ಮೈಸೂರು: ತೋಟದ ಮನೆಯಲ್ಲಿ ವೃದ್ಧ ದಂಪತಿಗಳ ಬರ್ಬರ ಕೊಲೆ

Update: 2019-05-14 15:48 GMT

ಮೈಸೂರು,ಮೇ.14: ವೃದ್ಧ ದಂಪತಿಗಳ ಮೇಲೆ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವ ಘಟನೆ ಮೈಸೂರಿನ ನಾಗವಾಲ ಬಳಿಯ ತೋಟದ ಮನೆಯಲ್ಲಿ ನಡೆದಿದೆ.

ಮೃತ ದಂಪತಿಗಳಾದ ವೀರಣ್ಣ(80) ಅವರ ಪತ್ನಿ ಶಿವಮ್ಮ (75) ಮೃತರು ಎಂದು ಗುರುತಿಸಲಾಗಿದೆ. ಈ ಇಬ್ಬರು ಮೈಸೂರು-ಹಣಸೂರು ರಸ್ತೆಯ ನಾಗವಾಲ ಗ್ರಾಮದ ವಾಸಿಗಳು. ಇವರು ಎಂದಿನಂತೆ ತಮ್ಮ ತೋಟದ ಮನೆಯಲ್ಲಿ ಮಲಗಿದ್ದರು. ಸೋಮವಾರ ತಡರಾತ್ರಿ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಸುತ್ತಿಗೆಯಿಂದ ತಲೆಗೆ ಹೊಡೆದು ಇಬ್ಬರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ನಾಗವಾಲದಲ್ಲಿ ತಮ್ಮ ಮಗ ಹೊಸದಾಗಿ ಮನೆ ಕಟ್ಟಿದ್ದು, ಅದರ ಗೃಹಪ್ರವೇಶ ಇತ್ತೀಚೆಗೆ ನಡೆದಿತ್ತು ಎನ್ನಲಾಗಿದೆ. ಮನೆ ಕೆಲಸಕ್ಕೆಂದು ತರಲಾಗಿದ್ದ ಸೆಂಟ್ರಿಂಗ್ ಸಾಮಾನುಗಳನ್ನು ತೋಟದಲ್ಲಿ ಇಡಲಾಗಿತ್ತು. ಇದನ್ನು ನೋಡಿಕೊಳ್ಳುವ ಸಲುವಾಗಿ ವೃದ್ಧ ದಂಪತಿಗಳು ತೋಟದ ಮನೆಯಲ್ಲಿ ಮಲಗುತ್ತಿದ್ದರು ಎನ್ನಲಾಗಿದೆ.

ಮೃತರಿಗೆ ನಾಲ್ವರು ಹೆಣ್ಣು ಮಕ್ಕಳು, ಓರ್ವ ಪುತ್ರನಿದ್ದಾನೆ. 5 ಎಕರೆ ಮಾವಿನ ತೋಟವನ್ನು ಹೊಂದಿರುವ ಇವರು ಇತ್ತೀಚೆಗೆ 50 ಲಕ್ಷ ರೂ. ಗೆ ಗುತ್ತಿಗೆ ನೀಡಿದ್ದರು ಎನ್ನಲಾಗಿದೆ. ಆ ಹಣವನ್ನು ವೃದ್ದ ದಂಪತಿಗಳು ಮಕ್ಕಳಿಗೆ ಹಂಚಿಬಿಟ್ಟಿದ್ದರು. ಆ ಹಣ ಇವರ ಬಳಿ ಇದೆ ಎಂಬ ನಂಬಿಕೆಯಿಂದ ದುಷ್ಕರ್ಮಿಗಳು ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಲಾಗುತ್ತಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕೊಲೆ ಯಾಕಾಗಿ ನಡೆದಿರಬಹುದು ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಈ ಸಂಬಂಧ ಇಲವಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News