ದಾವಣಗೆರೆ: ಕರ್ಕಶ ಶಬ್ಧ ಮಾಡುತ್ತಿದ್ದ ದ್ವಿಚಕ್ರ ವಾಹನಗಳ ವಿರುದ್ಧ ಕಾರ್ಯಾಚರಣೆ ಆರಂಭ

Update: 2019-06-03 17:51 GMT

ದಾವಣಗೆರೆ, ಜೂ.3: ಕರ್ಕಶ ಶಬ್ಧ ಮಾಡುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ಉಂಟು ಮಾಡುತ್ತಿದ್ದ ಬುಲೆಟ್ ಸೇರಿದಂತೆ ಒಟ್ಟು 23 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು, ಅವುಗಳ ಸೈಲೆನ್ಸರ್ ಗಳನ್ನು ಜೆಸಿಬಿ ಯಂತ್ರದಿಂದ ನಾಶಪಡಿಸುವ ಕಾರ್ಯಾಚರಣೆ ಜಿಲ್ಲಾ ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆಗಳು ಜಂಟಿಯಾಗಿ ಸೋಮವಾರದಿಂದ ಆರಂಭಿಸಿವೆ.

ಕೆಲವರು ಬೈಕ್ ನಲ್ಲಿ ರಸ್ತೆಗಳಲ್ಲಿ ಕರ್ಕಶ ಶಬ್ಧ ಮಾಡಿಕೊಂಡು ಶಬ್ಧ ಮಾಲಿನ್ಯ ಉಂಟು ಮಾಡುತ್ತಿದ್ದು, ಮಕ್ಕಳು, ಮಹಿಳೆಯರು, ವಯೋ ವೃದ್ಧರು, ರೋಗಿಗಳಿಗೆ ಕಿರಿಕಿರಿಯುಂಟಾಗುತ್ತಿದ್ದ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಉಭಯ ಇಲಾಖೆಗಳು ಬುಲೆಟ್ ಸೇರಿದಂತೆ ದ್ವಿಚಕ್ರ ವಾಹನಗಳ ಸೈಲೆನ್ಸರ್ ಗಳ ವಿರುದ್ಧ ಪೊಲೀಸ್, ಆರ್‍ಟಿಓ ಜಂಟಿ ಕಾರ್ಯಾಚರಣೆ ಕೈಗೊಂಡವು. 

ಇಲ್ಲಿನ ಎವಿಕೆ ಕಾಲೇಜು ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಜಯದೇವ ವೃತ್ತ, ಡಾ.ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತ, ಡಾ.ಮೋದಿ ವೃತ್ತ ಹೀಗೆ ವಿವಿಧೆಡೆ ಸಂಚಾರಿ ಪೊಲೀಸರು, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ, ಸಿಬ್ಬಂದಿ ಜಂಟಿ ಕಾರ್ಯಾಚರಣೆ ನಡೆಸಿ, ಬುಲೆಟ್ ಸೇರಿದಂತೆ 23 ದ್ವಿಚಕ್ರ ವಾಹನಗಳನ್ನು ತಮ್ಮ ವಶಕ್ಕೆ ಪಡೆದು, ಬಡಾವಣೆ ಪೊಲೀಸ್ ಠಾಣೆ ಆವರಣಕ್ಕೆ ತಂದರು. 

ಮೆಕ್ಯಾನಿಕ್‍ಗೆ ಕರೆಸಿಕೊಂಡು ಅವುಗಳ ಸೈಲೆನ್ಸರ್ ಬಿಚ್ಚಿಸಿ ನಂತರ ಜೆಸಿಬಿ ಯಂತ್ರದಿಂದ ಸಾವಿರಾರು ರೂ. ಮೌಲ್ಯದ ಕರ್ಕಶ ಸದ್ದು ಮಾಡುತ್ತಿದ್ದ ಸೈಲೆನ್ಸರ್ ಗಳನ್ನು ನಾಶಪಡಿಸಲಾಯಿತು. 

