ಆನೆಕಾಡು ಬಳಿ ಕಾರುಗಳ ನಡುವೆ ಮುಖಾಮುಖಿ ಢಿಕ್ಕಿ: ಇಬ್ಬರು ಸಾವು
ಮಡಿಕೇರಿ, ಜೂ.13 : ಎರಡು ಕಾರುಗಳು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಒಂದೇ ಕುಟುಂಬದ ಇಬ್ಬರು ಮೃತಪಟ್ಟ ಘಟನೆ ಮಡಿಕೇರಿ, ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆನೆಕಾಡು ಬಳಿ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಮೆಲ್ಲಳ್ಳಿ ಗ್ರಾಮದ ಸತೀಶ್ (42) ಮತ್ತು ಆತನ ಸಹೋದರಿ ಜ್ಯೋತಿ (36) ಮೃತಪಟ್ಟವರು. ಪಿರಿಯಾಪಟ್ಟಣದಿಂದ ಅಲ್ಟೋ ಕಾರಿನಲ್ಲಿ ಕಾರ್ಯನಿಮಿತ್ತ ಮಡಿಕೇರಿ ಕಡೆಗೆ ಬರುತ್ತಿದ್ದ ಸಂದರ್ಭ ದುರ್ಘಟನೆ ಸಂಭವಿಸಿದೆ.
ಮಡಿಕೇರಿ ಕಡೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಐ-20 ಕಾರು ಢಿಕ್ಕಿ ಹೊಡೆದ ಪರಿಣಾಮ ಅಲ್ಟೋ ಕಾರು ರಸ್ತೆಯಿಂದ ಕಾಡಿನ ಅಂಚಿಗೆ ಎಸೆಯಲ್ಪಟ್ಟಿದೆ. ಈ ಸಂದರ್ಭ ಅಲ್ಟೋ ಕಾರಿನಲ್ಲಿದ್ದ ಸತೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆತನ ಸಹೋದರಿ ಜ್ಯೋತಿ ತೀವ್ರ ಗಾಯಗೊಂಡು ಕುಶಾಲನಗರ ಸರಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮಡಿಕೇರಿ ಕಡೆಯಿಂದ ತೆರಳುತ್ತಿದ್ದ ಕಾರಿನಲ್ಲಿದ್ದ ಬೆಂಗಳೂರಿನ ಓರ್ವ ಪುರುಷ ಹಾಗೂ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದೆ. ಮೃತ ಸತೀಶ್ ಮತ್ತು ಜ್ಯೋತಿ ಮೆಲ್ಲೇನಹಳ್ಳಿಯ ಕೃಷಿಕರಾದ ಶಿವಲಿಂಗೇಗೌಡ ಅವರ ಮಕ್ಕಳಾಗಿದ್ದು ಮೃತ ಸತೀಶ್ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದರೆ, ಜ್ಯೋತಿ ಓರ್ವ ಪುತ್ರಿಯನ್ನು ಅಗಲಿದ್ದಾರೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.