ಹುಟ್ಟುಹಬ್ಬದ ಪ್ರಯುಕ್ತ ಡಿಕೆಶಿಗೆ ಚಿನ್ನದ ಉಂಗುರ ನೀಡಿದ ಶಿವಾಚಾರ್ಯ ಶ್ರೀ

Update: 2019-05-15 16:17 GMT

ಹುಬ್ಬಳ್ಳಿ, ಮೇ 15: ಮುಕ್ತಿ ಮಂದಿರ ಪವಿತ್ರವಾದ ಕ್ಷೇತ್ರ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿದ ಕ್ಷೇತ್ರ. ಇಲ್ಲಿ ನನ್ನ ಇಷ್ಟಾರ್ಥ ಬೇಡಿಕೊಂಡಿದ್ದೇನೆ. ಕುಂದಗೋಳ ಜನ ನನ್ನ ಕೈ ಬಿಡಲ್ಲ ಎಂದು ಜಲಸಂಪನ್ಮೂಲ, ಕನ್ನಡ ಮತ್ತು ಸಂಸ್ಕೃತಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಬುಧವಾರ ತಮ್ಮ 58ನೇ ಜನ್ಮದಿನದ ಪ್ರಯುಕ್ತ ಮುಕ್ತಿ ಮಂದಿರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರ ಜತೆ ಮಾತನಾಡಿದ ಅವರು, ನನಗೆ ಇಷ್ಟವಾದಂತಹ ಕ್ಷೇತ್ರಕ್ಕೆ ಬಂದು ಆಶೀರ್ವಾದ ಪಡೆದುಕೊಂಡಿದ್ದೇನೆ. ಇದೊಂದು ಪವಿತ್ರ ಕ್ಷೇತ್ರ. ದೇವಸ್ಥಾನಕ್ಕೆ ಆಗಮಿಸಿ ನನ್ನ ಇಷ್ಟಾರ್ಥಗಳನ್ನು ಕೇಳಿಕೊಂಡಿದ್ದೇನೆ. ಕುಂದಗೋಳ ಕ್ಷೇತ್ರದ ಜನ ನಮ್ಮನ್ನ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ.
ಇದುವರೆಗೂ ಮೈತ್ರಿ ಸರಕಾರದಲ್ಲಿ ಅಭದ್ರವಾಗುವ ಯಾವ ಘಟನೆಯೂ ನಡೆದಿಲ್ಲ. ಏನೇನು ಹೇಳಬೇಕು ಎನ್ನುವುದನ್ನು ಸಿದ್ಧರಾಮಯ್ಯ, ಕುಮಾರಸ್ವಾಮಿ ಇಬ್ಬರು ಹೇಳಿದ್ದಾರೆ. ಈ ಬಗ್ಗೆ ಇತರರ ಮಾತು ಅಷ್ಟು ಮುಖ್ಯವಾಗಲ್ಲ ಎಂದು ಅವರು ಹೇಳಿದರು.

ಹುಟ್ಟುಹಬ್ಬದ ಪ್ರಯುಕ್ತ ಮುಕ್ತಿ ಮಂದಿರ ದೇವಾಲಯಕ್ಕೆ ಆಗಮಿಸಿದ ಸಚಿವ ಡಿಕೆ ಶಿವಕುಮಾರ್‌ಗೆ ವಿಮಲ ರೇಣುಕಾ ಶಿವಾಚಾರ್ಯ ಶ್ರೀಗಳು ಚಿನ್ನದ ಉಂಗುರ ಹಾಕಿ ಆಶೀರ್ವಾದ ಮಾಡಿದರು. ಈ ವೇಳೆ ಪೂರ್ಣ ಕುಂಭ ಹೊತ್ತ ನೂರಾರು ಮಹಿಳೆಯರು, ಅಭಿಮಾನಿಗಳಿಂದ ಡಿಕೆಶಿ ಅವರಿಗೆ ಅದ್ಧೂರಿ ಸ್ವಾಗತ ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News