ಬೈಕ್‍ಗಳಿಂದ ಕರ್ಕಶ ಶಬ್ಧದ ಹಿನ್ನೆಲೆಯಲ್ಲಿ ಎಸ್ಪಿ ಆರ್.ಚೇತನ್ ಮಾರ್ಗದರ್ಶನದಲ್ಲಿ ಜಿಲ್ಲಾ ಪೊಲೀಸ್ ಹಾಗೂ ಆರ್‍ಟಿಓ ಅಧಿಕಾರಿಗಳ ತಂಡ ಇಂದಿನಿಂದ ಕಾರ್ಯಾಚರಣೆ ಆರಂಭಿಸಿದ್ದು, ನಿರಂತರ ಇದು ಮುಂದುವರಿಯಲಿದೆ. ನಾಳೆಯಿಂದ ಇದೇ ಕಾರ್ಯಾಚರಣೆ ನಗರ, ಜಿಲ್ಲಾದ್ಯಂತ ವಿಸ್ತರಣೆಯಾಗಲಿದೆ.
ವಾಹನ ವಿಮಾ ಮಾಡಿಸದೇ ಇರುವುದು, ಥರ್ಡ್ ಪಾರ್ಟಿ ಇನ್ಷೂರೆನ್ಸ್ ಮಾಡಿಸದೇ ಇರುವುದು, ಕರ್ಕಶ ಸದ್ದು ಮಾಡಿದ್ದು, ಆರ್‍ಟಿಓ ನಿಯಮಾನುಸಾರ ಗಾಡಿ ಇಲ್ಲದ ಪ್ರಕರಣ ಹೀಗೆ ನಾನಾ ಕೇಸ್‍ಗಳನ್ನೂ ಅವುಗಳ ಮಾಲಕರಿಗೆ ವಿಧಿಸಲಾಗಿದೆ ಎಂದು ಡಿಎಸ್ಪಿ ಎಸ್.ಎನ್.ನಾಗರಾಜ ತಿಳಿಸಿದರು. 

ಬುಲೆಟ್ ಸೇರಿದಂತೆ ದ್ವಿಚಕ್ರ ವಾಹನಗಳ ಶೋ ರೂಂ, ಮೆಕ್ಯಾನಿಕ್‍ಗಳಿಗೂ ಸಹ ಎಚ್ಚರಿಕೆ ನೀಡಿದ್ದೇವೆ. ಕಂಪನಿಯಿಂದ ಬಂದ ಸೈಲೆನ್ಸರ್ ಹೊರತುಪಡಿಸಿ ಕರ್ಕಶ ಸದ್ದಿನ ಸೈಲೆನ್ಸರ್ ಅಳವಡಿಸಿದರೆ ಮೆಕ್ಯಾನಿಕ್‍ಗಳ ಮೇಲೂ ಕೇಸ್ ದಾಖಲಿಸುವ ಎಚ್ಚರಿಕೆ ನೀಡಿದ್ದೇವೆ. ಶಬ್ಧ ಮಾಲಿನ್ಯ ಉಂಟು ಮಾಡುವ, ಕರ್ಕಶ ಸದ್ದು ಮಾಡುವಯಾವುದೇ ವಾಹನವಾಗಿದ್ದರೂ ಕ್ರಮ ನಿಶ್ಚಿತ. ಇದಕ್ಕೂ ಸ್ಪಂದಿಸದೇ ಇದ್ದರೆ ಅಂತಹ ವಾಹನಗಳನ್ನು ಜಪ್ತಿ ಮಾಡಿ, ಆರ್‍ಸಿ ಬುಕ್, ಮಾಲಕರ ಡಿಎಲ್ ರದ್ಧುಪಡಿಸಿ, ಕೇಸ್ ಮಾಡುತ್ತೇವೆ ಎಂದು ಡಿಎಸ್ಪಿ ನಾಗರಾಜ ಹೇಳಿದರು. 

ವೃತ್ತ ನಿರೀಕ್ಷಕ ಆನಂದ್, ಆರ್‍ಟಿಓ ಇನ್ಸಪೆಕ್ಟರ್ ಮಹಮ್ಮದ್ ಖಾಲಿದ್, ಸಂಚಾರ ಠಾಣೆಯ ಅಂಜಿನಪ್ಪ, ಹನುಮಂತಪ್ಪ, ಸಿಬ್ಬಂದಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News