ದಾವಣಗೆರೆಯಲ್ಲಿ ಸತತ ನಾಲ್ಕನೇ ಬಾರಿ ಗೆಲುವಿನ ನಗೆ ಬೀರಿದ ಜಿ.ಎಂ.ಸಿದ್ದೇಶ್ವರ್

Update: 2019-05-23 18:16 GMT

ದಾವಣಗೆರೆ, ಮೇ 23: ಬಿಜೆಪಿ ಸತತ ನಾಲ್ಕನೇ ಬಾರಿ ಗೆಲುವು ಸಾಧಿಸುವ ಮೂಲಕ ಮತ್ತೊಮ್ಮೆ ದೇವನಗರಿ ಬಿಜೆಪಿ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿದೆ. 

ವಾಣಿಜ್ಯ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಮತ್ತೊಮ್ಮೆ ಕಮಲ ಅರಳಿದ್ದು, ಬಿಜೆಪಿಯ ಸಂಸದ ಕಳೆದ ಬಾರಿ 17 ಸಾವಿರ ಅಂತರದಲ್ಲಿ ಗೆದ್ದಿದ್ದ ಸಂಸದ ಸಿದ್ದೇಶ್ವರ ಕಾಂಗ್ರೆಸ್ ಅಭ್ಯರ್ಥಿ ವಿರುದ್ದ ಈ ಬಾರಿ 1.69 ಲಕ್ಷ ಅಂತರದಲ್ಲಿ ಭರ್ಜರಿ ಗೆಲವು ಸಾಧಿಸಿದ್ದಾರೆ. ಈ ಮೂಲಕ ಸತತ ನಾಲ್ಕನೇ ಬಾರಿ ಸಂಸದರಾಗಿ ಸಂಸತ್ ಪ್ರವೇಶಿಸಿದ್ದಾರೆ.

2019ರ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಬಿ. ಮಂಜಪ್ಪ ವಿರುದ್ಧ ಬಿಜೆಪಿ ಅಭ್ಯರ್ಥಿ ಸಂಸದ ಸಿದ್ದೇಶ್ವರ 6,52,996 ಮತ ಪಡೆಯುವ ಮೂಲಕ 1.69 ಲಕ್ಷ ( 169,702) ಮತಗಳ ಅಂತರದಲ್ಲಿ ಗೆಲುವು ಕಂಡಿದ್ದಾರೆ. ಮೈತ್ರಿ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ 483294 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. 

2004 ರಲ್ಲಿ 3,70,499 ಮತ ಪಡೆದು 32,676 ಅಂತರದ ಜಯ ಸಾಧಿಸಿದ್ದರು. ಬಳಿಕ 2009ರ ಚುನಾವಣೆಯಲ್ಲಿ 2024 ಮತಗಳ ಅಂತರಗಳಿಂದ, 2014 ರಲ್ಲಿ 17,607 ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಜಿ.ಮಲ್ಲಿಕಾರ್ಜುನಪ್ಪ ಅವರ ಮರಣಾನಂತರ ಪಕ್ಷದ ತೀರ್ಮಾನದಂತೆ 2004ರಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆಲುವು ಕಂಡ ಜಿಎಂಎಸ್ ನಂತರ ಮೂರು ಚುನಾವಣೆಗಳಲ್ಲೂ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಿದ್ದಾರೆ. 

ಸಂಸದ ಜಿ.ಎಂ. ಸಿದ್ದೇಶ್ವರ್ ತಂದೆ ದಿ.ಜಿ.ಮಲ್ಲಿಕಾರ್ಜುನಪ್ಪ ಅವರ ಹಾದಿಯಲ್ಲೇ ಸಂಸತ್ ಪ್ರವೇಶಿಸುವ ಮೂಲಕ ಸತತ 4ನೇ ಬಾರಿ ಗೆಲುವು ದಾಖಲಿಸಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ದಿ. ಮಲ್ಲಿಕಾರ್ಜುನಪ್ಪ 1996, 1999ರಲ್ಲಿ ಎರಡು ಬಾರಿ ವಿಜಯ ಪತಾಕೆ ಹಾರಿಸಿದ್ದರು.

