ಕಾಂಗ್ರೆಸ್ ಬಿಡುವ ಪ್ರಶ್ನೆಯೇ ಇಲ್ಲ: ಶಾಸಕ ಎಂ.ವೈ.ಪಾಟೀಲ್

Update: 2019-05-25 15:09 GMT

ಕಲಬುರಗಿ, ಮೇ 25: ನಾನು ರಾಜಕೀಯ ಜೀವನದ ಕೊನೆಯ ದಿನಗಳನ್ನು ಕಳೆಯುತ್ತಿದ್ದೇನೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಬಿಡುವ ಪ್ರಶ್ನೆಯೆ ಇಲ್ಲವೆಂದು ಅಫಜಲಪುರ ಕ್ಷೇತ್ರದ ಶಾಸಕ ಎಂ.ವೈ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಸೇರುವೆನೆಂಬ ಸುದ್ದಿಗಳು ಕೇವಲ ವದಂತಿಗಳಷ್ಟೆ. ನನ್ನ 40ವರ್ಷಗಳ ರಾಜಕೀಯ ಜೀವನದಲ್ಲಿ ಅನೇಕ ಏಳಬೀಳುಗಳನ್ನು ಕಂಡಿದ್ದೇನೆ. ಇದೆಲ್ಲವನ್ನು ಈ ಹೊತ್ತಿನಲ್ಲಿ ನೆನೆದರೂ ಕಾಂಗ್ರೆಸ್‌ನಲ್ಲೇ ಇರಲು ಬಯಸುತ್ತೇನೆಂದು ತಿಳಿಸಿದರು.

ನನ್ನನ್ನು ಬಿಜೆಪಿಗೆ ಹೋಗುವಂತೆ ಯಾರಾದರು ಒತ್ತಾಯಿಸಿದರೂ ಅವರನ್ನು ಕಾಂಗ್ರೆಸ್ ಪರವಾಗಿ ಮನವರಿಕೆ ಮಾಡಿ ಇಲ್ಲಿಯೇ ಉಳಿಯಲು ಬಯಸುತ್ತೇನೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಅಫಜಲಪುರದಲ್ಲಿ ಬಿಜೆಪಿ ಅಭ್ಯರ್ಥಿಗೆ 35ಸಾವಿರ ಮತಗಳು ಹೆಚ್ಚಾಗಿ ಸಿಕ್ಕಿವೆ. ಈ ಬಗ್ಗೆ ಕೆಲವರು ನನ್ನ ವಿರುದ್ಧ ಮಾತನಾಡಿದ್ದಾರೆ. ಈ ಬಗ್ಗೆ ಈಗ ಹೆಚ್ಚು ಚಿರ್ಚಿಸುವುದು ಬೇಡವೆಂದು ಅವರು ಹೇಳಿದರು.

ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರವಾಗಿ ಸಾಕಷ್ಟು ಶ್ರಮಿಸಿದ್ದೇನೆ. ಆದಾಗ್ಯು ವ್ಯತಿರಿಕ್ತ ಫಲಿತಾಂಶ ಬಂದಿರುವುದು ನನಗೂ ಅಚ್ಚರಿ ತರಿಸಿದೆ. ಈ ಬಗ್ಗೆ ಚರ್ಚಿಸಲು ಕಾರ್ಯಕರ್ತರ ಸಭೆ ಕರೆದಿದ್ದೇನೆ. ಈ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News