ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿ ಮುಂದುವರೆಯಲಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ಕಲಬುರಗಿ, ಮೇ 24: ಚುನಾವಣೆಯಲ್ಲಿ ಸೋಲು, ಗೆಲುವುಗಳು ಪ್ರಜಾಪ್ರಭುತ್ವದ ಮೂಲ ಲಕ್ಷಣವಾಗಿದ್ದು, ಕಾಂಗ್ರೆಸ್ ಸೋಲಿನ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜೀನಾಮೆಗೆ ಒತ್ತಾಯಿಸುವುದು ಸರಿಯಾದ ಕ್ರಮವಲ್ಲ. ಎಐಸಿಸಿ ಅಧ್ಯಕ್ಷರಾಗಿ ರಾಹುಲ್ಗಾಂಧಿ ಮುಂದುವರೆಯಲಿದ್ದಾರೆಂದು ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದೆ. ಜನರ ತೀರ್ಪಿಗೆ ನಾವು ತಲೆ ಬಾಗುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದೆಲ್ಲವೂ ಸಹಜ. ಇದನ್ನೆ ಮುಂದಿಟ್ಟುಕೊಂಡು ರಾಜೀನಾಮೆ ಕೇಳುವುದು ಪ್ರಜಾಪ್ರಭತ್ವದ ಲಕ್ಷಣವಲ್ಲ. ಸೋಲಿನ ನೈತಿಕತೆಯಿಂದ ಯಾರು ರಾಜೀನಾಮೆ ಕೊಡುವ ಅಗತ್ಯವಿಲ್ಲವೆಂದು ಹೇಳಿದರು.
ದೇಶ ಭಕ್ತಿಯೆನ್ನುವುದು ಎಲ್ಲರಿಗೂ ಇರುತ್ತದೆ. ಆದರೆ, ಬಿಜೆಪಿ ಮಾತ್ರ ದೇಶಭಕ್ತಿಯನ್ನು ತನ್ನ ಪಕ್ಷದ ಸ್ವತ್ತು ಎನ್ನುವ ರೀತಿಯಲ್ಲಿ ಪ್ರಚಾರ ಮಾಡಿದರು. ಈ ರೀತಿ ಜನರ ಭಾವನೆಗಳ ಜೊತೆ ಚೆಲ್ಲಾಟವಾಡುವ ಮೂಲಕ ಚುನಾವಣೆ ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ಹೇಳಿದರು.