×
Ad

ಕೊಡಗಿನಲ್ಲಿ ಮುಂಗಾರು ಹನಿ ಸಿಂಚನ: ಎರಡು ದಿನಗಳಲ್ಲಿ ಉತ್ತಮ ಮಳೆ ಸಾಧ್ಯತೆ

Update: 2019-06-10 23:59 IST

ಮಡಿಕೇರಿ, ಜೂ.10: ಕಾವೇರಿನಾಡು ಕೊಡಗಿನಲ್ಲಿ ಮುಂಗಾರು ಹನಿ ಸಿಂಚನವಾಗಿದೆ. ಹವಾಮಾನ ಇಲಾಖೆಯ ಪೂರ್ವ ಸೂಚನೆಗೆ ಪೂರಕವೆಂಬಂತೆ ಇಂದು ಮುಂಜಾನೆಯಿಂದಲೆ ಮೋಡ ಕವಿದ ಮಂಜಿನ ವಾತಾವರಣದೊಂದಿಗೆ, ನಿರಂತರವಾಗಿ ಹನಿ ಮಳೆ ಕಾಣಿಸಿಕೊಂಡಿದ್ದು, ಮಳೆಗಾಲದ ವಾತಾವರಣ ಅನಾವರಣಗೊಂಡಿದೆ.

ನೆರೆಯ ಕೇರಳಕ್ಕೆ ಇದೇ ಜೂ.6 ರಂದು ನೈಋತ್ಯ ಮಾರುತಗಳ ಪ್ರವೇಶದಿಂದ ಅಧಿಕೃತವಾಗಿ ಮಳೆಗಾಲ ಆರಂಭವಾಗಿದ್ದು, ಹವಾಮಾನ ಇಲಾಖೆ ಕೊಡಗು ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿತ್ತು. ಅದರ ಪ್ರಕಾರ ದಟ್ಟ ಮೋಡಗಳು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಹನಿಮಳೆಗೆ ಕಾರಣವಾಗಿರುವುದರಿಂದ, ಉರಿಬಿಸಿಲ ಬೇಗೆ ಮರೆಯಾಗಿ ತಣ್ಣನೆಯ ವಾತಾವರಣ ಮನೆ ಮಾಡಿದೆ.

ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂಗಾರು ಮಾರುತಗಳು ಕ್ಷೀಣಗೊಂಡಿರುವ ಕಾರಣದಿಂದ ತುಂತುರು ಮಳೆ ಕಾಣಿಸಿಕೊಂಡಿದೆ. ಮುಂದಿನ ಒಂದೆರಡು ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಈಗಾಗಲೆ ಜಿಲ್ಲಾ ವ್ಯಾಪ್ತಿಯಲ್ಲಿ ಮಳೆಯ ವಾತಾವರಣ ಕಂಡು ಬಂದಿರುವುದರಿಂದ ಶಾಲಾ ಮಕ್ಕಳಾದಿಯಾಗಿ ಸಾರ್ವಜನಿಕರು ಕೊಡೆ, ರೈನ್‍ಕೋಟ್‍ಗಳೊಂದಿಗೆ ತೆರಳುತ್ತಿರುವ ದೃಶ್ಯ ಮಳೆಗಾಲಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಕೊಡಗಿನಲ್ಲಿ ಜೂನ್ ತಿಂಗಳ ಮಳೆಯೊಂದಿಗೆ ಭತ್ತದ ಕೃಷಿ ಚಟುವಟಿಕೆಗಳು, ತೋಟಗಳಲ್ಲಿ ಕಾಫಿ ಗಿಡಗಳಿಗೆ ಗೊಬ್ಬರವನ್ನು ನೀಡುವ ಕಾರ್ಯ ಚುರುಕುಗೊಳ್ಳಲಿದೆ. ಇಲ್ಲಿಯವರೆಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಮಳೆಯಾಗುತ್ತಿತ್ತಾದರು, ಮಳೆಗಿಂತಲೂ ಹೆಚ್ಚಿನ ಬಿಸಿಲಿನ ಕಾವು ಜಿಲ್ಲೆಯ ಜನತೆಯನ್ನು ಹೈರಾಣಾಗಿಸಿತ್ತು. 

ಜನತೆಯಲ್ಲಿ ಮಳೆಗಾಲದ ಹರ್ಷದೊಂದಿಗೆ ಕಳೆದ ವರ್ಷದ ಮಳೆಹಾನಿಯ ಕಹಿ ಅನುಭವವು ತಳುಕು ಹಾಕಿಕೊಳ್ಳತೊಡಗಿದೆ. ಈ ಬಾರಿಯ ವರ್ಷಾಧಾರೆ ಮತ್ತೆ ಅಂತಹದ್ದೇ ವಿಕೋಪಗಳಿಗೆ ಕಾರಣವಾಗದಿರಲಿ ಎಂದು ಜನತೆ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.

ಜೀವನದಿ ಕಾವೇರಿಯ ಒಡಲು ತುಂಬುವ ಕೊಡಗು ಜಿಲ್ಲೆಯಲ್ಲಿ ನದಿಗಳು ತುಂಬಿ ಹರಿದರೆ ಮಾತ್ರ ನೆರೆ ಜಿಲ್ಲೆ ಹಾಗೂ ರಾಜ್ಯದ ಕೋಟ್ಯಾಂತರ ಜನ ನೆಮ್ಮದಿಯಾಗಿರಲು ಸಾಧ್ಯವಾಗಲಿದೆ. ಈ ಬಾರಿ ಯಾವುದೇ ಅನಾಹುತವನ್ನು ಸೃಷ್ಟಿಸದೆ ಜನೋಪಕಾರಿ ಮಳೆಯಾಗಲಿ ಎಂದು ಪರಿಸರ ಪ್ರಿಯರು ಆಶಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News