ಚಪ್ಪಲಿಯಿಂದ ಹೊಡೆದ ಮಹಿಳೆ: ಅವಮಾನ ತಾಳಲಾರದೇ ಯುವಕ ಆತ್ಮಹತ್ಯೆ

Update: 2019-06-04 17:57 GMT

ಮಂಡ್ಯ, ಜೂ.04: ಮಹಿಳೆಯೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಚಪ್ಪಲಿಯಿಂದ ಥಳಿಸಿದರು ಎಂಬ ಕಾರಣಕ್ಕೆ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆ.ಆರ್​ ಪೇಟೆಯಲ್ಲಿ ನಡೆದಿದೆ.

ಪಟ್ಟಣದ ರಾಮಯ್ಯ ಕಾಲೋನಿಯ ನಿವಾಸಿ ಕೆ.ಬಿ. ಸ್ವತಂತ್ರ(24) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಪಟ್ಟಣ ಪುರಸಭೆಯ ವಸತಿ ಯೋಜನಾ ವಿಭಾಗದಲ್ಲಿ ಹೊರಗುತ್ತಿಗೆಯ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಡೆತ್​ನೋಟ್ ನಲ್ಲಿ​ ತನ್ನ ಸಾವಿಗೆ ತಾನೇ ಕಾರಣ ಎಂದು ಬರೆದಿಟ್ಟು ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಅನಾರೋಗ್ಯದ ಹಿನ್ನೆಲೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದಾಗ ಈ ಘಟನೆ ನಡೆದಿದೆ ಎಂದು ಘಟನೆಯ ವಿವರವನ್ನು ಯುವಕ ದಾಖಲಿಸಿದ್ದಾನೆ. ಆಸ್ಪತ್ರೆಯಲ್ಲಿ ವೈದ್ಯರನ್ನು ಭೇಟಿ ಮಾಡಲು ಸರತಿಯಲ್ಲಿ ನಿಂತಿದ್ದಾಗ, ಸಾಲಿನಲ್ಲಿ ತನ್ನ ಮುಂಭಾಗದಲ್ಲಿದ್ದ ಮಹಿಳೆ ಸಕಾರಣವಿಲ್ಲದೇ ಎಲ್ಲರೆದುರು ನಿಂದಿಸಿ ಚಪ್ಪಲಿಯಲ್ಲಿ ಹೊಡೆದು ಅವಮಾನ ಮಾಡಿದಳು ಎಂದು ಯುವಕ ತಿಳಿಸಿದ್ದಾನೆ. ಘಟನೆಯಿಂದಾಗಿ ತನಗೆ ಅವಮಾನವಾಗಿದ್ದು ಸಾವಿಗೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆದಿದ್ದಾನೆ.

ಘಟನೆಯ ಬಗ್ಗೆ ಪೋಲಿಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಕೆ.ಬಿ.ಸ್ವತಂತ್ರ ಅವರ ನಿಧನಕ್ಕೆ ಪುರಸಭೆ ಸದಸ್ಯ ಗಿರೀಶ್, ಪುರಸಭೆ ಮಾಜಿ ಅಧ್ಯಕ್ಷ ನಾಗರಾಜು, ಮುಖ್ಯಾಧಿಕಾರಿ ಅಶೋಕ್ ತೀವ್ರ ಸಂತಾಪ ಸೂಚಿಸಿದ್ದಾರೆ. ಮೃತ ಸ್ವತಂತ್ರ ಅವರ ಬಂಧುಗಳು ಹಾಗೂ ತಂದೆತಾಯಿಗಳ ಆಕ್ರಂದನ ಮುಗಿಲು ಮುಟ್ಟಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News