ಕುಮಾರಸ್ವಾಮಿ ವಂಚಕರೊಂದಿಗೆ ಬಿರಿಯಾನಿ ತಿನ್ನುತ್ತಿದ್ದಾರೆ: ಟ್ವೀಟರ್ನಲ್ಲಿ ಸಿಎಂ ವಿರುದ್ಧ ಬಿಜೆಪಿ ಕಿಡಿ
Update: 2019-06-11 16:26 GMT
ಬೆಂಗಳೂರು, ಜೂ.11: ಕಳೆದ ವರ್ಷ ರಮಝಾನ್ ಮಾಸದಲ್ಲಿ ಐಎಂಎ ಮುಖ್ಯಸ್ಥ ಮುಹಮ್ಮದ್ ಮನ್ಸೂರ್ ಖಾನ್ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪಾಲ್ಗೊಂಡಿದ್ದ ಭಾವಚಿತ್ರವನ್ನು ಪ್ರತಿಪಕ್ಷ ಬಿಜೆಪಿ, ಟ್ವಿಟರ್ನಲ್ಲಿ ಹಾಕಿ ಅವರ ವಿರುದ್ಧ ಕಿಡಿಕಾರಿದೆ.
‘ಈ ವಂಚಕನನ್ನು ನೀವು ಬಹಳ ಹಿಂದಿನಿಂದ ಬಲ್ಲವರಾಗಿದ್ದೀರಾ. ಆತನನ್ನು ಶೀಘ್ರವೇ ಹಿಡಿಯಲು ಸಹಕಾರ ನೀಡಿ. ಟ್ವಿಟರ್ನಲ್ಲಿ ಅಳುವವರನ್ನು ಹಿಡಿಯುವುದಲ್ಲ, ವಂಚಕರನ್ನು ಹಿಡಿಯುವುದು ನಿಮ್ಮ ಕೆಲಸವಾಗಬೇಕು. ನಿಮ್ಮ ಆದ್ಯತೆ ತಿಳಿಸಿ’ ಎಂದು ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಟ್ವೀಟ್ ಮಾಡಿದೆ.
‘ನಾನು ತಿನ್ನುತ್ತೇನೆ, ನೀನು ತಿನ್ನು’ ಅನ್ನೋದು ಜೆಡಿಎಸ್ ಪಕ್ಷದ ನಿಲುವು. ಮುಹಮ್ಮದ್ ಮನ್ಸೂರ್ ಖಾನ್ ಅವರಂತಹ ವಂಚಕರು ತಿಂದು, ಲೂಟಿ ಹೊಡೆದು ಪರಾರಿಯಾಗುತ್ತಾರೆ. ಆದರೆ, ಕುಮಾರಸ್ವಾಮಿಯವರು ವಂಚಕರೊಂದಿಗೆ ಬಿರಿಯಾನಿ ತಿನ್ನುತ್ತಿದ್ದಾರೆ’ ಎಂದು ಬಿಜೆಪಿ ಟ್ವೀಟ್ನಲ್ಲಿ ಟೀಕಿಸಿದೆ.