ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚು ಬಿದಿರು ಬೆಳೆಸುವುದು ನಮ್ಮ ಗುರಿ: ಸತೀಶ್ ಜಾರಕಿಹೊಳಿ

Update: 2019-06-01 14:14 GMT

ಬೆಳಗಾವಿ, ಜೂ.1: ರೈತರಲ್ಲಿ ತಿಳುವಳಿಕೆ ಮೂಡಿಸಿ ಬಿದಿರು ಉತ್ಪಾದನೆಯನ್ನು ಜಿಲ್ಲೆಯಲ್ಲಿ ಹೆಚ್ಚಿಸಿ ಅದರ ಹೆಚ್ಚಿನ ಲಾಭಾಂಶವನ್ನು ಪಡೆಯುವುದಕ್ಕೆ ಅರಣ್ಯ ಇಲಾಖೆ ಸಹಾಯ ಮಾಡುತ್ತದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ, ಜೈವಿಕ ಮತ್ತು ಪರಿಸರ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಶನಿವಾರ ನಗರದ ಸುವರ್ಣ ವಿಧಾನನಸೌಧದಲ್ಲಿ ಆಯೋಜಿಸಲಾಗಿದ್ದ ಕರ್ನಾಟಕ ಅರಣ್ಯ ಇಲಾಖೆ ಹಾಗೂ ರಾಷ್ಟ್ರೀಯ ಬಿದಿರು ಅಭಿಯಾನದ ಸಹಯೋಗದಲ್ಲಿ ಬಿದಿರು ಬೆಳೆ, ಉತ್ಪನ್ನ ಮತ್ತು ಉದ್ಯಮ ಎಂಬ ವಿಚಾರ ಸಂಕಿರಣ ಮತ್ತು ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ ಬಿದಿರನ್ನು ಹೆಚ್ಚಾಗಿ ಬೆಳೆಯುವುದನ್ನು ಗಮನಿಸಿದ್ದೇನೆ. ಇದೇ ರೀತಿಯಲ್ಲಿ ಮುಂದುವರೆಸಲು ಸರಕಾರ ಪ್ರೋತ್ಸಾಹ ನೀಡುತ್ತದೆ. ಬೇರೆ ಬೆಳೆಗೆ ಹೋಲಿಸಿದರೆ ಅದರಂತೆ ಹಾಗೂ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಾಭವನ್ನು ನೀಡಲು ಸಹಾಯವಾಗಿದೆ ಎಂದು ಅವರು ಹೇಳಿದರು.

ಆಯಾ ಭಾಗದಲ್ಲಿ ಯಾವ ತಳಿಯ ಬಿದಿರು ಬೆಳೆಯಲು ಅವಶ್ಯಕತೆ ಇದೇ ಎಂದು ತಿಳಿದು ಅಂತವರಿಗೆ ನಮ್ಮ ಇಲಾಖೆಯಿಂದ ಪ್ರೋತ್ಸಾಹ ನೀಡಲಾಗುತ್ತದೆ. ಬಿದಿರಿನಿಂದ ಹಲವಾರು ಉಪಯೋಗವಿದೆ. ಅದರ ಲಾಭವನ್ನು ನಮ್ಮ ರೈತರು ಪಡೆದುಕೊಳ್ಳಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಖನಿಜ ನಿಗಮ ನಿಯಮಿತ (ಮೈಸೂರು ಮಿನಿರಲ್ಸ್ ಲಿ.) ಅಧ್ಯಕ್ಷೆ ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಬಿದಿರು ಮಾನವನಿಗೆ ಅಷ್ಟೇ ಅಲ್ಲದೆ ಪರಿಸರಕ್ಕೂ, ದನಕರುಗಳಿಗೂ ಔಷಧ ರೂಪದಲ್ಲಿ ಸಹಾಯವಾಗುತ್ತದೆ ಎಂದರು.

ಹೆಚ್ಚಿನ ಕಡೆಗಳಲ್ಲಿ ಬಿದಿರು ಕಸವೆಂದು ಕಾಣಲಾಗುತ್ತಿದೆ. ಈಗ ಬಿದಿರು ಎಲ್ಲರಿಗೂ ಅನುಕೂಲವಾಗುವ ಬೆಳೆಯಾಗಿದೆ ಹಾಗಾಗಿ ಅದನ್ನು ಉತ್ತಮ ರೀತಿಯಲ್ಲಿ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ಸಂಪಾದನೆ ಮಾಡಬಹುದು ಎಂದು ಅವರು ತಿಳಿಸಿದರು.

ಬಿದಿರು ಬೆಳೆ ಬೆಳೆಯುವುದರಿಂದ ರೈತರಿಗೆ ಸಾಕಷ್ಟು ಲಾಭವಾಗುತ್ತದೆ. ಬಿದಿರು ವ್ಯವಸಾಯ ಮಾಡಲು ರೈತರಿಗೆ ಹಾಗೂ ಉದ್ಯೋಗ ಮಾಡಲು ಮೇದಾರ ಸಮಾಜಕ್ಕೆ ತುಂಬ ಉಪಯುಕ್ತವಾಗಿದೆ. ಬಿದಿರು ಬೆಳೆಯುವ ರೈತರಿಗೆ ಮುಂಬರುವ ದಿನಗಳಲ್ಲಿ ಒಳ್ಳೆಯ ಲಾಭವಾಗಲಿ ಎಂದು ಅವರು ಹಾರೈಸಿದರು.

ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ.ಶ್ರೀವಾಸ್ತವ್ ಮಾತನಾಡಿ, ಬಿದಿರು ಬೆಳೆಗಳನ್ನು ಪ್ರೋತ್ಸಾಹಿಸಲು ಹಾಗೂ ಉದ್ಯಮವಾಗಿ ಬೆಳೆಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ 2019-20ನೇ ಸಾಲಿನಲ್ಲಿ ಈ ಯೋಜನೆಗೆ 25 ಕೋಟಿ ರೂ.ಗಳನ್ನು ಮೀಸಲಿರಿಸಲಾಗಿದೆ. ರೈತರಿಗೆ ತಮ್ಮ ಸ್ವಂತ ಹೊಲಗಳಲ್ಲಿ ಬಿದಿರು ಬೆಳೆಯುವುದಕ್ಕೆ 50 ಸಾವಿರ ರೂ.ಸಹಾಯಧನ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ವಿ. ಅಮರನಾಥ, ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾನಿರೀಕ್ಷಕ ಎಚ್.ಜಿ. ರಾಘವೇಂದ್ರ ಸುಹಾಸ, ಹೊಸೂರು ಗ್ರೋಮೋರದ ಬಯೋಟೆಕ್ ಲಿಮಿಟೆಡ್ ನಿರ್ದೇಶಕ ಡಾ.ಎನ್ ಭಾರತಿ, ಶಿರಸಿ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ವಾಸುದೇವ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News