ಮಾಜಿ ಸಿಎಂ ಸಿದ್ದರಾಮಯ್ಯ ಆನೆ ಇದ್ದಂತೆ: ಎಸ್.ಟಿ.ಸೋಮಶೇಖರ್

Update: 2019-05-13 14:06 GMT

ಬೆಂಗಳೂರು, ಮೇ 13: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ರೀತಿಯಲ್ಲಿ ಆನೆ ಇದ್ದಂತೆ, ಆನೆ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರೆ ನಾಯಿಗಳು ಬೊಗಳುತ್ತಿರುತ್ತವೆ ಎಂದು ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಬೆಂಬಲಿಗ ಶಾಸಕರನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಮ್ಮನ್ನು ಚಮಚಾಗಳು ಎಂದಿದ್ದಾರೆ. ಆದರೆ, ಅವರು ಅಂದುಕೊಂಡ ಮಟ್ಟದಲ್ಲಿ ನಾವಿಲ್ಲ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಯಾರ ಹೊಗಳಿಕೆ ಹಿಗ್ಗೋದು ಇಲ್ಲ, ತೆಗಳಿಕೆಗೆ ಕುಗ್ಗೋದು ಇಲ್ಲ. ವಿಶ್ವನಾಥ್ ಮಟ್ಟಕ್ಕೆ ಇಳಿದು ನಾವು ಮಾತನಾಡಲ್ಲ. ಅವರು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರು ಎಂಬುದನ್ನು ಮರೆಯಬಾರದು ಎಂದು ಸೋಮಶೇಖರ್ ಹೇಳಿದರು.

ಮುಖ್ಯಮಂತ್ರಿ ಮಾಡಿ ಎಂದು ನಾವು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಕಷ್ಟವಾದರೆ ಅವರ ದಾರಿ ಅವರು ನೋಡಿಕೊಳ್ಳಲಿ ಎಂದು ಜೆಡಿಎಸ್ ಪಕ್ಷದ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕುಪೇಂದ್ರ ರೆಡ್ಡಿ ಯಾರು? ಅವರು ಸಮ್ಮಿಶ್ರ ಸರಕಾರ ರಚನೆ ಮಾಡಿದ್ದಾರಾ ಎಂದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ನಡುವೆ ಸಮ್ಮಿಶ್ರ ಸರಕಾರದ ರಚನೆ ಕುರಿತು ಮಾತುಕತೆ ನಡೆದಿದೆ. ಈ ವಿಚಾರಗಳನ್ನೆಲ್ಲ ಮಾತನಾಡಲು ಕುಪೇಂದ್ರ ರೆಡ್ಡಿ ಯಾರು? ಇದನ್ನು ಮಾತನಾಡಲು ಕುಪೇಂದ್ರ ರೆಡ್ಡಿಗೆ ದೇವೇಗೌಡರು ಅಧಿಕಾರ ಕೊಟ್ಟಿದ್ದಾರಾ ಎಂದು ಸೋಮಶೇಖರ್ ಪ್ರಶ್ನಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News