ಬಿಜೆಪಿ ಅಧಿಕಾರಕ್ಕೆ ಬರುವುದು ಬೇಡ ಅಂದವರು ಯಾರು: ಡಿಕೆಶಿ ಪ್ರಶ್ನೆ

Update: 2019-05-11 14:12 GMT

ಹುಬ್ಬಳ್ಳಿ, ಮೇ 11: ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಬಿಜೆಪಿ ನಾಯಕರು ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಹೇಳುತ್ತಲೇ ಇದ್ದಾರೆ. ಆದರೆ, ಬಿಜೆಪಿ ಸರಕಾರ ರಚಿಸಲು ಬೇಡ ಅಂದವರು ಯಾರು ಎಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.

ಶನಿವಾರ ಕುಂದಗೋಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ ಸರಕಾರ ರಚಿಸಲು ರಾಜ್ಯಪಾಲರಿಗೆ ಮನವಿ ಮಾಡಿ, ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದವರು ಯಡಿಯೂರಪ್ಪ. ಬಿಜೆಪಿ ಸರಕಾರ ರಚನೆ ಮಾಡದಂತೆ ಯಾರೂ ತಡೆದಿಲ್ಲ. ಅವರಿಗೆ ಬಹುಮತವೇ ಇಲ್ಲ ಎಂದು ಲೇವಡಿ ಮಾಡಿದರು. ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಕ್ಷೇತ್ರದಲ್ಲಿ ನೀರಿನ ಸಮಸ್ಯೆ ಇದೆ. ಹೀಗಾಗಿ ಈ ಸಮಸ್ಯೆ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದೆ. ಸಮಸ್ಯೆ ನಿವಾರಣೆಗಾಗಿ ನನ್ನನ್ನು ಭೇಟಿ ಮಾಡಿದ್ದಾರೆ. ಹೀಗಾಗಿ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಇಂದು ಸಂಜೆ ಬೆಂಗಳೂರಿಗೆ ಹೋಗಿ, ಒಪ್ಪಂದಕ್ಕೆ ಸಹಿ ಹಾಕಿ ನಾಳೆ ಪುನಃ ಕುಂದಗೋಳಕ್ಕೆ ಬರುತ್ತೇನೆ ಎಂದು ಅವರು ಹೇಳಿದರು.

ಶ್ರೀಮಂತ ಪಾಟೀಲ ಇದನ್ನು ಹೊರತುಪಡಿಸಿ ಬೇರೆ ಯಾವ ಬೇಡಿಕೆಯನ್ನು ನಮ್ಮ ಮುಂದೆ ಇಟ್ಟಿಲ್ಲ. ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತರು. ರಮೇಶ್ ಜಾರಕಿಹೊಳಿ ಜೊತೆ ಅವರು ಗುರುತಿಸಿಕೊಂಡಿಲ್ಲ. ಅವರು ಪಕ್ಷವನ್ನು ಬಿಡುವುದೆಲ್ಲ ಸುಳ್ಳು ಎಂದು ಶಿವಕುಮಾರ್ ತಿಳಿಸಿದರು.

ಕುಂದಗೋಳ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ನಮ್ರತೆಯಿಂದ ಮನೆ-ಮನೆಗೆ ತೆರಳಿ ಮನವಿ ಮಾಡುವ ಮೂಲಕ ಮತಯಾಚಿಸುತ್ತದೆ. ಭರಾಟೆಯ ಪ್ರಚಾರ ಕಾಂಗ್ರೆಸ್ ನಡೆಸುವುದಿಲ್ಲ. ಸನ್ನಡತೆಯ ಪ್ರಚಾರದ ಮೂಲಕ ಎಲ್ಲ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕುಸುಮಾ ಶಿವಳ್ಳಿ ಅವರನ್ನು ಕ್ಷೇತ್ರದ ಜನ ಗೆಲ್ಲಿಸಿ ಎಂಎಲ್ಎ ಮಾಡುತ್ತಾರೆ ಎಂದು ಶಿವಕುಮಾರ್ ಹೇಳಿದರು.

ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಂಸದರನ್ನಾಗಿ ಮಾಡುತ್ತಾರೆ. ಹೀಗಾಗಿ ಕುಂದಗೋಳ ಕ್ಷೇತ್ರ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಜನತೆ ಆತಂಕ ಪಡುವ ಅಗತ್ಯವಿಲ್ಲ ಶಿವಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ, ಮಾಜಿ ಶಾಸಕರಾದ ನಂಜಯ್ಯನಮಠ, ಕೋನರೆಡ್ಡಿ, ಎಂ.ಎಸ್.ಅಕ್ಕಿ, ಮುಖಂಡರಾದ ಹಝ್ರತ್ ಅಲಿ ಜೊಡಮನಿ, ಜಗದೀಶ್ ಉಪ್ಪಿನ, ಸುರೇಶ್‌ಗೌಡ್ರ ಪಾಟೀಲ, ಮಂಜುರೆಡ್ಡಿ, ಅರವಿಂದ ಕಟಗಿ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News