ಸ್ಕೂಟರ್ ಗೆ ಖಾಸಗಿ ಬಸ್ ಢಿಕ್ಕಿ: ಇಬ್ಬರು ಸಾವು

Update: 2019-05-19 17:08 GMT

ಮಳವಳ್ಳಿ, ಮೇ 19: ಪಟ್ಟಣದ ಹೊರವಲಯದ ಮದ್ದೂರು-ಮಳವಳ್ಳಿ ಮುಖ್ಯರಸ್ತೆಯ ಕೆರೆ ಏರಿಯ ಮೇಲೆ ಶನಿವಾರ ರಾತ್ರಿ ಸ್ಕೂಟರ್ ಗೆ ಖಾಸಗಿ ಬಸ್ ಢಿಕ್ಕಿ ಹೊಡೆದು ಗಾಯಗೊಂಡಿದ್ದ ಇಬ್ಬರು ವ್ಯಕ್ತಿಗಳು ಮಂಡ್ಯ ಮತ್ತು ಮೈಸೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಪಟ್ಟಣದ ಗಂಗಮತ ಬಡಾವಣೆಯ ಶಿವು(40), ನಾರಾಯಣ(45) ಮೃತರು. ಇಬ್ಬರು ಶನಿವಾರ ರಾತ್ರಿ 10 ಗಂಟೆ ಸಮಯದಲ್ಲಿ ಮಲ ವಿಸರ್ಜನೆಗೆಂದು ಸ್ಕೂಟರ್ ನಲ್ಲಿ ತೆರಳಿದ್ದರು. ಪಟ್ಟಣದ ಹೊರವಲಯದ ಕೆರೆ ಏರಿಯ ಪಕ್ಕದಲ್ಲಿರುವ ನಾಲೆ ರಸ್ತೆಗೆ ಸ್ಕೂಟರ್ ತಿರುವು ಪಡೆಯುತ್ತಿದ್ದಾಗ ಬೆಂಗಳೂರಿನಿಂದ ಮಳವಳ್ಳಿ ಕಡೆಗೆ ಬರುತ್ತಿದ್ದ ಖಾಸಗಿ ಬಸ್ ಸ್ಕೂಟರ್ ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರ ತಲೆಗೆ ತೀವ್ರವಾದ ಪೆಟ್ಟುಬಿದ್ದಿದ್ದು, ತಕ್ಷಣವೇ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.

ನಂತರ ಶಿವು ಎಂಬುವರನ್ನು ಮಂಡ್ಯ ಮಿಮ್ಸ್, ನಾರಾಯಣ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ. ಶನಿವಾರ ತಡರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಶಿವು ಮತ್ತು ನಾರಾಯಣ ಮೃತಪಟ್ಟಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್‍ನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News