ನೇಣು ಬಿಗಿದು ಮಹಿಳೆ ಆತ್ಮಹತ್ಯೆ
Update: 2019-05-13 17:04 GMT
ಮೈಸೂರು,ಮೇ.13: ಮೊಬೈಲ್ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸರಸ್ವತಿಪುರಂನಲ್ಲಿ ನಡೆದಿದೆ.
ಮೃತಳನ್ನು ಬೆಂಗಳೂರು ಮೂಲದ ನಿವಾಸಿ ಗೀತಾ(24)ಎಂದು ಗುರುತಿಸಲಾಗಿದೆ. ಈಕೆ ಅಕ್ಷಯ್ ಭಂಡಾರ್ ಬಳಿ ಇರುವ ಮೆಗಾ ಮೊಬೈಲ್ ಶೋ ರೂಂ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಸರಸ್ವತಿಪುರಂನಲ್ಲಿರುವ ಪಿಜಿಯಲ್ಲಿ ಉಳಿದುಕೊಂಡಿದ್ದರು. ಎರಡು ವರ್ಷದ ಹಿಂದೆ ಬೆಂಗಳೂರಿನ ನಿವಾಸಿಯೋರ್ವನನ್ನು ಪ್ರೀತಿಸಿ ವಿವಾಹವಾಗಿದ್ದು, ಆತ ಬೆಂಗಳೂರಿನಲ್ಲಿಯೇ ಉದ್ಯೋಗದಲ್ಲಿದ್ದ ಎನ್ನಲಾಗಿದೆ.
ನಿನ್ನೆ ಪಿ.ಜಿ.ಯ ತನ್ನ ರೂಮಿನಿಂದ ಎಷ್ಟು ಹೊತ್ತಾದರೂ ಹೊರಗೆ ಬಾರದೇ ಇರುವುದನ್ನು ಗಮನಿಸಿದ ಆಕೆಯ ಸ್ನೇಹಿತ ಬಾಗಿಲು ತೆರೆದು ನೋಡಿದಾಗ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ಕೂಡಲೇ ಪಿ.ಜಿ.ಯ ಮಾಲಕರಿಗೆ ಮಾಹಿತಿ ನೀಡಿದ್ದು, ಪಿ.ಜಿ.ಯ ಮಾಲಕರು ಸರಸ್ವತಿಪುರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.