ಪಿಂಚಣಿ ಅದಾಲತ್ ಅರ್ಥಪೂರ್ಣ ಕೆಲಸ: ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

Update: 2019-06-09 17:10 GMT

ಬೆಳಗಾವಿ, ಜೂ.9: ಸರಕಾರ ಬಡ ಜನರಿಗಾಗಿ ನೂರಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಆದರೆ, ಅರ್ಹರಿಗೆ ಈ ಯೋಜನೆಗಳ ಸೌಲಭ್ಯ ನಿಜವಾಗಿಯೂ ತಲುಪುತ್ತಿದೆಯೇ ಇಲ್ಲವೇ ಎಂಬುದು ಈ ರೀತಿಯ ಅದಾಲತ್ ಕಾರ್ಯಕ್ರಮಗಳಿಂದ ತಿಳಿಯುತ್ತದೆ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಹಾಗೂ ಮೈಸೂರು ಮಿನರಲ್ಸ್ ನಿಗಮದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದ್ದಾರೆ.

ರವಿವಾರ ತಮ್ಮ ಕ್ಷೇತ್ರದಲ್ಲಿ ಆಯೋಜಿಸಿದ್ದ ಮೂರು ದಿನಗಳ ಪಿಂಚಣಿ ಅದಾಲತ್‌ನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಿಂಚಣಿ ಅದಾಲತ್ ನಿಜವಾಗಿಯೂ ಅರ್ಥಪೂರ್ಣವಾದ ಕೆಲಸ ಎಂದರು.

ರಸ್ತೆ, ಚರಂಡಿಗಳ ಕೆಲಸವನ್ನು ಎಲ್ಲರೂ ಮಾಡುತ್ತಾರೆ. ಆದರೆ ಮಾಡಬೇಕಾದ ನಿಜವಾದ ಕೆಲಸ ಇಲ್ಲಿದೆ. ಸರಕಾರ ಬಡ ಜನರಿಗಾಗಿ ನೂರಾರು ಯೋಜನೆಗಳನ್ನು ತರುತ್ತದೆ. ಆದರೆ ಅರ್ಹರಿಗೆ ತಲುಪುತ್ತಲೇ ಇಲ್ಲ ಎನ್ನುವ ನೈಜ್ಯ ಸತ್ಯ ಇಂತಹ ಅದಾಲತ್ ನಡೆಸಿದಾಗ ತಿಳಿಯುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಮಧ್ಯವರ್ತಿಗಳ ಕಾರಣದಿಂದಲೋ, ಅಧಿಕಾರಿಗಳ ನಿರ್ಲಕ್ಷದಿಂದಲೋ ಗೊತ್ತಿಲ್ಲ. ಇಂದೊ, ನಾಳೆಯೋ ಸಾಯುವಂತಹ ಸ್ಥಿತಿಯಲ್ಲಿರುವವರಿಗೆ ಪಿಂಚಣಿ ಸಿಕ್ಕಿಲ್ಲ. ಕಾಲಿಲ್ಲದವರಿಗೆ, ಕೈಯಿಲ್ಲದವರಿಗೆ, ಕಣ್ಣಿಲ್ಲದವರಿಗೆ ಮಾಸಾಶನ ಕೊಟ್ಟಿಲ್ಲ. ಎಂತೆಂತಹ ದಯನೀಯ ಸ್ಥಿತಿಯಲ್ಲಿರುವವರೆಲ್ಲ ಅರ್ಜಿ ಹಿಡಿದು ಬರುತ್ತಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದರು. ಈ ಜನರು ಪಡುತ್ತಿರುವ ಪಾಡು ನೋಡಿದರೆ ಕರುಳು ಕಿತ್ತು ಬರುತ್ತದೆ. ಇಂತವರ ಮನೆ ಬಾಗಿಲಿಗೆ ಹೋಗಿ ಕಿಂಚಿತ್ ಸಹಾಯ ಮಾಡುವ ಅವಕಾಶ ನನಗೆ ಸಿಕ್ಕಿದ್ದು ಯಾವ ಜನ್ಮದ ಪುಣ್ಯವೋ ತಿಳಿಯುತ್ತಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಭಾವುಕರಾದರು. 

ಅಧಿಕಾರಿಗಳ ತಂಡದೊಂದಿಗೆ ಕುದ್ರೆಮನಿ, ತುರಮುರಿ ಮತ್ತು ಉಚಗಾಂವ್ ಗ್ರಾಮಗಳಲ್ಲಿ 3 ದಿನ ನಿರಂತರವಾಗಿ ಪಿಂಚಣಿ ಅದಾಲತ್ ನಡೆಸಲಾಯಿತು. ಮಾಸಾಶನಕ್ಕಾಗಿ 400ಕ್ಕೂ ಹೆಚ್ಚು ಹಾಗೂ ಪಡಿತರ ಚೀಟಿಗಾಗಿ 100ಕ್ಕೂ ಹೆಚ್ಚು ಅರ್ಜಿಗಳು ಬಂದವು. ಅರ್ಹರಿದ್ದವರಿಗೆ ಸ್ಥಳದಲ್ಲೇ ಮಂಜೂರು ಮಾಡಲು ಲಕ್ಷ್ಮಿ ಹೆಬ್ಬಾಳ್ಕರ್ ಅಧಿಕಾರಿಗಳಿಗೆ ಸೂಚಿಸಿದರು. ಉಳಿದವನ್ನು ಪರಿಶೀಲಿಸಿ, ವಾರದೊಳಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದರು. ಕಳೆದ ವರ್ಷ ಸಾಂಬ್ರಾ ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಪಿಂಚಣಿ ಅದಾಲತ್ ನಡೆಸಿದಾಗ 800 ಜನರಿಗೆ ಪಿಂಚಣಿ ಮಂಜೂರು ಮಾಡಿಸಲಾಗಿತ್ತು. ಇನ್ನುಳಿದ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲೂ ಶೀಘ್ರದಲ್ಲೆ ಪಿಂಚಣಿ ಅದಾಲತ್ ನಡೆಸುವುದಾಗಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.

ನೇತ್ರ ಚಿಕಿತ್ಸೆ ವೆಚ್ಚ ಭರಿಸುವ ಭರವಸೆ: ಉಚಗಾಂವ್‌ನಲ್ಲಿ ಶನಿವಾರ ನಡೆದ ಉಚಿತ ಕಣ್ಣು ತಪಾಸಣೆ ಶಿಬಿರದಲ್ಲಿ 150ಕ್ಕೂ ಹೆಚ್ಚು ಜನರು ಕಣ್ಣು ತಪಾಸಣೆ ಮಾಡಿಸಿಕೊಂಡರು. ಅವರಲ್ಲಿ 57 ಜನರಿಗೆ ಕನ್ನಡಕ ಅಗತ್ಯವಾಗಿದ್ದು, 27 ಜನರಿಗೆ ಶಸ್ತ್ರ ಚಿಕಿತ್ಸೆ ಅಗತ್ಯವಿದ್ದು, ಎಲ್ಲವನ್ನೂ ಉಚಿತವಾಗಿ ಮಾಡಿಸಿಕೊಂಡುವುದಾಗಿ ಅವರು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News