ಜೆಡಿಎಸ್ ನಾಯಕರು ಸುಮಲತಾಗೆ ಬೆಂಬಲ ಕೊಟ್ಟಿದ್ದಕ್ಕೆ ಸಾಕ್ಷಿ ಇದೆ: ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ

Update: 2019-05-19 17:11 GMT

ಮಳವಳ್ಳಿ, ಮೇ 19: ಮಂಡ್ಯ ಜಿಲ್ಲೆಯ ಜೆಡಿಎಸ್ ಕೆಲ ನಾಯಕರು ಪಕ್ಷೇತರ ಅಭ್ಯರ್ಥಿ ಸುಮಲತಾರಿಗೆ ಬೆಂಬಲ ಕೊಟ್ಟಿದ್ದು, ಎಲ್ಲದಕ್ಕೂ ಸಾಕ್ಷಿ ಇದೆ.  ಮುಂದಿನ ದಿನಗಳಲ್ಲಿ ಇದೆಲ್ಲವೂ ಚರ್ಚೆಗೆ ಬರಲಿವೆ ಎಂದು ಮಾಜಿ ಸಚಿವ ಪಿ.ಎಂ ನರೇಂದ್ರಸ್ವಾಮಿ ಹೇಳಿದ್ದಾರೆ.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರ್ಯಾರು ಕುಮಾರಸ್ವಾಮಿಯವರಿಗೆ ಮೋಸ ಮಾಡಿದ್ದಾರೆ. ದೇವೇಗೌಡರ ಹೆಸರೇಳುತ್ತಿದ್ದವರು ಯಾರು ಎಲ್ಲಿ ಮೋಸ ಮಾಡಿದ್ದಾರೆಂದು ಈಗಾಗಲೇ ಚರ್ಚೆಗೆ ಬರುತ್ತಿದೆ, ಮಂಡ್ಯದಲ್ಲಿ ಏನೇನು ನಡೆದಿದೆ ಎಲ್ಲವೂ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ತಿಳಿಸಿದರು.

ಕೆಪಿಸಿಸಿ ಉಚ್ಚಾಟಿತ ಸದಸ್ಯ ಸಚ್ಚಿದಾನಂದ ಕೈ ಪಕ್ಷದ ಪರಾಜಿತ ನಾಯಕರು ಸುಮಲತಾ ಪರ ಕೆಲಸ ಮಾಡಿದ್ದಾರೆಂಬ ವಿಚಾರವಾಗಿ ಆರೋಪ ಮಾಡುವುದಕ್ಕೂ ದಾಖಲೆಗಳು ನೀಡಬೇಕು. ನಾನು ತಟಸ್ಥನಾಗಿದ್ದೆ, ಈ ಬಗ್ಗೆ  ನಮ್ಮ ಕಾಂಗ್ರೆಸ್ ವರಿಷ್ಠರಿಗೂ ಸ್ವಷ್ಟಪಡಿಸಿದ್ದೇನೆ. ಅವರ ವೈಯಕ್ತಿಕ ವಿಚಾರಗಳಿಗೆ ನಾನು ಬೆಲೆ ಕೊಡುವುದಿಲ್ಲ ಎಂದರು.

ಲೋಕಸಭಾ ಚುನಾವಣೆಯ ತೀರ್ಪು ಜನರ ತೀರ್ಪಾಗಿರುತ್ತದೆ ಎಂದ ಅವರು, ಸುಮಲತಾ ಪರ ಕೆಲಸ ಮಾಡಿಲ್ಲ ಅಂತ  ಹೇಳುವುದಾದರೇ ಮಹದೇಶ್ವರನ ಮೇಲೆ ಆಣೆ ಮಾಡಿ ಎಂದು ಶಾಸಕ ಅನ್ನದಾನಿ ಹೇಳಿರುವ ವಿಷಯಕ್ಕೆ ಪ್ರತಿಕ್ರಿಯಿಸಿದ ನರೇಂದ್ರಸ್ವಾಮಿ, ಯೋಗ್ಯರು ಮಾತನಾಡಿದಾಗ ಮಾತ್ರ ಉತ್ತರ ಕೊಡುತ್ತೇನೆ, ನಾನು ಅಂತವರಿಗೆ ಉತ್ತರ ಕೊಡುವ ಆಗತ್ಯವಿಲ್ಲ ಎಂದು ತಿಳಿಸಿದರು.

ನನ್ನ ಪಕ್ಷದ ಬಗ್ಗೆ ಮತ್ತು ನನ್ನ ತೀರ್ಮಾನದ ಬಗ್ಗೆಯಾಗಲಿ ಪ್ರಶ್ನೆ ಮಾಡುವುದಕ್ಕೆ ಅತನಿಗೆ ಯಾವುದೇ ಅರ್ಹತೆ ಇಲ್ಲ. ನಾನಂತೂ ಸ್ವಷ್ಟಪಡಿಸಿದ್ದೇನೆ, ನಾನೊಬ್ಬ ಸ್ವಾಭಿಮಾನಿ. ಸ್ವಾಭಿಮಾನಕ್ಕೆ ದಕ್ಕೆ ತರುವಂತಹ ಯಾವುದೇ ಕೆಲಸ ಮಾಡಲ್ಲ ಎಂದು ವಿವರಿಸಿದರು.

ಜೆಡಿಎಸ್ ಪಕ್ಷ 37 ಸ್ಥಾನ ಪಡೆದಿದ್ದರೂ ಕಾಂಗ್ರೆಸ್ ವರಿಷ್ಠ ರಾಹುಲ್‍ಗಾಂಧಿ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಬಾರದು ಎಂಬ ಉದೇಶದಿಂದ ಮುಖ್ಯಮಂತ್ರಿ ಸ್ಥಾನವನ್ನು ಕುಮಾರಸ್ವಾಮಿಗೆ ನೀಡಿದ್ದರು. ಈಗ ಕಾಂಗ್ರೆಸ್‍ನವರು ಸಹಕಾರ ನೀಡುತ್ತಿಲ್ಲ ಎಂಬ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದ ಅವರು, ನಾನು ಸಿದ್ದರಾಮಯ್ಯರವರ ಅಭಿಮಾನಿಯಾಗಿದ್ದು, ಅವರ ಅಡಳಿತ ಅವಧಿಯಲ್ಲಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರಿಂದ ಸಿದ್ದರಾಮಯ್ಯರವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂಬುದು ಜನರ ಕೂಗಾಗಿದೆ, ಅದರಲ್ಲಿ ನಾನೂ ಒಬ್ಬನಾಗಿದ್ದೇನೆಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News