ನೌಕರಿ ಖಾಯಂಗಾಗಿ ಆಗ್ರಹ: ಕೊಡಗು ಜಿಲ್ಲೆಯ ಗ್ರಾ.ಪಂ ನೌಕರರಿಂದ ಧರಣಿ
ಮಡಿಕೇರಿ, ಜೂ.2 : ಗ್ರಾಮ ಪಂಚಾಯತ್ ನೌಕರರನ್ನು ಏಕಕಾಲದಲ್ಲಿ ಖಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡಗು ಜಿಲ್ಲೆಯ ಗ್ರಾ.ಪಂ ನೌಕರರು ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ ಗ್ರಾ.ಪಂಗಳು ಸ್ವತಂತ್ರವಾಗಿ ಸ್ವಯಂ ಆಡಳಿತ ನಡೆಸಬೇಕೆಂಬ ಆದೇಶವಿದ್ದರೂ, ಪಂಚಾಯತ್ ನೌಕರರ ಬಗ್ಗೆ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ರಾಜ್ಯದಲ್ಲಿ 61 ಸಾವಿರ ನೌಕರರಿಗೆ ಈಗಿನ ಕನಿಷ್ಟ ವೇತನ ಮತ್ತು ತುಟ್ಟಿಭತ್ಯೆ ಸೇರಿ ಸುಮಾರು 830 ಕೋಟಿ ಹಣ ಬೇಕಿದೆ. ಆದರೆ ವೇತನಕ್ಕಾಗಿ ಕಳೆದ ವರ್ಷ ನಿಗದಿಯಾಗಿದ್ದ ಹಣವನ್ನು ರೈತರ ಸಾಲ ಮನ್ನಾ ನೆಪದಲ್ಲಿ 312 ಕೋಟಿ ಹಣವನ್ನು ಸರಕಾರ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
ಪಂಚಾಯತ್ ನೌಕರರಿಗೆ ಸರಕಾರ ನಿಗದಿಪಡಿಸಿದ ವೇತನ ಹಾಗೂ ಇತರ ಸೌಲಭ್ಯಗಳನ್ನು ನೀಡಬೇಕೆಂದು ಸರಕಾರದ ಸ್ಪಷ್ಟ ನಿರ್ದೇಶನವಿದ್ದರೂ, ಬಹುತೇಕ ಪಂಚಾಯತ್ಗಳಲ್ಲಿ ನೌಕರರಿಗೆ ವೇತನ ನೀಡದೆ ಆಡಳಿತ ಮಂಡಳಿ ಹಾಗೂ ಅಭಿವೃದ್ಧಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂದು ಟೀಕಿಸಿದರು.
ಬೇಡಿಕೆಗಳು
ಅಪರ ಕಾರ್ಯದರ್ಶಿ ಸ್ವಾಮಿ ಅವರ ವರದಿಯಂತೆ ಎಲ್ಲಾ ನೌಕರರನ್ನು ಏಕಕಾಲದಲ್ಲಿ ಅನುಮೋದನೆ ಮಾಡಬೇಕು. ಕಳೆದ ಒಂದು ವರ್ಷದಿಂದ ಬಾಕಿ ಉಳಿದ ವೇತನ ಇಎಫ್ಎಂಎಸ್ಗೆ ಸೇರದಿರುವವರಿಗೆ ತೆರಿಗೆ ಸಂಗ್ರಹದಲ್ಲಿ ಕೊಡುವಂತಾಗಬೇಕು. ನಿವೃತ್ತಿ ಹೊಂದಿದ ನೌಕರರಿಗೆ ನಿವೃತ್ತಿ ಉಪಧನ ನೀಡಬೇಕು. ಎಲ್ಲ ನೌಕರರಿಗೆ ಸೇವಾ ಪುಸ್ತಕ ತೆರೆಯಬೇಕು. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿರುವ ಸೇವಾ ನಿಯಮಾವಳಿ ರಚಿಸಬೇಕು. ನಿವೃತ್ತಿ ವೇತನ, ಗಳಿಕೆ ರಜೆ, ವಾರಕ್ಕೊಂದು ವೇತನ ಸಹಿತ ರಜೆ. ವೈದ್ಯಕೀಯ ವೆಚ್ಚ, ಸರಕಾರಿ ನೌಕರರಿಗೆ ನೀಡುವಂತೆ ಎಲ್ಲಾ ಗ್ರಾಮ ಪಂಚಾಯತ್ ನೌಕರರಿಗೂ ನೀಡಬೇಕು, ಪಂಚಾಯತ್ ನೌಕರರಿಂದ ಹೊಸ ಬಿಲ್ ಕಲೆಕ್ಟರ್ ಹುದ್ದೆಗೆ ಬಡ್ಡಿ ನೀಡಬೇಕು. ಹೊಸ ಬಿಲ್ ಕಲೆಕ್ಟರ್ ಹುದ್ದೆಗೆ ನೇರ ನೇಮಕಾತಿ ಮಾಡಬಾರದು. ಬಿಲ್ ಕಲೆಕ್ಟರ್ ಹುದ್ದೆಯಿಂದ ಗ್ರೇಡ್2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ಬಡ್ಡಿ ನೀಡಲು 2019ರ ಜೇಷ್ಠತಾ ಪಟ್ಟಿ ಸಿದ್ದಪಡಿಸಬೇಕು. ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಪಿಡಿಒ ಭಡ್ತಿ, ಗ್ರೇಡ್1 ಬಡ್ತಿ ನೀಡಿ ಖಾಲಿಯಾದ ಗ್ರೇಡ್2 ಕಾರ್ಯದರ್ಶಿ ಮತ್ತು ಲೆಕ್ಕ ಸಹಾಯಕ ಹುದ್ದೆಗೆ ನೇಮಕಾತಿ ಮಾಡುವಂತಾಗಬೇಕು. ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಗಳನ್ನು ಬಡ್ತಿಗೆ ಪರಿಗಣಿಸಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿ ಪತ್ರವನ್ನು ಪ್ರತಿಭಟನಾಕಾರರು ಜಿ.ಪಂ ಅಧಿಕಾರಿಗಳಿಗೆ ನೀಡಿದರು.
ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ರಾಮಕೃಷ್ಣ, ಉಪಾಧ್ಯಕ್ಷ ಟಿ.ಕೆ.ಮೂರ್ತಿ, ತಾಲ್ಲೂಕು ಖಜಾಂಚಿ ವಂಸತ್, ಕಾರ್ಯದರ್ಶಿ ಪವಿತ್ರ, ಸದಸ್ಯ ವಿಜಯ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.