ಸರಕಾರಕ್ಕೆ ಒಂದು ವರ್ಷ: ಮುಖ್ಯಮಂತ್ರಿ ಕುಮಾರಸ್ವಾಮಿಯಿಂದ ಸಂದೇಶ

Update: 2019-05-22 16:22 GMT

ಬೆಂಗಳೂರು, ಮೇ 22: ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯ ಹೊಂಗನಸಿನೊಂದಿಗೆ ನಮ್ಮ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದು ಒಂದು ವರ್ಷವಾಗಿದ್ದು, ಈ ಅವಧಿಯಲ್ಲಿ ನಾವು ಮಂಡಿಸಿದ ಎರಡು ಆಯವ್ಯಯಗಳು ನಮ್ಮ ಸರಕಾರದ ಒಲವು ನಿಲುವುಗಳು ಸಾಗಬೇಕಾದ ಹಾದಿಯನ್ನು ಸ್ಪಷ್ಟಪಡಿಸಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಈ ಅವಧಿಯಲ್ಲಿ ನಾವು ರೂಪಿಸಿರುವ ಕಾರ್ಯಕ್ರಮಗಳು ಜನರಲ್ಲಿ ಜನಪರ ಸರಕಾರ, ರೈತರ ಪರವಾದ ಸರಕಾರ, ಎಲ್ಲ ವರ್ಗದವರ ಆಶೋತ್ತರಗಳಿಗೆ ಸ್ಪಂದಿಸುವ ಸರಕಾರ ಎಂಬ ಭಾವನೆ ಮೂಡಿಸಿರುವುದು ತೃಪ್ತಿ ತಂದಿದೆ. ಜೊತೆಗೆ ನಮ್ಮ ಮುಂದಿನ ನಡೆಗೆ ಸ್ಫೂರ್ತಿಯೂ ಆಗಿದೆ ಎಂದು ತಿಳಿಸಿದ್ದಾರೆ.ರೈತರ ನೋವಿಗೆ ಸ್ಪಂದಿಸಿದ ನಮ್ಮ ಮೈತ್ರಿ ಸರಕಾರ ಈ ನಿಟ್ಟಿನಲ್ಲಿ ಕೆಲವು ಮಹತ್ವಪೂರ್ಣ ಹೆಜ್ಜೆಗಳನ್ನಿಟ್ಟಿದೆ. ಕೃಷಿ ಸಾಲ ಮನ್ನಾ ಯೋಜನೆಯನ್ನು ಅತ್ಯಂತ ಪಾರದರ್ಶಕವಾಗಿ ಜಾರಿಗೊಳಿಸಲಾಗುತ್ತಿದ್ದು, ಈಗಾಗಲೇ 15.5 ಲಕ್ಷ ರೈತರ ಸಾಲ ಮನ್ನಾ ಮಾಡಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಎಲ್ಲ ಅರ್ಹ ರೈತರಿಗೂ ಈ ಸೌಲಭ್ಯ ದೊರೆಯಲಿದೆ. ಇದರೊಂದಿಗೆ ಇಸ್ರೇಲ್ ಮಾದರಿ ಕಷಿ, ಸಾವಯವ ಕೃಷಿಗೆ ಒತ್ತು, ರೈತ ಸಲಹಾ ಸಮಿತಿ ಸ್ಥಾಪನೆ ಮತ್ತಿತರ ಉಪಕ್ರಮಗಳು ರೈತರಲ್ಲಿ ಹೊಸ ಭರವಸೆ ಮೂಡಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನಗಳು. ಮುಂದಿನ ದಿನಗಳಲ್ಲಿಯೂ ಇಂತಹ ಹಲವಾರು ಉಪಕ್ರಮಗಳ ಮೂಲಕ ರೈತರ ಹೆಗಲಿಗೆ ಹೆಗಲು ಕೊಟ್ಟು ಮುನ್ನಡೆಯುವ ಆಶಯ ನಮ್ಮದು. ಅಂತೆಯೇ ಕೈಗಾರಿಕೆಗಳ ಮೂಲಕ ಉದ್ಯೋಗ ಸಷ್ಟಿ, ಬೆಂಗಳೂರು ನಗರ, ಎರಡನೆ ಹಂತದ ನಗರಗಳ ಅಭಿವೃದ್ಧಿ, ನಾಡಿನ ಮೂಲಸೌಕರ್ಯ ಅಭಿವೃದ್ಧಿಗೆ ಉತ್ತೇಜನ ನೀಡುವ ಮೂಲಕ ರಾಜ್ಯದ ಆರ್ಥಿಕ ಅಭಿವೃದ್ಧಿ ಉತ್ತಮಪಡಿಸುವತ್ತ ಅಡಿಯಿಟ್ಟಿದ್ದೇವೆ ಎಂದರು.

