ಶಾಂತಿ, ಸೌಹಾರ್ದ ನೆಲೆಸುವಂತೆ ಮಾಡುವಲ್ಲಿ ಪೊಲೀಸರ ಪಾತ್ರ ಶ್ಲಾಘನೀಯ: ಡಾ.ಬಗಾದಿ ಗೌತಮ್

Update: 2019-06-07 18:12 GMT

ಚಿಕ್ಕಮಗಳೂರು, ಜೂ.7: ಸಮಾಜದಲ್ಲಿ ಶಾಂತಿ-ಸೌಹಾರ್ದ-ನೆಮ್ಮದಿ ನೆಲೆಸುವಂತೆ ಮಾಡುವಲ್ಲಿ ಪೊಲೀಸರ ಪಾತ್ರ ಶ್ಲಾಘನೀಯ. ಪೊಲೀಸರು ಕರ್ತವ್ಯ ನಿರ್ವಹಿಸುವುದು ಪ್ರಸಕ್ತ ದಿನಗಳಲ್ಲಿ ಸವಾಲಿನ ಕೆಲಸವಾಗಿದೆ. ಕರ್ತವ್ಯ ನಿರ್ವಹಿಸುವಾಗ ಊಹಿಸದಿರುವ ಸನ್ನಿವೇಶಗಳು ಬರುತ್ತವೆ. ಇಂತಹ ಸಂದರ್ಭಗಳ ನಿರ್ವಹಣೆಗೆ ತರಬೇತಿಗಳು ಅತ್ಯಗತ್ಯ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದರು.

ನಗರದ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ ಹಮ್ಮಿಕೊಂಡಿದ್ದ 12ನೇ ತಂಡದ (3ನೇ ಮಹಿಳಾ) ಪೊಲೀಸ್ ಕಾನ್ಸ್‍ಟೇಬಲ್‍ಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಪ್ರತೀ ಕ್ಷೇತ್ರಗಳಲ್ಲೂ ಮಹಿಳಾ ಪ್ರಾತಿನಿಧ್ಯ ಹೆಚ್ಚಾಗಿ ಕಂಡು ಬರುತ್ತಿದ್ದು, ಪೊಲೀಸ್ ಇಲಾಖೆಯಲ್ಲಿ ಮಹಿಳೆಯರು ಕೂಡ ಹೆಚ್ಚಾಗಿ ಕೆಲಸ ನಿರ್ವಹಿಸುತ್ತಿರುವುದು ಸಂತೋಷದ ವಿಚಾರವಾಗಿದೆ. ಮುಂದಿನ ದಿನಗಳಲ್ಲಿ ಕ್ಷೇತ್ರ ಮಟ್ಟದಲ್ಲಿ ಕೆಲಸ ನಿರ್ವಹಿಸುವಾಗ ಪ್ರತಿಜ್ಞಾವಿಧಿಯನ್ನು ಅನುಸರಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.

