ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಮರಿಯಾನೆ ಸಾವು
Update: 2019-05-26 16:54 GMT
ಶಿವಮೊಗ್ಗ, ಮೇ 26: ತಾಲೂಕಿನ ಸಕ್ರೆಬೈಲು ಆನೆ ಬಿಡಾರದಲ್ಲಿನ ಒಂದೂವರೆ ವರ್ಷ ಪ್ರಾಯದ ಹೆಣ್ಣು ಮರಿಯಾನೆಯೊಂದು ತೀವ್ರ ಅನಾರೋಗ್ಯದಿಂದ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
'ಭಾರತಿ' ಹೆಸರಿನ ಮರಿಯಾನೆ ಮೃತಪಟ್ಟಿದ್ದೆಂದು ಗುರುತಿಸಲಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಆನೆಗೆ ವನ್ಯಜೀವಿ ವಿಭಾಗದ ವೈದ್ಯರು ನಿಯಮಿತವಾಗಿ ಚಿಕಿತ್ಸೆ ನೀಡುತ್ತಿದ್ದರು.
ಎಂದಿನಂತೆ ಬಿಡಾರದ ಮಾವುತರು ತುಂಗಾ ನದಿಯಲ್ಲಿ ಸ್ನಾನ ಮಾಡಿಸಿ, ಇತರೆ ಆನೆಗಳೊಂದಿಗೆ ಅರಣ್ಯಕ್ಕೆ ಬಿಟ್ಟಿದ್ದರು. ಆದರೆ ಬಿಡಾರ ಸಮೀಪದ ಗುಡ್ಡದ ಬಳಿ ಮರಿಯಾನೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
2014 ರಲ್ಲಿ 'ಭಾನುಮತಿ' ಎಂಬ ಕಾಡಾನೆಯನ್ನು ಹಾಸನ ಜಿಲ್ಲೆ ಸಕಲೇಶಪುರದ ಬಳಿ ಸೆರೆಹಿಡಿಯಲಾಗಿತ್ತು. ನಂತರ ಅದನ್ನು ಪಳಗಿಸಲು ಸಕ್ರೆಬೈಲು ಆನೆ ಬಿಡಾರಕ್ಕೆ ತರಲಾಗಿತ್ತು. ಪ್ರಸ್ತುತ ಮೃತಪಟ್ಟ ಭಾರತಿ ಆನೆಯು ಭಾನುಮತಿಯ ಮಗಳಾಗಿದೆ. ಸದ್ಯ ಬಿಡಾರದಲ್ಲಿ 5 ಮರಿಗಳು ಸೇರಿದಂತೆ 25 ಆನೆಗಳಿವೆ.