ಸ್ವಾಭಿಮಾನಿ ಮಂಡ್ಯದ ಜನರ ಗೆಲುವು: ಸುಮಲತಾ ಅಂಬರೀಷ್
ಬೆಂಗಳೂರು, ಮೇ 23: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿನ ಗೆಲುವು, ಅಂಬರೀಷ್ ಹಾಗೂ ಸ್ವಾಭಿಮಾನಿ ಮಂಡ್ಯದ ಜನರ ಗೆಲುವಾಗಿದೆ ಎಂದು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸುಮಲತಾ ಅಂಬರೀಷ್ ಪ್ರತಿಕ್ರಿಯಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ ಅವರು, ಅಂಬರೀಷ್ ಸಂಪಾದಿಸಿರುವ ಪ್ರೀತಿ, ಜನರ ಆಶೀರ್ವಾದದಿಂದ ನನಗೆ ಈ ಗೆಲುವು ಸಿಕ್ಕಿದೆ. ನಾನು ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಕೈಗೊಂಡಿದ್ದು, ದೊಡ್ಡ ಸಾಹಸ ಎಂಬುದು ಗೊತ್ತಿತ್ತು. ನಾನು ಆಯ್ಕೆ ಮಾಡಿಕೊಂಡಿರುವ ಮಾರ್ಗ ಸರಿಯಾಗಿದೆ ಎಂಬ ಆತ್ಮವಿಶ್ವಾಸ ನನ್ನಲ್ಲಿತ್ತು ಎಂದು ಅವರು ಹೇಳಿದ್ದಾರೆ.
ಇಂತಹ ಕಠಿಣ ಪರಿಸ್ಥಿತಿಯಲ್ಲಿ ಎಲ್ಲ ಸವಾಲುಗಳನ್ನು ಎದುರಿಸಿ, ನನ್ನ ಜೊತೆಯಲ್ಲಿ ನಿಂತಿದ್ದವರನ್ನು ಯಾವುದೇ ಕಾರಣಕ್ಕೂ ಮರೆಯಲು ಸಾಧ್ಯವಿಲ್ಲ. ಪ್ರತಿಯೊಬ್ಬ ಮತದಾರರು, ಕಾರ್ಯಕರ್ತರು, ಮುಖಂಡರು ಸೇರಿದಂತೆ ಮಂಡ್ಯ ಹಾಗೂ ಇಡೀ ರಾಜ್ಯದೆಲ್ಲೆಡೆ ನನ್ನ ಗೆಲುವಿಗೆ ಹಾರೈಸಿದ ಪ್ರತಿಯೊಬ್ಬರಿಗೂ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದು ಸುಮಲತಾ ಅಂಬರೀಷ್ ತಿಳಿಸಿದ್ದಾರೆ.