ಕೊಡಗಿನಲ್ಲೂ ಬೆಳೆಯಬಹುದು ಖರ್ಜೂರ: ಕೃಷಿ ಕ್ಷೇತ್ರದ ಗಮನ ಸೆಳೆದ ಅಕ್ಬರ್
ಮಡಿಕೇರಿ, ಮೇ 13 : ಉತ್ತಮ ಗುಣಮಟ್ಟದ ಕಾಫಿ, ಕರಿಮೆಣಸು, ಏಲಕ್ಕಿ ಮತ್ತು ಕಿತ್ತಳೆ ಬೆಳೆಗೆ ಹೆಸರುವಾಸಿಯಾದ ಹಸಿರ ಪ್ರಕೃತಿ, ನಿಸರ್ಗ ರಮಣೀಯ ತಾಣದೊಂದಿಗೆ ವಿಶ್ವ ಪ್ರವಾಸೋದ್ಯಮದ ಭೂಪಟದಲ್ಲೂ ಗಮನ ಸೆಳೆದಿರುವ ಕೊಡಗು ಜಿಲ್ಲೆಯಲ್ಲಿ ಸಾಮಾನ್ಯವಾಗಿ ತಂಪು ಹವಾಮಾನ ಕಂಡು ಬರುತ್ತದೆ. ಜಿಲ್ಲೆಯ ಹವಾಗುಣಕ್ಕೆ ಅನುಗುಣವಾಗಿ ವಿವಿಧ ತಳಿಯ ಬೆಳೆ ಮತ್ತು ಹಣ್ಣುಗಳನ್ನು ಬೆಳೆಯಲಾಗುತ್ತಿದೆ. ಆದರೆ ವಿಶೇಷ ಎಂಬಂತೆ ಕೊಲ್ಲಿ ರಾಷ್ಟ್ರಗಳ ಮರುಭೂಮಿಯಲ್ಲಿ ಮಾತ್ರವೇ ಯಥೇಚ್ಚವಾಗಿ ಬೆಳೆಯುವ ಖರ್ಜೂರವನ್ನು ತಂಪಾದ ಕೊಡಗಿನಲ್ಲೂ ಬೆಳೆಯಬಹುದೆಂದು ಸಾಧಿಸಿ ತೋರಿಸುವ ಮೂಲಕ ವಿರಾಜಪೇಟೆಯ ನಿಸರ್ಗ ಬಡಾವಣೆ ನಿವಾಸಿ ಅಕ್ಬರ್ ಕೃಷಿಕರ ಗಮನ ಸೆಳೆದಿದ್ದಾರೆ.
ಇವರು ಬೆಳೆದ ಖರ್ಜೂರದ ಮರಗಳಲ್ಲಿ ತೃಪ್ತಿಯಾಗುಷ್ಟು ಫಸಲು ಬಿಟ್ಟಿದೆ. ಕೆಲವು ವರ್ಷಗಳ ಹಿಂದೆ ಅಕ್ಬರ್ ಕೆಲಸ ನಿಮಿತ್ತ ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಅಲ್ಲಿನ ನಿವಾಸಿ ಶೇಕ್ ಇರ್ಫಾನ್ ಎಂಬವರ ಮನೆಯ ಮುಂದೆ ಖರ್ಜೂರ ಬೆಳೆದಿದ್ದನ್ನು ಅಕ್ಬರ್ ಗಮನಿಸಿದ್ದರು.
ಮರುಭೂಮಿ ಮಾತ್ರವಲ್ಲದೇ, ಮನೆಯ ಮುಂದೆಯೂ ಖರ್ಜೂರದ ಮರಗಳು ಫಲವತ್ತಾಗಿ ಬೆಳೆದಿರುವುದನ್ನು ಗಮನಿಸಿದ ಅಕ್ಬರ್, ತಮ್ಮ ಊರು ವಿರಾಜಪೇಟೆಯಲ್ಲಿರುವ ಮನೆಯ ಮುಂದೆಯೂ ಖರ್ಜೂರದ ಗಿಡಗಳನ್ನು ಬೆಳೆಸಬೇಕೆಂದು ನಿರ್ಧರಿಸಿದರು. ತನ್ನ ಮನದ ಇಂಗಿತವನ್ನು ಶೇಕ್ ಇರ್ಫಾನ್ಗೆ ತಿಳಿಸಿದ ಅಕ್ಬರ್, ತಮಗೂ ಖರ್ಜೂರದ ಗಿಡಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು. ಅಕ್ಬರ್ ಅವರ ಕೋರಿಕೆಗೆ ಸಮ್ಮತಿಸಿದ ಶೇಕ್ ಇರ್ಫಾನ್, ಸುಮಾರು 12 ಖರ್ಜೂರದ ಗಿಡಗಳನ್ನು ಹಡಗಿನ ಮೂಲಕ ಸೌದಿ ಅರೇಬಿಯದಿಂದ ದಕ್ಷಿಣ ಭಾರತದ ತಮಿಳುನಾಡಿನ ಚೆನ್ನೈ ಬಂದರಿಗೆ ತಲುಪಿಸಿದ್ದರು.
