ಸಿದ್ದರಾಮಯ್ಯ ಸಿಎಂ ಆಗುವ ವಾತಾವರಣ ನಿರ್ಮಿಸಿದ್ದೇ ನಾವು: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್

Update: 2019-05-12 11:57 GMT

ಮಂಡ್ಯ, ಮೇ 12: ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ಗೆ ಸೇರಿಸಿ ಮುಖ್ಯಮಂತ್ರಿಯಾಗುವ ವಾತಾವರಣ ನಿರ್ಮಿಸಿದವರೇ ನಾವು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿದ್ದಾರೆ.

ಜೆಡಿಎಸ್‍ನವರೇ ನನ್ನನ್ನು ಪಕ್ಷದಿಂದ ತೆಗೆದರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಬಗ್ಗೆ ರವಿವಾರ ಮದ್ದೂರಿನ ಸೋಮನಹಳ್ಳಿ ಬಳಿ ಸಿಎಂ ಖಾಸಗಿ ಆಪ್ತ ಕಾರ್ಯದರ್ಶಿಯ ವಿವಾಹದ ಬೀಗರ ಔತಣಕೂಟದಲ್ಲಿ ಸುದ್ದಿಗಾರರ ಪ್ರಶ್ನೆಗೆ ವಿಶ್ವನಾಥ್ ಈ ರೀತಿ ಪ್ರತಿಕ್ರಿಯಿಸಿದರು.

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‍ಗೆ ಸೇರಿಸಿದ್ದರಿಂದ ಸಿಎಂ ಆಗುವ ವಾತಾವರಣ ನಿರ್ಮಾಣವಾಯಿತು. ಆದರೆ, ಈಗ ಅವರು ಏನೇನೋ ಹೇಳಿಕೊಳ್ಳಬಹುದು, ಹೇಳಿಕೊಳ್ಳಲಿ ಬಿಡಿ ಎಂದರು. ಇನ್ನು ಮಂಡ್ಯದಲ್ಲಿ ನಿಖಿಲ್ ಗೆಲ್ಲುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿ ಎಂದು ಹೇಳಿದರೆ ಹೇಗೆ ಸಾಧ್ಯವಾಗುತ್ತೆ ? ಕಾಂಗ್ರೆಸ್ ಶಾಸಕರು ಮತ್ತು ಸಚಿವರು ಈ ರೀತಿ ಹೇಳುವ ಮೂಲಕ ಮೈತ್ರಿ ಧರ್ಮಕ್ಕೆ ಕಂಟಕವಾಗಬಾರದು ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಸಿಎಂ ಆಗಲು ಇದು ಸೂಕ್ತ ಸಮಯ ಅಲ್ಲ. ಸುಮ್ಮನೆ ಮುಖ್ಯಮಂತ್ರಿಯಾಗಲಿ ಎಂದರೆ ಹೇಗಾಗುತ್ತದೆ. ಬೇಕಿದ್ದರೆ 2022ಕ್ಕೆ ಆಗಲಿ, ಬೇಡ ಎನ್ನುವವರು ಯಾರು. ಕಾಂಗ್ರೆಸ್‍ನವರು ಆ ರೀತಿ ಮಾತಾಡಬಾರದು ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News