ಶಾಲೆಗಳ ಮೂಲಸೌಕರ್ಯಕ್ಕೆ ಆದ್ಯತೆ, ಶಿಕ್ಷಣದ ಗುಣಮಟ್ಟದ ಹೆಚ್ಚಳಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಆಶಾದಾಯಕ ಬೆಳವಣಿಗೆಯನ್ನೂ ಸಾಧಿಸಿದ್ದೇವೆ. ಕಡು ಬಡವರಿಗೂ ಅತ್ಯುತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ ನಿರಂತರವಾಗಿ ಮುಂದುವರಿದಿದೆ. ಸಾಮಾಜಿಕ ವಲಯದಲ್ಲಿಯೂ ನಮ್ಮ ಕಳಕಳಿ, ಕಾರ್ಯಕ್ರಮಗಳ ರೂಪು ತಳೆದು ದಮನಿತರ ಬದುಕು ಹಸನುಗೊಳಿಸಲು ಮುಂದಾಗಿದೆ. ನಮ್ಮ ಮಿತ್ರ ಪಕ್ಷ ತನ್ನ ಆಡಳಿತಾವಧಿಯಲ್ಲಿ ಜಾರಿಗೊಳಿಸಿರುವ ಮಹತ್ವಾಕಾಂಕ್ಷಿ ಹಾಗೂ ಜನಪ್ರಿಯ ಯೋಜನೆಗಳನ್ನೂ ಸಹ ಮುಂದುವರೆಸಿಕೊಂಡು ಜನಪರ ಆಡಳಿತದ ಹೊಸ ಮಾದರಿ ಸೃಷ್ಟಿಸುವತ್ತ ಮುನ್ನಡೆದಿದ್ದೇವೆ ಎಂದು ಹೇಳಿದರು.

ಪ್ರಕೃತಿ ಮಾತೆಯ ಮುನಿಸಿನಿಂದ ನಾಡು ಪ್ರವಾಹ, ಭೂಕುಸಿತ ಹಾಗೂ ತೀವ್ರ ಬರದಂತಹ ವೈರುಧ್ಯವನ್ನು ಈ ವರ್ಷ ನಮ್ಮ ನಾಡು ಎದುರಿಸಿದೆ. ಈ ಪರಿಸ್ಥಿತಿಯನ್ನು ನಮ್ಮ ಸರಕಾರ, ಕೇಂದ್ರ ರಾಜ್ಯ ಸರಕಾರಗಳ ವಿವಿಧ ಇಲಾಖೆಗಳ ನೆರವಿನೊಂದಿಗೆ ಯಶಸ್ವಿಯಾಗಿ ನಿರ್ವಹಿಸಿದೆ. ಕಳೆದ ಎರಡು ತಿಂಗಳಿನಿಂದ ಚುನಾವಣಾ ನೀತಿ ಸಂಹಿತೆ ಘೋಷಣೆಯಾದ ನಂತರವೂ ಅಧಿಕಾರಿಗಳು ಬರ ಪರಿಸ್ಥಿತಿಯನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಯನ್ನು ಸಲ್ಲಿಸಿದರು. ಈ ನಿಟ್ಟಿನಲ್ಲಿ ನಮ್ಮ ಸರಕಾರವನ್ನು ಬೆಂಬಲಿಸಿ ಸಹಕರಿಸಿದ ನಾಡಿನ ಜನತೆಗೆ, ಸಚಿವ ಸಂಪುಟದ ಎಲ್ಲ ಸಹೋದ್ಯೋಗಿಗಳಿಗೆ, ನನ್ನ ಮಾರ್ಗದರ್ಶಕರೂ ಆದ ನನ್ನ ತಂದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ, ಮಿತ್ರ ಪಕ್ಷದ ನೇತಾರರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಸಿದ್ದರಾಮಯ್ಯನವರಿಗೆ, ಎಲ್ಲ ಜನಪ್ರತಿನಿಧಿಗಳಿಗೆ ಹಾಗೂ ಎಲ್ಲ ಅಧಿಕಾರಿ ವಂದದವರಿಗೆ ನನ್ನ ಹತ್ಪೂರ್ವಕ ಕತಜ್ಞತೆಗಳು. ನಿಮ್ಮೆಲ್ಲರ ಸಹಕಾರ, ಸ್ಫೂರ್ತಿ ನಮ್ಮ ಸರಕಾರದ ಮುಂದಿನ 4 ವರ್ಷಗಳ ಅವಧಿಯಲ್ಲಿ ಹೀಗೇ ಮುಂದುವರೆಯಲಿ. ನಾಡಿನ ಪ್ರಗತಿಗೆ ಕೈಜೋಡಿಸಿ ದುಡಿಯೋಣ. ಕಲ್ಯಾಣ ಕರ್ನಾಟಕದ ಆಶಯ, ಸಾಕಾರಗೊಳಿಸೋಣ ಎಂದು ಸಂದೇಶದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News