ಹಾಸನ: ಮಚ್ಚಿನಿಂದ ಕೊಚ್ಚಿ ಉದ್ಯಮಿಯ ಕೊಲೆ

Update: 2019-05-16 16:03 GMT
ಕೊಲೆಯಾದ ಅಪ್ಪಣ್ಣ ಗೌಡ

ಹಾಸನ: ಗ್ರಾನೈಟ್ ಉದ್ಯಮಿ ಓರ್ವನನ್ನು ನಗರದ ಸಮೀಪ ಮನೆಯೊಂದರಲ್ಲಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತಡರಾತ್ರಿ ನಡೆದಿದ್ದು, ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ನಗರದ ತಣ್ಣೀರುಹಳ್ಳ ದೊಟ್ಟ ಮಂಡಿಗನಹಳ್ಳಿ ಬಳಿ ಸುಭಾಷ್ ನಗರದಲ್ಲಿ ವಾಸವಾಗಿರುವ ಶ್ರೀ ರಂಗನಾಥ ಗ್ರಾನೈಟ್ ಮಾಲಕ ಅಪ್ಪಣ್ಣಗೌಡ (45) ಕೊಲೆಯಾದ ವ್ಯಕ್ತಿ. ಕಳೆದ ರಾತ್ರಿ ತನ್ನ ಕಾರು ಚಾಲಕ ಹಾಗೂ ರೈಟರ್ ನೊಂದಿಗೆ ಮನೆಗೆ ಬಂದು, ಮನೆಯಲ್ಲಿ ಮಲಗಿದ್ದ ವೇಳೆ ಅವರ ತಲೆಗೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಗುರುವಾರ ಬೆಳಗ್ಗೆ ತುಂಬಾ ಸಮಯವಾದರೂ ಮನೆ ಮಾಲಕ ಅಪ್ಪಣ್ಣಗೌಡ ಮನೆಯಿಂದ ಹೊರಗೆ ಬಾರದಿದ್ದ ಹಿನ್ನೆಲೆಯಲ್ಲಿ ಕಾರು ಚಾಲಕ ಹಾಗೂ ರೈಟರ್ ಕಿಟಕಿಯಿಂದ ನೋಡಿದ ವೇಳೆ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಕೊಲೆಗಾರರು ಅಪ್ಪಣ್ಣಗೌಡ ಮಲಗಿದ್ದ ಬೆಡ್ ರೂಂ ಲಾಕ್ ಮಾಡಿದ್ದು. ಬಳಿಕ ಮನೆಯ ಎಲ್ಲಾ ಬಾಗಿಲುಗಳಿಗೆ ಬೀಗ ಹಾಕಿ ಬೀಗದ ಕೀಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಕೊಲೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಹಾಸನ ನಗರ ಠಾಣೆ ಪೊಲೀಸರು ಹರಸಾಹಸ ಪಟ್ಟು ಮನೆಯ ಮೇಲ್ಚಾವಣಿಯಿಂದ ಮನೆಯೊಳಗೆ ಪ್ರವೇಶಿಸಿದರು.

ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಅಪ್ಪಣ್ಣಗೌಡರ ಕೊಲೆ ಬಗ್ಗೆ ಪೊಲೀಸರು, 'ಪರಿಚಯಸ್ಥರೇ ಕೊಲೆ ಮಾಡಿರುವ ಸಾಧ್ಯತೆ ಹೆಚ್ಚಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಕೊಲೆಯಾಗಿರುವ ಅಪ್ಪಣ್ಣಗೌಡರಿಗೆ ಇಬ್ಬರು ಪತ್ನಿಯರಿದ್ದು, ನಾಲ್ವರು ಮಕ್ಕಳಿದ್ದಾರೆ. ಮೊದಲ ಪತ್ನಿ ಬೆಂಗಳೂರಿನಲ್ಲಿದ್ದರೆ ಎರಡನೇ ಪತ್ನಿ ಅಪ್ಪಣ್ಣಗೌಡರೊಂದಿಗೆ ವಾಸವಾಗಿದ್ದರೆನ್ನಲಾಗಿದೆ. ಕೊಲೆ ನಡೆದ ವೇಳೆ ಮನೆಯಲ್ಲಿ ಯಾರೊಬ್ಬರು ಇಲ್ಲದಿರುವುದು ಸಹ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು. ಅವರ ಪತ್ನಿ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಈ ಘಟನೆ ನಡೆದಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್ ಸಿಂಗ್ ರಾಥೋಡ್ ಆಗಮಿಸಿ ಪರಿಶೀಲನೆ ನಡೆಸಿದರು. ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ವೃತ್ತ ನಿರೀಕ್ಷಕ ಸತ್ಯನಾರಾಯಣ್ , ಸಬ್ ಇನ್ಸ್ ಪೆಕ್ಟರ್ ಪ್ರಮೋದ್ ಸೇರಿದಂತೆ ಬೆರಳಚ್ಚು ತಜ್ಞರು ಇತರರು ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದರು. ಪೊಲೀಸರು ಮನೆಯ ಸಿಸಿ ಕ್ಯಾಮರಾ ಪರಿಶೀಲಿಸುತ್ತಿದ್ದು, ಶೀಘ್ರದಲ್ಲಿಯೇ ಕೊಲೆಗಡುಕರನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News