ಮೊದಲ ಹಂತದಿಂದಲೇ ಮುನ್ನಡೆ:  ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಮತದಾನ ಎಣಿಕೆಯ ಮೊದಲ ಹಂತದಿಂದಲೇ ಸಂಪೂರ್ಣ ಮುನ್ನಡೆ ಕಾಯ್ದುಕೊಂಡರು. ಮೊದಲ ಹಂತದಲ್ಲಿ 9101 ಮುನ್ನಡೆ ಪಡೆದರೆ, 2ನೇ ಹಂತದ ಎಣಿಕೆಯಲ್ಲಿ 23650, 3ನೇ ಹಂತದಲ್ಲಿ 30,009 ಮುನ್ನಡೆ, 4ನೇ ಹಂತದಲ್ಲಿ 41,956, 5ನೇ ಹಂತದಲ್ಲಿ 43,741, 6ನೇ ಹಂತದಲ್ಲಿ 47237 ಹಾಗೂ 7ನೇ ಹಂತದಲ್ಲಿ 53,789 ಮತಗಳಲ್ಲಿ ಮುನ್ನಡೆ ಕಂಡರು.

8ನೇ ಹಂತದಲ್ಲಿ 54144, 9ನೇ ಹಂತದಲ್ಲಿ 58861, 10ನೇ ಸುತ್ತಿನ ಮತ ಎಣಿಕೆಯಲ್ಲಿ 70487, 11ನೇ ಸುತ್ತಿನಲ್ಲಿ 84265, 12ನೇ ಸುತ್ತಿನಲ್ಲಿ 96084, 13ನೇ ಸುತ್ತಿನಲ್ಲಿ 1,07,415 14ನೇ ಸುತ್ತಿನಲ್ಲಿ 1,21,841, 15ನೇ ಸುತ್ತಿನಲ್ಲಿ 1,35,385, 16 ನೇ ಸುತ್ತಿನಲ್ಲಿ 144,088, 17 ನೇ ಸುತ್ತಿನಲ್ಲಿ 158,943, 18 ನೇ ಸುತ್ತಿನಲ್ಲಿ 166,074 ಹಾಗೂ 19 ನೇ ಸುತ್ತಿನಲ್ಲಿ 168,670 ಮುನ್ನಡೆ ಸಾಧಿಸಿದರು. ಸಂಸದ ಸಿದ್ದೇಶ್ವರ 1643 ಅಂಚೆ ಮತ ಪಡೆದಿದ್ದಾರೆ. ಈ ಮೂಲಕ 169,702 ಮತ ಪಡೆಯವ ಮೂಲಕ ಭರ್ಜರಿ ಗೆಲವು ಸಾಧಿಸಿದ್ದಾರೆ.

ಎಣಿಕೆ ಕೇಂದ್ರದತ್ತ ಸುಳಿಯದ ಜನತೆ
ಲೋಕಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ದಾವಣಗೆರೆ ವಿವಿ ಆವರಣದಲ್ಲಿ ನಡೆಯುತ್ತಿದ್ದರೂ ಯಾವುದೇ ಪಕ್ಷಗಳ ಕಾರ್ಯಕರ್ತರಾಗಲೀ, ಅಭಿಮಾನಿಗಳಾಗಲೀ ಆಗಮಿಸಿರಲಿಲ್ಲ. ಮತ ಎಣಿಕೆ ಕೇಂದ್ರದ ಹೊರಗಡೆ ಯಾವುದೇ ಬಾವುಟವಾಗಲೀ, ಯಾವುದೇ ವಿಜಯೋತ್ಸವದ ಘೋಷಣೆಗಳಾಗಲೀ ಕಂಡುಬರಲಿಲ್ಲ. ಮತ ಎಣಿಕೆ ಕೇಂದ್ರಕ್ಕೆ ಬೆಳಗ್ಗೆ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಬಿಟ್ಟರೆ ಬೇರೆ ಯಾವ ಪಕ್ಷದ ಅಭ್ಯರ್ಥಿಗಳು ಸಹ ಇತ್ತ ಸುಳಿಯಲೇ ಇಲ್ಲ. ಬಿಸಿಲ ಬೇಗೆಗೆ ಕಾರ್ಯಕರ್ತರು ಕೇಂದ್ರದತ್ತ ಆಗಮಿಸಿಲ್ಲ ಎಂದು ಪಕ್ಷಗಳ ಮುಖಂಡರು ಸಮಜಾಯಿಸಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News