'ಮಕ್ಕಳಾಗುವ ವರ ನೀಡುತ್ತೇನೆ' ಎಂದು ವಂಚಿಸುತ್ತಿದ್ದ ವ್ಯಕ್ತಿಯ ಬಂಧನ
ಮೈಸೂರು,ಮೇ.20: ಮೈಮೇಲೆ ದೇವರು ಬರುತ್ತದೆ. ಮಕ್ಕಳಿಲ್ಲದ ಮಹಿಳೆಯರಿಗೆ ಮಕ್ಕಳಾಗುವಂತಹ ವರ ನೀಡುವೆ ಎಂದು ಹೇಳಿ ವಂಚಿಸುತ್ತಿದ್ದ ಶನಿಮಹಾತ್ಮ ಗುಡ್ಡಪ್ಪನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ನೆಲ್ಲಿನಾಥಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. 22 ವರ್ಷದ ವೆಂಕಟೇಶ ನಾಯಕ ಎಂಬಾತನೇ ಮಹಿಳೆಯರಿಗೆ ವಂಚಿಸಿ ಇದೀಗ ಪೊಲೀಸರ ಅತಿಥಿಯಾಗಿರುವ ನಕಲಿ ಗುಡ್ಡಪ್ಪ. ಈತ ಪಿಯುಸಿ ಫೇಲಾಗಿದ್ದು, ತನ್ನ ಮೈಮೇಲೆ ದೇವರು ಬರುತ್ತದೆ ಎಂದು ಹೇಳಿ ಅಮಾಯಕ ಜನರನ್ನು ವಂಚಿಸುತ್ತಿದ್ದ ಎನ್ನಲಾಗಿದೆ.
ಮಕ್ಕಳಿಲ್ಲದ ಮಹಿಳೆಯರಿಗೆ ಮಕ್ಕಳಾಗುವಂತಹ ವರವನ್ನು ನೀಡುವೆ. ತನ್ನ ಜೊತೆ ಒಂದು ದಿನ ಧರ್ಮಸ್ಥಳಕ್ಕೆ ಬಂದು ಉಳಿದರೆ ಮಕ್ಕಳಾಗುತ್ತವೆ ಎಂದು ನಂಬಿಸಿ ಮೋಸ ಮಾಡಲು ಗುಡ್ಡಪ್ಪ ಮುಂದಾಗಿದ್ದ. ಇದೀಗ ಮಹಿಳೆಯ ಮನೆಯಲ್ಲಿದ್ದ ವೆಂಕಟೇಶನನ್ನು ಗ್ರಾಮಸ್ಥರು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಜಯಪುರ ಪೊಲೀಸರು ಬಂದು ನಕಲಿ ಗುಡ್ಡಪ್ಪನನ್ನು ವಶಕ್ಕೆ ಪಡೆದಿದ್ದಾರೆ.