ಮಡಿಕೇರಿ: ಚಿಕ್ಲಿಹೊಳೆ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಇಬ್ಬರು ಸಾವು
Update: 2019-05-12 20:10 IST
ಮಡಿಕೇರಿ, ಮೇ 12: ಚಿಕ್ಲಿಹೊಳೆ ಜಲಾಶಯದ ಹಿನ್ನೀರಿನಲ್ಲಿ ಸ್ನಾನಕ್ಕೆ ತೆರಳಿದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಪ್ರಾಣ ಕಳೆದುಕೊಂಡ ಘಟನೆ ನಡೆದಿದೆ.
ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿ ಗ್ರಾಮದ ಸ್ಕೂಲ್ ಬಾಣೆ ನಿವಾಸಿ ಸಗದೇವ ಎಂಬವರ ಪುತ್ರ ಪವನ್ (19), ಕಂಬಿಬಾಣೆ ನಿವಾಸಿ ಸುಬ್ರಮಣಿ ಎಂಬವರ ಪುತ್ರ ನಂದೀಶ(16) ಮೃತಪಟ್ಟವರು.
ಇವರಿಬ್ಬರು ಸ್ಥಳೀಯ ಮಾಗ್ಡೂರು ದೇವಸ್ಥಾನದ ಹಿಂಭಾಗದಲ್ಲಿ ಚಿಕ್ಲಿಹೊಳೆ ಜಲಾಶಯದ ಹಿನ್ನೀರಿನಲ್ಲಿ ಸ್ನಾನಕ್ಕೆ ತೆರಳಿದ ಸಂದರ್ಭ ನೀರಿನಲ್ಲಿ ಮುಳುಗುವುದನ್ನು ಗಮನಿಸಿದ ಮಹಿಳೆಯೊಬ್ಬರು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರಾದ ಸಂತೋಷ್, ಸುದಿ, ದೇವರಾಜ್, ಅವರನ್ ಎಂಬವರು ತೆಪ್ಪದ ಸಹಾಯದಿಂದ ಶವವನ್ನು ಮೇಲೆತ್ತುವಲ್ಲಿ ಯಶಸ್ವಿಯಾದರು. ಪ್ರಕರಣ ದಾಖಲಿಸಿಕೊಂಡ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರು ನಡೆಸಿದರು. ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.