ರಮೇಶ್ ಜಾರಕಿಹೊಳಿಗೆ ಧನ್ಯವಾದ ಅರ್ಪಿಸಿದ ಸಂಸದ ಸುರೇಶ್ ಅಂಗಡಿ

Update: 2019-05-24 14:59 GMT

ಬೆಳಗಾವಿ, ಮೇ 24: ಶಾಸಕ ರಮೇಶ್ ಜಾರಕಿಹೊಳಿ ಅವರ ಸಹಕಾರದಿಂದ ಗೋಕಾಕದಲ್ಲಿ 1 ಲಕ್ಷಕ್ಕೂ ಹೆಚ್ಚು ಮತಗಳು ಲಭಿಸಿದವು. ಅದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸಂಸದ ಸುರೇಶ್ ಅಂಗಡಿ ಹೇಳಿದ್ದಾರೆ.

ಶುಕ್ರವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಅವರು ಸದ್ಯದಲ್ಲಿಯೇ ಬಿಜೆಪಿ ಸೇರುವುದು ಗ್ಯಾರಂಟಿ. ಅವರ ಜೊತೆಗೆ ಕೆಲವು ಶಾಸಕರೂ ಬರುತ್ತಾರೆ. ಆಪರೇಷನ್ ಕಮಲ ನಡೆಯುವುದು ಖಚಿತ. ಇವರನ್ನೆಲ್ಲ ನಾವು ಆತ್ಮೀಯವಾಗಿ ಸ್ವಾಗತಿಸುತ್ತೇವೆ ಎಂದು ನುಡಿದರು. ರಾಜಕೀಯದಲ್ಲಿ ರಮೇಶ್ ನನಗಿಂತ ಹಿರಿಯರು. ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಅಂಥವರನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಟೀಕಿಸಿದರು. 

ರಾಜ್ಯದ ಸಮ್ರಿಶ್ರ ಸರಕಾರವನ್ನು ಪತನಗೊಳಿಸುವ ಪ್ರಕ್ರಿಯೆ ಬೆಳಗಾವಿಯಿಂದಲೇ ಆರಂಭಗೊಳ್ಳಲಿದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಹೀನಾಯವಾಗಿ ಸೋತಿರುವುದಕ್ಕೆ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲೆಸೆದರು.

ಕುಟುಂಬಕ್ಕಾಗಿ ರಾಜಕಾರಣ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಯಾಗದಂತೆ ತಡೆಯಬೇಕೆಂಬ ಏಕೈಕ ಉದ್ದೇಶದಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡವು. ಈ ಪಕ್ಷಗಳಿಗೆ ಜನಸೇವೆ ಮಾಡುವ ಉದ್ದೇಶವಿಲ್ಲ. ಅಜ್ಜ, ಮಗ, ಮೊಮ್ಮಗ ಹೀಗೆ ಕುಟುಂಬ ಸದಸ್ಯರಿಗೆ ಅಧಿಕಾರ ನೀಡುವ ಉದ್ದೇಶ ಅವುಗಳಿಗೆ ಇದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News