ಸಂಘದ ಉಪಾಧ್ಯಕ್ಷೆ ಸೌಮ್ಯ ಶೆಟ್ಟಿ, ಕಾರ್ಯದರ್ಶಿಗಳಾದ ರುಕ್ಮಿಣಿ, ರೇವತಿ ಶೆಟ್ಟಿ, ಖಜಾಂಜಿಗಳಾದ ಯಶೋಧ, ಮಾಲತಿ, ತಾಲೂಕು ಹಾಗೂ ವಿವಿಧ ಹೋಬಳಿ ಘಟಕದ ಪ್ರಮುಖರು ಪಾಲ್ಗೊಂಡಿದ್ದರು.