ಸುಮಲತಾ ಭರ್ಜರಿ ಗೆಲುವು: ರೈತಸಂಘ, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ವಿಯೋತ್ಸವ

Update: 2019-05-23 17:41 GMT

ಪಾಂಡವಪುರ, ಮೇ 23: ಸುಮಲತಾ ಅಂಬರೀಷ್ ಅವರ ಭರ್ಜರಿ ಗೆಲುವಿನ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆಗಳಲ್ಲಿ ಕಾಂಗ್ರೆಸ್, ರೈತಸಂಘ ಹಾಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.

ರೈತಸಂಘದ ಕಾರ್ಯಕರ್ತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹಸಿರು ಬಾವುಟ ಹಿಡಿದು ವಿಜಯೋತ್ಸವ ಆಚರಿಸಿದರೆ, ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಪಟ್ಟರು.

ಸ್ವಾಭಿಮಾನಕ್ಕೆ ಸಂದ ಗೆಲುವು: ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಅವರ ಗೆಲುವು ಜಿಲ್ಲೆಯ ಸ್ವಾಭಿಮಾನಕ್ಕೆ ಸಂದ ಗೆಲುವಾಗಿದೆ ಎಂದು ಪಾಂಡವಪುರ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಲ್.ಸಿ.ಮಂಜುನಾಥ್ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಮಂಡ್ಯ ಜಿಲ್ಲೆ ಜನರು ಸ್ವಾಭಿಮಾನದಿಂದ ಮತ ನೀಡಿ ಸುಮಲತಾ  ಅವರನ್ನು ಗೆಲ್ಲಿಸುವ ಮೂಲಕ ನಾವು ಮಂಡ್ಯದವರು ಸ್ವಾಭಿಮಾನಿಗಳು ಎಂಬುದಾಗಿ ನಿರೂಪಿಸಿದ್ದಾರೆ ಎಂದರು. ಎಲ್ಲರನ್ನೂ ಪ್ರೀತಿ, ವಿಶ್ವಾಸ, ಆದರದಿಂದಲೇ ಕಾಣುವ ಮಂಡ್ಯ ಜಿಲ್ಲೆ ಜನರು ತಮ್ಮ ಸ್ವಾಭಿಮಾನಕ್ಕೆ ಧಕ್ಕೆ ಒದಗಿ ಬಂದರೆ ಸಿಡಿದೆದ್ದು ರೊಚ್ಚಿಗೇಳುತ್ತಾರೆ ಎಂಬುದನ್ನು ಈ ಚುನಾವಣೆಯಲ್ಲಿ ಅಕ್ಷರಶಃ ನಿರೂಪಿಸಿದ್ದಾರೆ ಎಂದು ಅವರು ತಿಳಿಸಿದರು.

ಚುನಾವಣಾ ಪ್ರಚಾರದ ವೇಳೆ ಸುಮಲತಾ  ಅವರನ್ನು ಯಾರೇ ಟೀಕಿಸಿದರೂ ಎಳ್ಳಷ್ಟು ಧೃತಿಗೆಡದೆ ಬಹಳ ಸಹನೆಯಿಂದಲೇ ಉತ್ತರ ನೀಡುವ ಮೂಲಕ ಪ್ರಬುದ್ಧತೆ ಮೆರೆದರು. ಜತೆಗೆ ಅಂಬರೀಷ್ ಅವರು ಮಂಡ್ಯ ಎಂದರೆ ಏನು ಎಂಬುದನ್ನು ಇಡೀ ಇಂಡಿಯಾಗೆ ತೋರಿಸಿದ್ದರು. ಸುಮಲತಾ ಅವರು ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News