ಸಿಎಂ ಗ್ರಾಮ ವಾಸ್ತವ್ಯದ ಸ್ವರೂಪ ಬದಲು

Update: 2019-06-02 14:32 GMT

ಬೆಂಗಳೂರು, ಜೂ. 2: ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳ ಅಧ್ಯಯನ ಹಾಗೂ ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ದೃಷ್ಟಿಯಿಂದ ಮುಖ್ಯಮಂತ್ರಿ ಕುಮಾರಸ್ವಾಮಿ ಕೈಗೊಳ್ಳಲಿರುವ ಗ್ರಾಮ ವಾಸ್ತವ್ಯ ಕಳೆದ ಸಾಲಿನ ಗ್ರಾಮ ವಾಸ್ತವ್ಯಕ್ಕಿಂತ ಭಿನ್ನವಾಗಿ ಆಯೋಜನೆಗೊಳ್ಳಲಿದೆ.

ಸಿಎಂ ಕುಮಾರಸ್ವಾಮಿ ಸರಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದು, ರೈತರು ಕಾರ್ಯಕ್ರಮದ ಆದ್ಯತಾ ವಲಯದಲ್ಲಿರುತ್ತಾರೆ. ರೈತರ ಹಿತವನ್ನು ಗಮನದಲ್ಲಿರಿಸಿ ಈವರೆಗಿನ ರೈತಪರ ಕಾರ್ಯಕ್ರಮಗಳಿಂದ ಕಂಡುಕೊಂಡ ಉತ್ತಮ ಅಂಶಗಳನ್ನು ರೈತರಿಗೆ ಹೇಳುವ ಮತ್ತು ಆಧುನಿಕ ಕೃಷಿ ಪದ್ಧತಿಗೆ ಪೂರಕ, ಯಾಂತ್ರೀಕೃತ ಕೃಷಿಗೆ ನೆರವು ಹಾಗೂ ರೈತ ಮಾಹಿತಿಗಳು ಗ್ರಾಮ ವಾಸ್ತವ್ಯ ಆದ್ಯತೆಯಾಗಲಿವೆ. ಸಿಎಂ ಭೇಟಿ ನೀಡುವ ಗ್ರಾಮಗಳಿಗೆ ಹಿರಿಯ ಅಧಿಕಾರಿಗಳ ತಂಡ ಭೇಟಿ ನೀಡಿ ಭೇಟಿ ನೀಡುವ ಮತ್ತು ಸುತ್ತಮುತ್ತಲ ಗ್ರಾಮಗಳ ಜನರ ಸಮಸ್ಯೆಗಳು, ಬೇಡಿಕೆ ಹಾಗೂ ನೆರವು ನೀಡಲು ಪೂರಕ ಸಮಗ್ರ ವರದಿಯನ್ನು ತಯಾರಿಸಲಿದ್ದಾರೆ. ಸಿಎಂ ಗ್ರಾಮ ವಾಸ್ತವ್ಯ ವೇಳೆ ಸ್ಥಳದಲ್ಲೆ ಹಲವು ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ನೀತಿ-ನಿರೂಪಣೆಗೂ ಇದು ಸಹಕಾರಿಯಾಗಲಿದೆ ಎನ್ನುವುದು ಕುಮಾರಸ್ವಾಮಿ ನಂಬಿಕೆಯಾಗಿದೆ.

ತಾವು ಉಳಿದುಕೊಂಡ ಗ್ರಾಮಕ್ಕೆ, ಜಿಲ್ಲೆಗೆ ಏನು ಬೇಕು? ಯಾವ ಇಲಾಖೆಯಿಂದ ಕೆಲಸ ಕಾರ್ಯಗಳು ಬಾಕಿ ಉಳಿದಿವೆ? ಎಂಬುದನ್ನು ಮನಗಂಡು ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕೆನ್ನುವುದು ಮುಖ್ಯಮಂತ್ರಿ ಕುಮಾರಸ್ವಾಮಿಯವರ ಅಭಿಲಾಷೆಯಾಗಿದೆ.

ಗ್ರಾಮ ವಾಸ್ತವ್ಯದ ಹಿನ್ನೆಲೆ: ಕುಮಾರಸ್ವಾಮಿ ಮೊತ್ತ ಮೊದಲ ಗ್ರಾಮ ವಾಸ್ತವ್ಯ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಪಿ.ಕೆ.ನಾಗನೂರೆಂಬ ಹಳ್ಳಿಯಿಂದ ಆರಂಭವಾಯಿತು. ಕೃಷ್ಣೆಯಲ್ಲಿ ಪ್ರವಾಹ ಬಂದಾಗ ಪರಿಸ್ಥಿತಿ ಅವಲೋಕಿಸಲು ತೆರಳಿದ ಸಿಎಂ ಸಂಜೆ ಆರು ಗಂಟೆಗೆ ಬೆಳಗಾವಿಗೆ ಹೊರಡಲು ಹೆಲಿಕಾಪ್ಟರ್ ಹೊರಡಿಸಿ ಎಂದು ಜಿಲ್ಲಾಧಿಕಾರಿ ಅವಸರಿಸುತ್ತಿದ್ದರು. ಸಿಎಂ ಕುಮಾರಸ್ವಾಮಿ ಕಾರಣ ಕೇಳಿದಾಗ ಇಲ್ಲೆಲ್ಲೂ ತಂಗಲು ಸ್ಥಳವಿಲ್ಲವಾದ್ದರಿಂದ ಬೆಳಗಾವಿಗೆ ಹೊರಡುವುದು ಅನಿವಾರ್ಯ ಎಂದರು. ಆಗ ಸಿಎಂ ಇಲ್ಲೇ ಹತ್ತಿರ ಯಾರ ಮನೆಯಲ್ಲಾದರೂ ತಂಗುವ ಎಂದು ಪ್ರತಿಕ್ರಿಯಿಸಿದರು.

