ಕಾಫಿ ಬೆಳೆಗಾರರಿಗೆ ಒತ್ತುವರಿ ಜಮೀನು ಗುತ್ತಿಗೆ ನೀಡಲು ಸರಕಾರ ಮುಂದಾಗಲಿ: ಸಂಸದೆ ಶೋಭಾ

Update: 2019-06-13 12:19 GMT

ಚಿಕ್ಕಮಗಳೂರು, ಜೂ.13: ಕಾಫಿ ಉದ್ಯಮದ ಸಮಸ್ಯೆ ಸಂಬಂಧ ಈಗಾಗಲೇ ಬೇಲೂರಿನಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದ್ದು, ಸಭೆಯಲ್ಲಿ ಕಾಫಿ ಬೆಳೆಗಾರರು ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಲೀಸ್ ಆಧಾರದ ಮೇಲೆ ಬೆಳೆಗಾರರಿಗೆ ಬಿಟ್ಟುಕೊಡಬೇಕೆಂಬ ವಿಚಾರ ಚರ್ಚೆಗೊಳಪಟ್ಟಿದೆ. ಅದರಂತೆ ಹಿಂದೆ ಸಿದ್ದರಾಮಯ್ಯ ಸರಕಾರ ನೀಡಿದ ಭರವಸೆಯಂತೆ ಬೆಳೆಗಾರರು ಒತ್ತುವರಿ ಮಾಡಿದ ಜಮೀನನ್ನು ಲೀಸ್ ಆಧಾರದ ಮೇಲೆ ಅವರಿಗೇ ಬಿಟ್ಟುಕೊಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಗುರುವಾರ ನಗರಸಭೆ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ಕೈಗಾರಿಕೆಗಳಿಗೆ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ನೀಡಲಾಗುತ್ತದೆ. ರಾಜ್ಯ ಸರಕಾರದ ಜಿಂದಾಲ್ ಸಂಸ್ಥೆಗೆ ಭೂಮಿಯನ್ನು ಮಾರಾಟ ಮಾಡುವ ವಿಚಾರದ ಬಗ್ಗೆಯೂ ಸದ್ಯ ಚರ್ಚೆಯಾಗುತ್ತಿದೆ. ಅದೇ ರೀತಿ 10 ಎಕರೆ ಒಳಗೆ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಕಾಫಿ ಬೆಳೆಗಾರರಿಗೇ ಗುತ್ತಿಗೆ ಆಧಾರದ ಮೇಲೆ ನೀಡಲು ರಾಜ್ಯ ಸರಕಾರ ಮುಂದಾಗಬೇಕೆಂದು ಶೋಭಾ ಒತ್ತಾಯಿಸಿದರು.

ಬುಧವಾರ ಹಾಸನ ಜಿಲ್ಲೆ ಬೇಲೂರಿನಲ್ಲಿ ಕಾಫಿ ಬೆಳೆಗಾರರೊಂದಿಗೆ ಸಭೆ ನಡೆದಿದ್ದು, ಸಭೆಯಲ್ಲಿ ತಾನೂ ಸೇರಿದಂತೆ ಕಾಫಿ ಬೆಳೆಯುವ ಪ್ರದೇಶಗಳ ಸಂಸದರಾದ ಪ್ರಜ್ವಲ್ ರೇವಣ್ಣ, ಪ್ರತಾಪ್ ಸಿಂಹ, ತೇಜಸ್ವಿ ಸೂರ್ಯ ಸೇರಿದಂತೆ ಹಲವರಿದ್ದರು. ಸಭೆಯಲ್ಲಿ ಕಾಫಿ ಬೆಳೆಗಾರರು ಹಲವು ವಿಚಾರಗಳನ್ನು ಪ್ರಸ್ತಾಪಿಸಿದ್ದು, 10 ಎಕರೆ ಒಳಗಿನ ಜಮೀನನ್ನು ಬೆಳೆಗಾರಿಗೆ ಲೀಸ್‍ಗೆ ನೀಡಬೇಕೆಂಬುದು ಬಿಜೆಪಿ ಪಕ್ಷದ ಕೊಡಬೇಕೆಂಬುದು ನಮ್ಮ ಪಕ್ಷದ ನಿಲುವಾಗಿದೆ. ಹಿಂದಿನ ರಾಜ್ಯ ಸರಕಾರ ಈ ವಿಚಾರವನ್ನು ಹಲವು ಬಾರಿ ಪ್ರಸ್ತಾಪಿಸಲಾಗಿದ್ದು, ಸಮ್ಮಿಶ್ರ ಸರಕಾರ ಈ ಸಂಬಂಧ ರೂಪುರೇಷೆಗಳನ್ನು ಸಿದ್ಧಪಡಿಸಲಿ. ಸರ್ವಪಕ್ಷಗಳ ಸಭೆ ಕರೆದು ಚರ್ಚಿಸಿ ನಿರ್ಣಯ ಕೈಗೊಳ್ಳಲಿ ಎಂದರು.

