ತಡೆಯಾಜ್ಞೆ ತೆರವುಗೊಳಿಸಿದ ಹೈಕೋರ್ಟ್: ಸೊರಬ ಪ.ಪಂ ಚುನಾವಣೆ ವೇಳಾಪಟ್ಟಿ ಪ್ರಕಟಿಸಿದ ಚು.ಆಯೋಗ

Update: 2019-05-14 17:54 GMT

ಶಿವಮೊಗ್ಗ, ಮೇ 14: ಚುನಾವಣೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿರುವ ಹಿನ್ನೆಲೆಯಲ್ಲಿ, ಜಿಲ್ಲೆಯ ಸೊರಬ ಪಟ್ಟಣ ಪಂ. ಗೆ ಚುನಾವಣೆಯನ್ನು ನಡೆಸಲು ರಾಜ್ಯ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಹೊರಡಿಸಿದೆ. ಇದರಿಂದ ಚುನಾವಣಾ ಪ್ರಕ್ರಿಯೆ ಮೇಲೆ ಬಿದ್ದಿದ್ದ ಕರಿನೆರಳು ಸರಿದಂತಾಗಿದ್ದು, ಸ್ಪರ್ಧಾಕಾಂಕ್ಷಿಗಳ ರಾಜಕೀಯ ಚಟುವಟಿಕೆ ಮತ್ತೆ ಬಿರುಸುಗೊಂಡಿದೆ. 

ಜೂನ್ 1 ರಂದು ಬೆಳಿಗ್ಗೆ 7 ರಿಂದ ಸಂಜೆ 5 ರ ವರೆಗೆ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಮೇ 21 ಕೊನೆಯ ದಿನವಾಗಿದೆ. ಮೇ 22 ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ಮೇ 24 ಉಮೇದುವಾರಿಕೆ ಅರ್ಜಿ ಹಿಂಪಡೆಯಲು ಅಂತಿಮ ದಿನವಾಗಿದೆ. ಜೂನ್ 1 ರಂದು ಮತದಾನ ನಡೆಯಲಿದ್ದು, 3 ರಂದು ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಡಳಿತ ಪ್ರಕಟನೆಯಲ್ಲಿ ಮಾಹಿತಿ ನೀಡಿದೆ. 

ಮೀಸಲಾತಿ ವಿವರ: ವಾರ್ಡ್ ನಂಬರ್ 1 ನ್ನು ಹಿಂದುಳಿದ ವರ್ಗ (ಎ) ಮಹಿಳೆಯರಿಗೆ ಮೀಸಲಿರಿಸಲಾಗಿದೆ. ವಾರ್ಡ್ ನಂ.2, 3 ಹಾಗೂ 8 ಸಾಮಾನ್ಯ ವರ್ಗಗಳಿಗೆ ಮಿಸಲಿರಿಸಲಾಗಿದೆ. ವಾರ್ಡ್ ನಂ. 4 ಪರಿಶಿಷ್ಠ ಪಂಗಡ, ವಾರ್ಡ್ ನಂ. 5 ಮತ್ತು 9 ಹಿಂದುಳಿದ ವರ್ಗ (ಎ), ನಂ. 7 ಹಿಂದುಳಿದ ವರ್ಗ (ಬಿ), ವಾರ್ಡ್ ನಂ. 6, 10, 11 ಸಾಮಾನ್ಯ ಮಹಿಳೆ ಹಾಗೂ ನಂ. 12 ಪರಿಶಿಷ್ಠ ಜಾತಿಯ ಅಭ್ಯರ್ಥಿಗಳಿಗೆ ಮೀಸಲಿರಿಸಲಾಗಿದೆ.

ತಡೆಯಾಜ್ಞೆ: ಸೊರಬ ಪಟ್ಟಣ ಪಂ. ಚುನಾವಣೆಯನ್ನು ಅಮಾನತಿನಲ್ಲಿರಸಬೇಕು ಅಥವಾ ತಡೆಹಿಡಿಯಬೇಕು ಎಂದು ಕೋರಿ ಇತ್ತೀಚೆಗೆ ಕೆಲವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಸೊರಬ ಪಟ್ಟಣ ಪಂ. ಅನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಿ ಅಧಿಸೂಚನೆ ಹೊರಡಿಸಿದ ನಂತರವೇ ಚುನಾವಣೆ ನಡೆಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು. 

ಈ ಮೊದಲು ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಚುನಾವಣಾ ಪ್ರಕ್ರಿಯೆಗೆ ನಾಲ್ಕು ವಾರಗಳ ತಡೆಯಾಜ್ಞೆ ನೀಡಿತ್ತು. ವಿಚಾರಣೆ ನಂತರ ಆದೇಶವನ್ನು ಕಾಯ್ದಿರಿಸಿತ್ತು. ಈ ಕಾರಣದಿಂದ ಸೊರಬ ಪ.ಪಂ. ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗ ಸ್ಥಗಿತಗೊಳಿಸಿತ್ತು. ಈ ಸಂಬಂಧ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಬಿ.ಎಂ.ಶ್ಯಾಮಪ್ರಸಾದ್ ಅವರಿದ್ದ ರಜಾಕಾಲದ ವಿಶೇಷ ನ್ಯಾಯಪೀಠವು ಸೋಮವಾರ ಪ್ರಕಟಿಸಿದ್ದು, ಚುನಾವಣೆ ನಡೆಸಲು ವಿಧಿಸಿದ್ದ ತಡೆಯಾಜ್ಞೆ ತೆರವುಗೊಳಿಸಿ, ಅರ್ಜಿಯನ್ನು ವಜಾಗೊಳಿಸಿದೆ. 

ಸೊರಬದ ಎಂ.ಡಿ.ಉಮೇಶ್, ಜಗದೀಶ್, ಮಧುರಾಯ್ ಜಿ. ಶೇಟ್ ಎಂಬುವರು ಹೈಕೋರ್ಟ್‍ನಲ್ಲಿ ಈ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್‍ರವರು ವಾದ ಮಂಡಿಸಿದ್ದರು. 

3 ರಂದು ನಡೆಯಲಿದೆ ಮತ ಎಣಿಕೆ
ಸಾಗರ ನಗರಸಭೆ, ಶಿಕಾರಿಪುರ ಪುರಸಭೆ, ಶಿರಾಳಕೊಪ್ಪ ಪಟ್ಟಣ ಪಂ., ಹೊಸನಗರ ಪಟ್ಟಣ ಪಂ. ಗಳಿಗೆ ನಡೆಯುವ ಚುನಾವಣೆಯ ಮತ ಎಣಿಕೆ ಕಾರ್ಯವು ಈ ಮೊದಲು ಮೇ 31 ರಂದು ನಿಗದಿಗೊಳಿಸಲಾಗಿತ್ತು. ಇದನ್ನು ಜೂನ್ 3 ಕ್ಕೆ ಮುಂದೂಡಲಾಗಿದೆ. ತಾಲೂಕು ಕೇಂದ್ರ ಸ್ಥಾನಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್‍ರವರು ಪ್ರಕಟನೆಯಲ್ಲಿ ಸ್ಪಷ್ಟಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News