ಸ್ಥಳದಲ್ಲೇ ಉಪಸ್ಥಿತರಿದ್ದ ಶಾಸಕರು ನಾಗನೂರಿನಲ್ಲೊಂದು ಮಠದಲ್ಲಿ ತಂಗಲು ಅವಕಾಶವಿರುವುದಾಗಿ ಹೇಳಿದರು. ಬಳಿಕ ನೆರೆ ಬಂದ ಕೃಷ್ಣೆಯನ್ನು ಮೂರು ಟ್ರ್ಯಾಕ್ಟರ್‌ಗಳಲ್ಲಿ ದಾಟಿ ನಾಗನೂರಿಗೆ ಬಂದು ಮಠದಲ್ಲಿ ವಾಸ್ತವ್ಯ ಮಾಡಿದ್ದು ಸಿಎಂ ಕುಮಾರಸ್ವಾಮಿ ಅವರ ಮೊದಲ ಗ್ರಾಮ ವಾಸ್ತವ್ಯ.

ಅಂದು ಊರ ಜನರೊಂದಿಗೆ ಇದ್ದು ಅಲ್ಲಿನವರೊಂದಿಗೆ ಬೆರೆತು ಅಲ್ಲಿನ ಜನರ ಕಷ್ಟಸುಖಗಳ ಪರಿಚಯವನ್ನು ಸಿಎಂ ಮಾಡಿಕೊಂಡದ್ದು ಇತಿಹಾಸ. ಮುಖ್ಯಮಂತ್ರಿ ತಮ್ಮ 20 ತಿಂಗಳ ಆಡಳಿತಾವಧಿಯಲ್ಲಿ 47 ಗ್ರಾಮ ವಾಸ್ತವ್ಯ ಮಾಡಿದ್ದಾರೆ ಎಂದು ತಿಳಿಸಲಾಗಿದೆ.

ಎಚ್‌ಐವಿ ಪೀಡಿತರ ಮನೆ ವಾಸ್ತವ್ಯಕ್ಕೆ ‘ರಿಚರ್ಡ್ ಗೇರ್’ ಮೆಚ್ಚುಗೆ: ನಂತರದ ದಿನಗಳಲ್ಲಿ ವಿಜಯಪುರದ ಎಚ್‌ಐವಿ ಪೀಡಿತರೊಬ್ಬರ ಮನೆಯನ್ನು ಆರಿಸಿಕೊಂಡು, ಎಚ್‌ಐವಿ ಪೀಡಿತರ ಕುರಿತ ಸಮಾಜದ ತಪ್ಪು ನಂಬಿಕೆಗಳನ್ನು ದೂರ ಮಾಡಿದರು.

ಈ ಘಟನೆಯನ್ನು ಓದಿದ ಹಾಲಿವುಡ್ ನಟ, ಎಚ್‌ಐವಿ ಜಾಗೃತಿ ಮೂಡಿಸುವ ರಾಯಭಾರಿಯೂ ಆಗಿದ್ದ ರಿಚರ್ಡ್ ಗೇರ್ ಅವರು ಈ ಘಟನೆಯಿಂದ ಪ್ರಭಾವಿತರಾಗಿ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದು ಗ್ರಾಮ ವಾಸ್ತವ್ಯದ ಅಪರೂಪದ ಅನುಭವಗಳಲ್ಲೊಂದಾಗಿ ದಾಖಲಾಯಿತು.

ತಮ್ಮ ಆಡಳಿತಾವಧಿಯ ಅತ್ಯುತ್ತಮ ಅನುಭವಗಳು ಗ್ರಾಮ ವಾಸ್ತವ್ಯದಿಂದ ದೊರೆಯಿತಲ್ಲದೆ ಹಲವು ಯೋಜನೆಗಳನ್ನು ರೂಪಿಸಲು ಪ್ರೇರಣೆಯೂ ದೊರೆತಿದ್ದು ಗ್ರಾಮ ವಾಸ್ತವ್ಯದಿಂದಲೇ ಎಂಬುದು ಮುಖ್ಯಮಂತ್ರಿ ಕುಮಾರಸ್ವಾಮಿ ಅನುಭವ ಎಂದು ಗೊತ್ತಾಗಿದೆ.

ಕಾರ್ಯಕ್ರಮ ರೂಪಿಸಲು ಗ್ರಾಮ ವಾಸ್ತವ್ಯ ನೆರವು: ಗ್ರಾಮ ವಾಸ್ತವ್ಯದಿಂದಾಗಿ ಸುಮಾರು ಸಾವಿರದಷ್ಟು ಪ್ರೌಢಶಾಲೆಗಳು, ಸುಮಾರು 500ರಷ್ಟು ಪಿಯು ಹಾಗೂ ಪದವಿ ಕಾಲೇಜುಗಳ ಸ್ಥಾಪನೆಗೆ ಕಾರಣವಾಯಿತು. ಸಾಲಮನ್ನಾ, ಸಾರಾಯಿ ನಿಷೇಧ, ಲಾಟರಿ ನಿಷೇಧ, ಅಂಗವಿಕಲರಿಗೆ ಮಾಸಾಶನ ಸೌಲಭ್ಯಗಳು ಗ್ರಾಮ ವಾಸ್ತವ್ಯದ ಕೊಡುಗೆಗಳು ಎಂದು ಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News