ಸುಮಲತಾ ಮಂಡ್ಯ ಜನರ ವಿಶ್ವಾಸ ಉಳಿಸಿಕೊಳ್ಳುತ್ತಾರೆ: ಯಶ್, ದರ್ಶನ್ ವಿಶ್ವಾಸ

Update: 2019-05-29 17:39 GMT

ಮಂಡ್ಯ, ಮೇ 29: ನೂತನ ಸಂಸದೆ ಸುಮಲತಾ ಅಂಬರೀಷ್ ಅವರು ತಮಗೆ ಅಭೂತಪೂರ್ವ ಗೆಲುವು ತಂದುಕೊಟ್ಟ ಮಂಡ್ಯ ಜನರ ವಿಶ್ವಾಸ ಉಳಿಸಿಕೊಳ್ಳಲಿದ್ದಾರೆ ಎಂದು ಪ್ರಚಾರದಲ್ಲಿ ಪ್ರಮುಖ ಪಾತ್ರವಹಿಸಿದ್ದ ಚಿತ್ರನಟರಾದ ಜೋಡೆತ್ತು ಖ್ಯಾತಿಯ ಯಶ್ ಹಾಗೂ ದರ್ಶನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬುಧವಾರ ನಗರದ ಸಿಲ್ವರ್ ಜ್ಯೂಬಿಲಿಪಾರ್ಕ್‍ನಲ್ಲಿ ಆಯೋಜಿಸಿದ್ದ ಅಂಬರೀಷ್ ಹುಟ್ಟುಹಬ್ಬ ಹಾಗೂ ಸುಮಲತಾ ಅವರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಸ್ವಾಭಿಮಾನಿ ಮಂಡ್ಯ ಜನರ ವಿಶ್ವಾಸ ಉಳಿಸಿಕೊಳ್ಳುವಂತೆ ಸುಮಲತಾ ಅವರಲ್ಲಿ ಮನವಿ ಮಾಡಿದರು.

ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಹೆಚ್ಚು ಅಂತರದ ಮತಗಳಿಂದ ಗೆಲ್ಲಿಸಿರುವ ಮಂಡ್ಯದ ಜನರು, ಪ್ರಬುದ್ಧತೆ ಮೆರೆದಿದ್ದಾರೆ. ಸುಮಲತಾ ಅಮ್ಮ ಒಳ್ಳೆಯ ಕೆಲಸ ಮಾಡಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಯಶ್ ವಿಶ್ವಾಸ ವ್ಯಕ್ತಪಡಿಸಿದರು.

ಸುಮಲತಾ ಅವರು ಗೆದ್ದೇ ಗೆಲ್ಲುತ್ತಾರೆ ಎಂಬ ನಂಬಿಕೆ ಇತ್ತು. ವಿರೋಧಿಗಳ ಟೀಕೆಗಳಿಗೆ ಜಿಲ್ಲೆ ಜನರು ಉತ್ತರ ನೀಡಿದ್ದಾರೆ. ಸುಮಲತಾ ಅವರ ಮೇಲೆ ದೊಡ್ಡ ಜವಾಬ್ಧಾರಿ ಇದೆ. ಹಾಗಾಗಿ ಮದುವೆ, ಹುಟ್ಟುಹಬ್ಬ, ತಿಥಿ ಮುಂತಾದ ಕಾರ್ಯಗಳಿಗೆ ಒತ್ತಾಯ ಮಾಡಬೇಡಿ ಎಂದು ಅವರು ಸಲಹೆ ನೀಡಿದರು.

ದರ್ಶನ್ ಮಾತನಾಡಿ, ಸಾಯೋವರೆಗೂ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ. ನಿಮ್ಮ ಪ್ರೀತಿ, ವಿಶ್ವಾಸವನ್ನು ಅಮ್ಮ ಉಳಿಸಿಕೊಳ್ಳುತ್ತಾರೆ. ಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಡುತ್ತಿರುವ ಅಂಬರೀಷ್ ಪುತ್ರ ಅಭಿಷೇಕ್ ಅಭಿನಯದ ಅಮರ್ ಚಿತ್ರನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ಅಭಿಷೇಕ್ ಅಂಬರೀಷ್ ಮಾತನಾಡಿ, ಪ್ರತಿವರ್ಷ ನಮ್ಮ ತಂದೆಗೆ ಏನ್ ಗಿಫ್ಟ್ ಕೊಡಬೇಕೆಂದು ಯೋಚನೆ ಮಾಡುತ್ತಿದ್ದೆ. ಆದರೆ, ಈ ಬಾರಿ ಅಡ್ವಾನ್ಸ್ ಆಗಿ ಮಂಡ್ಯ ಜನ ಗಿಫ್ಟ್ ಕೊಟ್ಟಿದ್ದೀರ ಎಂದು ತಂದೆಯ ಹುಟ್ಟುಹಬ್ಬದ ಸಂಭ್ರಮವನ್ನು ಸ್ಮರಿಸಿದರು.

ರೈತಸಂಘದ ನಾಯಕಿ ಸುನೀತ ಪ್ಮಟ್ಟಣ್ಣಯ್ಯ ಮಾತನಾಡಿ, ಮಂಡ್ಯ ಜನತೆ ತಾವು ಏನೆಂದು ಇಡೀ ದೇಶಕ್ಕೆ ತಿಳಿಸಿದ್ದಾರೆ. ಸ್ವಾಭಿಮಾನಿ ಜನರು ಸುಮಲತಾ ಅವರಿಗೆ ಗೆಲುವು ತಂದಿದ್ದಾರೆ. ಮೈಷುಗರ್, ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆ ಪುನಶ್ಚೇತನ ಸೇರಿದಂತೆ ಜಿಲ್ಲೆಯ ಸಮಸ್ಯೆಗಳಿಗೆ ಸುಮಲತಾ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.

ಚಿತ್ರನಟ ದೊಡ್ಡಣ್ಣ, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್, ಮಾಜಿ ಶಾಸಕ ಎಚ್.ಬಿ.ರಾಮು, ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು,  ಉಚ್ಚಾಟಿತ ಕೆಪಿಸಿಸಿ ಸದಸ್ಯ ಇಂಡುವಾಳು ಸಚ್ಚಿದಾನಂದ, ಕಾಂಗ್ರೆಸ್, ಇತರ ಸಂಘಟನೆಗಳ ಮುಖಂಡರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News