ಮಂಡ್ಯ ಕ್ಷೇತ್ರದ ಸೋಲಿಗೆ ನಾನೇ ಹೊಣೆ: ನಿಖಿಲ್ ಕುಮಾರಸ್ವಾಮಿ

Update: 2019-05-30 16:17 GMT

ಬೆಂಗಳೂರು, ಮೇ 30: ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋಲಿಗೆ ನಾನೇ ಹೊಣೆಗಾರ. ಯಾವುದೆ ಕಾರಣಕ್ಕೂ ನನ್ನ ಸೋಲಿಗೆ ಮೈತ್ರಿ ಪಕ್ಷದ ಶಾಸಕರನ್ನು, ಸಚಿವರನ್ನು ಟೀಕಿಸುವುದು ಬೇಡವೆಂದು ನಿಖಿಲ್ ಕುಮಾರಸ್ವಾಮಿ ಮನವಿ ಮಾಡಿದರು.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ಚುನಾವಣೆಯ ಫಲಿತಾಂಶದ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಾನೇ ಹೊರುತ್ತೇನೆ. ಈ ಫಲಿತಾಂಶದ ಬಗ್ಗೆ ನಿಖಿಲ್ ಕುಮಾರಸ್ವಾಮಿ ಒಬ್ಬರನ್ನೇ ಟೀಕಿಸಿ. ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾರ್ಯಕರ್ತರು, ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರನ್ನು ಟೀಕಿಸುವುದು ಬೇಡ ಎಂದಿದ್ದಾರೆ.

ಮೈತ್ರಿ ಪಕ್ಷದ ಎಲ್ಲಾ ಕಾರ್ಯಕರ್ತರ ಬಳಿ ನಾನು ಕ್ಷಮೆಯಾಚಿಸುತ್ತೇನೆ. ಯಾಕೆಂದರೆ ಜನರು ನಿಖಿಲ್ ಕುಮಾರಸ್ವಾಮಿಯನ್ನು ತಿರಸ್ಕರಿಸಿದ್ದಾರೆ. ಇದರಿಂದ ಕೆಲವು ಕಾರ್ಯಕರ್ತರು ನನ್ನಿಂದ ನಿರಾಸೆಯಾಗಿದ್ದಾರೆ. ಆದರೂ ಮಂಡ್ಯದ ಅಭಿವೃದ್ಧಿಗೆ ಸದಾ ಕಾರ್ಯಪ್ರವೃತ್ತನಾಗಿರುತ್ತೇನೆಂದು ಅವರು ಹೇಳಿದರು.

ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಈ ವರ್ಷದ ಬಜೆಟ್ ಮಂಡನೆಯಲ್ಲಿ ಮಂಡ್ಯ ಜಿಲ್ಲೆಗಾಗಿ 8,671 ಕೋಟಿ ರೂ.ಬಿಡುಗಡೆ ಮಾಡಿದ್ದರು. ಹೀಗಾಗಿ ಆ ಕೆಲಸಗಳು ಸರಿಯಾಗಿ ನಡೆಯುತ್ತಿದೆಯೇ ಎನ್ನುವುದನ್ನು ನಾನು ನೋಡಿಕೊಳ್ಳುತ್ತೇನೆ. ನನ್ನ ಮೇಲೆ ನಂಬಿಕೆ ಇಟ್ಟು ಮತ ಹಾಕಿದ ಎಲ್ಲರಿಗೂ ಧನ್ಯವಾದಗಳು. 5 ಲಕ್ಷದ 76 ಸಾವಿರ 400 ಮತಗಳು ಬಂದಿವೆ. ಉಳಿದ ಮತದಾರರ ನಂಬಿಕೆ ಗಳಿಸಲು ಮುಂದಿನ ದಿನದಲ್ಲಿ ನಾನು ಪ್ರಯತ್ನ ಮಾಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ನಾನು ಸೋತಿರಬಹುದು. ಆದರೆ, ನಾನು ಈ ಪಯಣದಲ್ಲಿ ಸಾಕಷ್ಟು ಪಡೆದುಕೊಂಡಿದ್ದೇನೆ ಎಂದು ಭಾವಿಸುತ್ತೇನೆ. ನಾನು ಮೊದಲ ದಿನದಿಂದ ಪಾಸಿಟಿವ್ ವ್ಯಕ್ತಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ಇಡೀ ರಾಜ್ಯದೆಲ್ಲೆಡೆ ಪ್ರವಾಸ ಮಾಡಿ ಅಲ್ಲಿನ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳುತ್ತೇನೆ. ಜೊತೆಗೆ ನಮ್ಮ ಪಕ್ಷದ ಕಾರ್ಯಕರ್ತರನ್ನು ಪ್ರೇರೇಪಿಸುತ್ತೇನೆ ಎಂದು ಅವರು ತಿಳಿಸಿದರು.

ಅಭಿಗೆ ಶುಭಾಶಯ: ಶುಕ್ರವಾರ ಬಿಡುಗಡೆಯಾಗುತ್ತಿರುವ ನನ್ನ ಸಹೋದರ ಅಭಿ ನಟನೆಯ ಚೊಚ್ಚಲ ಅಮರ್ ಸಿನಿಮಾ ಯಶಸ್ಸನ್ನು ಕಾಣಲಿ ಎಂದು ಹಾರೈಸುತ್ತಿದ್ದೇನೆ. ಎಲ್ಲರೂ ದಯವಿಟ್ಟು ಥಿಯೇಟರ್‌ಗಳಿಗೆ ಹೋಗಿ ಅಮರ್ ಚಿತ್ರವನ್ನು ನೋಡಿ ಎಂದು ಅವರು ಶುಭ ಹಾರೈಸಿದರು.

ಸುಮಲತಾಗೆ ಅಭಿನಂದನೆ: ಕೆಲವರು ನಾನು ತೋರ್ಪಡಿಕೆಗಾಗಿ ಅಭಿನಂದಿಸುತ್ತಿದ್ದೇನೆಂದು ಅಂದುಕೊಳ್ಳುತ್ತಾರೆ. ಅಂತಹವರಿಗೆ ನಾನು ಹೇಳಲು ಬಯಸುವುದೇನೆಂದರೆ ಪ್ರಚಾರದ ಸಮಯದಲ್ಲೂ ನಾನು ಸಂಬಂಧಗಳಿಗೆ ಬೆಲೆ ಕೊಡುತ್ತೇನೆ ಎಂದು ಹೇಳಿದ್ದೆ. ಈಗಲೂ ಅದನ್ನೇ ಹೇಳುತ್ತೇನೆ. ಸುಮಕ್ಕ ಮಂಡ್ಯದಲ್ಲಿ ಗೆದ್ದಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಜೊತೆಗೆ ನಾನು ಮಂಡ್ಯದ ಅಭಿವೃದ್ಧಿಗೆ ಯಾರ ಜೊತೆಗೆ ಬೇಕಾದರೂ ಕೈ ಜೋಡಿಸಲು ಸಿದ್ಧನಾಗಿದ್ದೇನೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News