11-12 ಅಡಿ ಎತ್ತರ ಮತ್ತು ಅತೀವ ಭಾರ ಹೊಂದಿದ್ದ ಖರ್ಜೂರದ ಗಿಡಗಳನ್ನು ಚೆನ್ನೈನಿಂದ ಲಾರಿಯಲ್ಲಿ ವಿರಾಜಪೇಟೆಗೆ ತಂದ ಅಕ್ಬರ್, ಅವುಗಳನ್ನು ಕ್ರೈನ್ ಮೂಲಕ ನಾಟಿ ಮಾಡಿ ಪೋಷಿಸಲು ಆರಂಭಿಸಿದ್ದರು. ದಿನದಿಂದ ದಿನಕ್ಕೆ ಜಿಲ್ಲೆಯ ಹವಾಮಾನಕ್ಕೆ ಹೊಂದಿಕೊಂಡ ಖರ್ಜೂರದ ಗಿಡಗಳು, ಒಂದೂವರೆ ವರ್ಷಗಳ ನಂತರ 14 ಅಡಿಯಿಂದ 16 ಅಡಿ ಎತ್ತರದ ಮರವಾಗಿ ಬೆಳೆದು ನಿಂತು ಎಲ್ಲರ ಅಚ್ಚರಿಗೆ ಕಾರಣವಾಯಿತು. ಇದೀಗ ಬೇಸಿಗೆಯ ಅವಧಿಯಾದ್ದರಿಂದ ಒಂದೊಂದು ಮರದಲ್ಲಿಯೂ ನಾಲ್ಕೈದು ಗೊನೆಗಳಂತೆ ಒಟ್ಟು ಆರು ಮರಗಳಲ್ಲಿ ಖರ್ಜೂರದ ಫಸಲು ನಳನಳಿಸುತ್ತಿದೆ. ಪ್ರತಿ 2 ತಿಂಗಳಿಗೊಮ್ಮೆ ಚೆನೈನಿಂದ ಕೃಷಿ ಮತ್ತು ತೋಟಗಾರಿಕಾ ತಜ್ಞರ ತಂಡ ವಿರಾಜಪೇಟೆಯಲ್ಲಿರುವ ಅಕ್ಬರ್ ಅವರ ಮನೆಗೆ ಆಗಮಿಸಿ ಖರ್ಜೂರದ ಮರಗಳ ಬೆಳವಣಿಗೆ ಮತ್ತು ಅದಕ್ಕೆ ಬೇಕಾದ ಪೋಷಕಾಂಶಗಳ ಬಗ್ಗೆ ಗಮನ ಹರಿಸುತ್ತಿದ್ದಾರೆ.
ಸಾಮಾನ್ಯವಾಗಿ ದೇಶದ ರಾಜಸ್ಥಾನ ಹೊರತುಪಡಿಸಿದರೆ ಬೇರೆ ಯಾವುದೇ ರಾಜ್ಯ ಮತ್ತು ಭೂಭಾಗದಲ್ಲಿ ಖರ್ಜೂರ ಮರ ಬೆಳೆದಿರುವುದು ಕಂಡು ಬರುವುದಿಲ್ಲ. ಅದಕ್ಕೆ ತನ್ನದೇ ಆದ ಪ್ರಾಕೃತಿಕ ಕಾರಣಗಳೂ ಇರಬಹುದು. ಆದರೆ ಮನಸ್ಸು ಮಾಡಿದರೆ ದೇಶದ ಯಾವುದೇ ಭಾಗದಲ್ಲಿ ಎಲ್ಲಾ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ಅಕ್ಬರ್ ನಿರೂಪಿಸಿದ್ದಾರೆ.