ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷ ಮೌಲಾನ ಶಂಶುಲ್ ಹಖ್ ಖಾದ್ರಿ ನಿಧನ

Update: 2019-05-29 15:00 GMT

ಬೆಂಗಳೂರು, ಮೇ 29: ಕರ್ನಾಟಕ ಮುಸ್ಲಿಂ ಜಮಾಅತ್(ಕೆಎಂಜೆ)ಅಧ್ಯಕ್ಷ, ಪ್ರಮುಖ ಅಂತರ್‌ರಾಷ್ಟ್ರೀಯ ಧಾರ್ಮಿಕ ವಿದ್ವಾಂಸ ಮೌಲಾನ ಮುಫ್ತಿ ಶಂಶುಲ್ ಹಖ್ ಖಾದ್ರಿ ಹಸನಿ ವಲ್ ಹುಸೈನಿ(87) ಬುಧವಾರ ಬೆಳಗ್ಗೆ 10 ಗಂಟೆಗೆ ನಗರದ ಕಾಟನ್ ಪೇಟೆಯಲ್ಲಿರುವ ಹಝ್ರತ್ ಲಕ್ಕಡ್ ಶಾ ದರ್ಗಾ ಆವರಣದಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ದೇಶ, ವಿದೇಶಗಳಲ್ಲಿ ಅಪಾರ ಶಿಷ್ಯರನ್ನು ಹೊಂದಿರುವ ಶಂಶುಲ್ ಹಖ್, ಖಾದಿರಿಯ್ಯ ತ್ವರೀಖತ್‌ನ ಪ್ರಮುಖ ಶೈಖ್‌ಗಳಲ್ಲೊಬ್ಬರು. ಫಿಖ್ಹ್‌ ಶಾಸ್ತ್ರದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದ ಇವರು ಕರ್ನಾಟಕದ ವಿವಿಧ ಧಾರ್ಮಿಕ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು.

ಶಂಶುಲ್ ಹಖ್ ಖಾದ್ರಿ ಅವರು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿರುವ ಕರ್ನಾಟಕ ಮುಸ್ಲಿಂ ಜಮಾಅತ್‌ನ ರಾಜ್ಯಾಧ್ಯಕ್ಷರಾಗಿದ್ದರು. ಯೂರೋಪ್, ಆಫ್ರಿಕಾಗಳಿಂದ ಆಗಮಿಸುವ ಪ್ರತಿನಿಧಿಗಳೊಂದಿಗೆ ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುತ್ತಿದ್ದ ಮೌಲಾನರಿಗೆ ಸಿಂಗಾಪುರ, ಮಲೇಶ್ಯಾಗಳಲ್ಲಿ ಸಾವಿರಾರು ಅಭಿಮಾನಿಗಳಿದ್ದಾರೆ.

ನಾಳೆ(ಮೇ 30) ಲುಹರ್ ನಮಾಝಿನ ನಂತರ ಅವರ ಪೀರ್ ಬೌಂಡರಿಯಲ್ಲಿ ಜನಾಝ ನಮಾಝ್ ನಡೆಯಲಿದೆ. ಬಳಿಕ ಚಾಮರಾಜ ಪೇಟೆಯ ರೋಯನ್ ಸರ್ಕಲ್ ನಲ್ಲಿರುವ ಅವರ ತಾತ ವಲಿಯುಲ್ಲಾಹಿ ಹಝ್ರತ್ ಮೀರ್ ಸುವಾದ್(ರ) ದರ್ಗಾದ ಪಕ್ಕದಲ್ಲಿ ಅವರ ದಫನ್ ನಡೆಯಲಿದೆ ಎಂದು ಕರ್ನಾಟಕ ಮುಸ್ಲಿಂ ಜಮಾಅತ್ ಪ್ರಧಾನ ಕಾರ್ಯದರ್ಶಿ ಎನ್.ಕೆ.ಮುಹಮ್ಮದ್ ಶಾಫಿ ಸಅದಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News