ಸುಮಾರು ಎಂಟು ತಿಂಗಳುಗಳ ಕಾಲ ನುರಿತ ತರಬೇತುದಾರರಿಂದ ಮಾರ್ಗದರ್ಶನ ಪಡೆದು ಅವರ ಮಾರ್ಗದರ್ಶನದಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಹಲವಾರು ವಿಷಯಗಳನ್ನು ತಿಳಿದುಕೊಂಡಿದ್ದಾರೆ. ಇಲ್ಲಿ ಕಲಿತದ್ದನ್ನು ಸಮಾಜದ ಒಳಿತಿಗಾಗಿ ಉಪಯೋಗಿಸಬೇಕು. ಕರ್ತವ್ಯ ನಿರ್ವಹಣೆ ವೇಳೆ ತರಬೇತಿಯಲ್ಲಿ ಕಲಿತಿರುವುದನ್ನು ಬಳಸಿದಲ್ಲಿ ಸರಕಾರದ ತರಬೇತಿ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದ ಅವರು, ಪೊಲೀಸ್ ವೃತ್ತಿ ಸಮಾಜದಲ್ಲಿ ಮಹತ್ತರವಾದ ವೃತ್ತಿಯಾಗಿರುವುದರಿಂದ ಸರಕಾರ ಈ ಕೆಲಸಕ್ಕೆ ಸೇರುವವರಿಗೆ ವಿಶೇಷ ತರಬೇತಿ ನೀಡುತ್ತದೆ. ತರಬೇತಿ ಕಾರ್ಯಕ್ರಮದ ಉದ್ದೇಶ ಸಾರ್ಥಕವಾಗುವಂತಾಗಲು ಪ್ರಮಾಣಿಕ ಕರ್ತವ್ಯ ನಿರ್ವಹಣೆ ಅತ್ಯಗತ್ಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ ಮಾತನಾಡಿ, ಪ್ರತಿಜ್ಞಾವಿಧಿಯ ಪ್ರಕಾರ ಯಾವುದೇ ಭಯವಿಲ್ಲದೆ ತರಬೇತಿ ಪಡೆದ ಅಭ್ಯರ್ಥಿಗಳು ಕರ್ತವ್ಯ ನಿರ್ವಹಿಸಬೇಕು. ತರಬೇತಿ ಪಡೆದವರಿಗೆ ಇನ್ನು ಮುಂದೆ ಪೊಲೀಸ್ ಜೀವನದ ತರಬೇತಿ ಪ್ರಾರಂಭವಾಗುತ್ತದೆ. ನಿಮ್ಮ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಯಾವುದೇ ತಪ್ಪುಗಳಾಗದಂತೆ ಕರ್ತವ್ಯ ನಿರ್ವಹಿಸಬೇಕು. ತಪ್ಪುಗಳಾದಾಗ ತಿದ್ದಿಕೊಳ್ಳಬೇಕು. ಪೊಲೀಸ್ ವೃತ್ತಿಯಲ್ಲಿ ಪ್ರತೀ ಕ್ಷಣವೂ ಕಲಿಯುವ ಉತ್ಸಾಹ ಹೊಂದಿರಬೇಕು ಎಂದ ಅವರು, ಪೊಲೀಸ್ ಇಲಾಖೆಯ ಕಾರ್ಯಶೈಲಿಯನ್ನು ತಿಳಿದು ಅದರ ಮೌಲ್ಯಗಳನ್ನು ಅಳವಡಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಪ್ರತೀ ಸಿಬ್ಬಂದಿ ಪೊಲೀಸ್ ಧರ್ಮ ಗ್ರಂಥವನ್ನು ಪಾಲಿಸಬೇಕು. ಜೀವನದಲ್ಲಿ ಶಿಸ್ತನ್ನು ಪಾಲನೆ ಮಾಡುವ ಮೂಲಕ ಶಿಷ್ಟಾಚಾರದಿಂದ ಕೆಲಸ ನಿರ್ವಹಿಸಬೇಕೆಂದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಸ್.ಶೃತಿ ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿ ಅವಧಿಯಲ್ಲಿ 101 ನಾಗರಿಕ ಮಹಿಳಾ ಕಾನ್ಸ್ ಟೇಬಲ್‍ಗಳಿಗೆ ಒಳಾಂಗಣ ಮತ್ತು ಹೊರಾಂಗಣ ಎಂದು ಎರಡು ವಿಭಾಗಗಳಾಗಿ ತರಬೇತಿ ನೀಡಲಾಗಿದೆ. ಪ್ರಶಿಕ್ಷಣಾರ್ಥಿಗಳಿಗೆ ಠಾಣಾ ಕಾರ್ಯ ವೈಖರಿ ಬಗ್ಗೆ ತಿಳುವಳಿಕೆ ಮತ್ತು ಜ್ಞಾನದ ವೃದ್ಧಿಗಾಗಿ ನಗರದ ಹಲವು ಠಾಣೆಗಳಿಗೆ ಭೇಟಿ ಮಾಡಿಸಿ, ಠಾಣಾ ದಿನನಿತ್ಯ ಕರ್ತವ್ಯಗಳ ಮತ್ತು ಠಾಣೆಯಲ್ಲಿ ನಿರ್ವಹಿಸುವ ಪ್ರಮುಖ ಕಡತಗಳ ನಿರ್ವಹಣೆ, ಸಿಬ್ಬಂದಿಯವರ ಕರ್ತವ್ಯ ನಿರ್ವಹಣೆ ಮತ್ತು ಠಾಣಾ ಸ್ವಚ್ಚತೆ, ಸಾರ್ವಜನಿಕರೊಂದಿಗೆ ಕರ್ತವ್ಯ ನಿರ್ವಹಣೆ ಕುರಿತು ಪ್ರಾತ್ಯಕ್ಷತೆ ಮೂಲಕ ತಿಳುವಳಿಕೆಯನ್ನು ನೀಡಲಾಗಿದೆ ಎಂದರು.

ತರಬೇತಿ ಅವಧಿಯಲ್ಲಿ ವಿವಿಧ ವಿಭಾಗಗಳಲ್ಲಿ ಹೆಚ್ಚು ಅಂಕ ಪಡೆದ ಮಹಿಳಾ ಕಾನ್ಸ್ ಟೇಬಲ್ ತರಬೇತುದಾರರಿಗೆ ಬಹುಮಾನ ವಿತರಿಸಲಾಯಿತು. ನಾಲ್ಕು ಮಹಿಳಾ ತುಕುಡಿಗಳಿಂದ ನಿರ್ಗಮನ ಪಥಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಗರಿಮಾ ಪಾಂಡೆ, ಜಿಲ್ಲಾ ಪೊಲೀಸ್ ದೂರುಗಳ ಪ್ರಾಧಿಕಾರದ ಸದಸ್ಯ ನರೇಂದ್ರ ಪೈ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು. ಡಿ.ಸಿ.ಆರ್.ಬಿ ವಿಭಾಗದ ಹಾಲಮ್ಮ ಹಾಗೂ ಎ.ಆರ್.ಎಸ್ ವಿಭಾಗದ ರಾಕೇಶ್ ನಿರೂಪಿಸಿದರು. ಪೊಲೀಸ್ ಉಪಾಧೀಕ್ಷಕ ಬಸಪ್ಪ ಅಂಗಡಿ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News