ದೇಶದ ಯಾವುದೇ ರಾಜ್ಯದಲ್ಲಿಯೂ ಮೆಣಸಿಗೆ ಎಪಿಎಂಸಿಯಲ್ಲಿ ತೆರಿಗೆ ವಿಧಿಸುವುದಿಲ್ಲ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಮೆಣಸಿಗೆ ಎಪಿಎಂಸಿಯಲ್ಲಿ ತೆರಿಗೆ ವಿಧಿಸಲಾಗುತ್ತಿದೆ. ಇದರಿಂದಾಗಿ 1 ಕೆಜಿ ಮೆಣಸಿಗೆ 350 ರೂ. ಇದ್ದರೆ 25 ರೂ. ಅನ್ನು ಬೆಳೆಗಾರರು ತೆರಿಗೆ ರೂಪದಲ್ಲಿ ಕಟ್ಟುವಂತಾಗಿದೆ. ಕೂಡಲೆ ಎಪಿಎಂಸಿಯಲ್ಲಿ ಮೆಣಸಿಗೆ ವಿಧಿಸಲಾಗುತ್ತಿರುವ ತೆರಿಗೆಯನ್ನು ರದ್ದುಪಡಿಸಬೇಕೆಂಬ ಬೇಡಿಕೆ ಬೆಳೆಗಾರರದ್ದಾಗಿದೆ ಎಂದ ಅವರು, ರಾಜ್ಯ ಸರಕಾರ ಈ ತೆರಿಗೆ ರದ್ದುಗೊಳಿಸಲು ಮುಂದಾಗಬೇಕೆಂದ ಅವರು, ಕಳೆದ ವರ್ಷ ಕೊಡಗಿನಲ್ಲಿ ಅತಿವೃಷ್ಟಿಯಿಂದ ಊರಿಗೆ ಊರೇ ಕೊಚ್ಚಿ ಹೋಗಿದೆ. ಆದರೂ ರಾಜ್ಯ ಸರಕಾರ ಈವರೆಗೂ ಪರಿಹಾರ ನೀಡಿಲ್ಲ. ಎನ್.ಡಿ.ಆರ್.ಎಫ್. ಮತ್ತು ಎಸ್.ಡಿ.ಆರ್.ಎಫ್.ನಿಂದ ಪ್ರತೀ ಹೆಕ್ಟೇರ್ ಗೆ ಕೇವಲ 35 ಸಾವಿರ ರೂ. ನೀಡಲಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ 119 ಕೋಟಿ ರೂ. ಇದ್ದು, ಪ್ರತೀ ಹೆಕ್ಟೇರ್ ಗೆ 18 ಲಕ್ಷ ರೂ. ಪರಿಹಾರ ನೀಡಬೇಕೆಂದು ಬೆಳೆಗಾರರು ಒತ್ತಾಯಿಸಿದ್ದಾರೆ. 9 ವರ್ಷಗಳ ಹಿಂದೆ ತಾವು ಇಂದನ ಸಚಿವರಾಗಿದ್ದಾಗ ಪಡುಬಿದ್ರಿಯಿಂದ ಶಾಂತಿಗ್ರಾಮದವರೆಗೆ ವಿದ್ಯುತ್ ಲೈನ್ ಎಳೆಸಿದ್ದಾಗ ಪ್ರತೀ ಹೆಕ್ಟೇರ್ ಜಮೀನಿಗೆ ಅಂದೇ 17.50 ಲಕ್ಷ ರೂ. ಪರಿಹಾರ ನೀಡಿದ್ದೆ. ಅಂದೇ ತಾವು ಅಷ್ಟು ಪರಿಹಾರ ನೀಡಿರುವಾಗ ಈಗ ರಾಜ್ಯ ಸರಕಾರಕ್ಕೆ ಪರಿಹಾರ ನೀಡಲು ಕಷ್ಟವೇನು ಎಂದು ಪ್ರಶ್ನಿಸಿದರು.

