×
Ad

ಸಾರ್ವಜನಿಕ ಆಸ್ತಿ ಮಾರಾಟ ತೀರ್ಮಾನ ಬೇಡ: ಕೋಡಿಹಳ್ಳಿ ಚಂದ್ರಶೇಖರ್

Update: 2019-06-01 19:52 IST

ಬೆಂಗಳೂರು, ಜೂ.1: ಸರಕಾರ ಯಾವುದೇ ಭೂಮಿ ಮತ್ತು ಕಟ್ಟಡಗಳ ಮಾರಾಟ ಮಾಡುವ ತೀರ್ಮಾನವನ್ನು ಮುಖ್ಯಮಂತ್ರಿಗಳು ತಕ್ಷಣವೇ ಕೈಬಿಡಬೇಕು ಎಂದು ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜಿಂದಾಲ್ ಸರಕಾರದ ಎಂಎಂಎಲ್ ಕಂಪನಿಗೆ 1,300 ಕೋಟಿ ರೂಪಾಯಿಯಷ್ಟು ನೀಡಬೇಕಾಗಿದ್ದು, ಅಲ್ಲಿಯ ಪ್ರಾಧಿಕಾರಕ್ಕೆ ನೀಡಬೇಕಾದ ಹಣವನ್ನು ಪಾವತಿಸದೆ ರಾಜಕಾರಣಿಗಳ ಸಂಬಂಧದಿಂದ ಅನೇಕ ಅಕ್ರಮಗಳನ್ನ ನಡೆಸುತ್ತಲೆ ಬಂದಿದೆ ಎಂದು ಆರೋಪಿಸಿದರು.

ಈ ಜಿಂದಾಲ್ ಕಂಪೆನಿ ಮೇಲೆ ಮಾಜಿ ಲೋಕಾಯುಕ್ತರು ತನಿಖೆ ಮಾಡಿದ್ದಾರೆ. ಕಂಪನಿಯ ಅಕ್ರಮ ವ್ಯವಹಾರಗಳು ಮತ್ತು ಆರ್ಥಿಕ ಅಪರಾಧಗಳು ಇರುವುದರಿಂದ ಇದನ್ನು ಕಪ್ಪುಪಟ್ಟಿಯಲ್ಲಿ ಇರಿಸಲಾಗಿದೆ. ಇಂತಹ ಕಂಪನಿಯ ಜೊತೆ ಸರಕಾರ ವ್ಯವಹಾರ ನಡೆಸುತ್ತಿರುವುದು ಸರಿಯಲ್ಲ. ಅಲ್ಲದೆ ಸರಕಾರ 3,666 ಎಕರೆ ಜಮೀನನ್ನು ಎಕರೆಗೆ 1.50 ಲಕ್ಷ ರೂ.ಗಳಂತೆ ಮಾರಾಟ ಮಾಡಲು ಹೊರಟಿರುವುದು ಸರಿಯಲ್ಲ ಎಂದು ದೂರಿದರು.

ಈ ಭೂಮಿ ರಸ್ತೆ ಪಕ್ಕದಲ್ಲೇ ಇರುವುದರಿಂದ ಒಂದು ಎಕರೆ ಕನಿಷ್ಠ ಬೆಲೆ 25 ಲಕ್ಷದಿಂದ 1 ಕೋಟಿ ರೂ. ಇರುತ್ತದೆ. ಆದರೆ ಕನಿಷ್ಠ ದರಕ್ಕೆ ಮಾರಾಟ ಮಾಡಲು ಹೊರಟಿರುವ ಸರಕಾರದ ಧೋರಣೆಯನ್ನು ಖಂಡಿಸಬೇಕಾಗಿದೆ. ಇದನ್ನು ಸರಕಾರ ಕೂಡಲೇ ರದ್ದು ಮಾಡಬೇಕು. ಇಲ್ಲವಾದರೆ ರೈತ ಸಂಘಟನೆ, ದಲಿತ ಸಂಘಟನೆ, ಪ್ರಗತಿಪರ ಹೋರಾಟಗಾರರು ಒಟ್ಟುಗೂಡಿ ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News