ಭೀಕರ ರಸ್ತೆ ಅಪಘಾತ: ಕೇರಳ ಮೂಲದ ನಾಲ್ವರು ಮೃತ್ಯು

Update: 2019-05-24 14:28 GMT

ಮಂಡ್ಯ, ಮೇ 24: ನಿಂತಿದ್ದ ಲಾರಿಗೆ ಕಾರು ಢಿಕ್ಕಿಯಾಗಿ ಕೇರಳ ಮೂಲದ ನಾಲ್ಕು ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಕಾರಿನಲ್ಲಿದ್ದ ಜಯದೀಪ್(29), ಅವರ ಪತ್ನಿ ಜ್ಞಾನತೀರ್ಥ(26), ಕಿರಣ್(30) ಹಾಗೂ ಅವರ ಪತ್ನಿ ಜಾನ್ಸಿ(27) ಸಾವನ್ನಪ್ಪಿದವರು. ಇವರು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯವರೆಂದು ತಿಳಿದು ಬಂದಿದೆ.

ಕೇರಳ ಮೂಲದವರಾದ ಇವರು ಬೆಂಗಳೂರಿನಿಂದ ಮೈಸೂರು ಕಡೆಗೆ ಕಾರಿನಲ್ಲಿ ತೆರಳುತ್ತಿದ್ದಾಗ ಮದ್ದೂರು ಪಟ್ಟಣದ ಕೊಪ್ಪ ವೃತ್ತದ ಬಳಿ ಈ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆಬದಿ ನಿಂತಿದ್ದ ಲಾರಿಗೆ ಢಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪರ್ಣವಾಗಿ ನಜ್ಜುಗುಜ್ಜಾಗಿದೆ.

ಮದ್ದೂರು ಸಂಚಾರ ಠಾಣೆ ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News