ಕಾಫಿ ಮಂಡಳಿ ಕಾರ್ಯದರ್ಶಿಗಳು ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲವೆಂಬ ದೂರು ಹೆಚ್ಚಾಗಿವೆ. ಹಿಂದೆಯೇ ಅವರನ್ನು ಬದಲಿಸಲು ಉದ್ದೇಶಿಸಲಾಗಿತ್ತು. ಆದರೆ ಕೆಲವೊಂದು ಕಾರಣಗಳಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಅವರು ರಾಜ್ಯ ಸರಕಾರದ ಅಧಿಕಾರಿಯಾಗಿದ್ದಾರೆ. ಕೂಡಲೆ ಅವರನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ರಾಜ್ಯ ಸರಕಾರವನ್ನು ಕೋರಲಾಗುವುದು ಎಂದ ಅವರು, ಬೆಳೆಗಾರರಿಗೆ ಒತ್ತುವರಿ ಜಮೀನು ಲೀಸ್‍ಗೆ ನೀಡುವುದು, ಕಾಳು ಮೆಣಸು ತೆರಿಗೆ ಹಾಗೂ ಅತೀವೃಷ್ಟಿ ಪರಿಹಾರ ಈ ಮೂರು ಅಂಶಗಳು ರಾಜ್ಯ ಸರಕಾರಕ್ಕೆ ಸಂಬಂಧಪಟ್ಟಿವೆ. ಶೀಘ್ರ ಸಿಎಂ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಚರ್ಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮುಖ್ಯಮಂತ್ರಿಗಳ ಸಮಯ ಪಡೆದುಕೊಳ್ಳಲು ತಿಳಿಸಲಾಗಿದೆ ಎಂದರು.

ಜಿಲ್ಲೆಯ ರೈಲ್ವೆ ಮಾರ್ಗಗಳನ್ನು ಡಬಲ್ ಟ್ರಾಕ್ ಮಾಡಬೇಕಿದೆ. ನಗರಿಂದ ಬೆಂಗಳೂರಿಗೆ ತೆರಳುತ್ತಿರುವ ರೈಲಿನ ಸಮಯ ಕಡಿಮೆಗೊಳಿಸುವಂತೆ ಒತ್ತಡವಿದೆ. ಅದರೊಂದಿಗೆ ಹೊಸ ರೈಲನ್ನು ಓಡಿಸಲು ಕೂಡ ಪ್ರಯತ್ನಿಸಲಾಗುವುದು ಎಂದ ಅವರು, ಕಳೆದ ಅವಧಿಯಲ್ಲಿ ಜಿಲ್ಲೆಗೆ ಹಲವು ಕೆಲಸಗಳನ್ನು ಮಾಡಲಾಗಿದೆ. ನಗರಕ್ಕೆ ಕೇಂದ್ರೀಯ ವಿದ್ಯಾಲಯವನ್ನು ಮಂಜೂರು ಮಾಡಲಾಗಿದೆ. ಅದರ ಕಟ್ಟಡ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮಾಡಿಸಲಾಗುವುದು. ಇ.ಎಸ್.ಐ. ಡಿಸ್ಪೆನ್ಸರಿಯನ್ನು ಮಂಜೂರು ಮಾಡಲಾಗಿದ್ದು, ಸುಸಜ್ಜಿತ ಆಸ್ಪತ್ರೆ ಮಂಜೂರಾತಿಗೆ ಯತ್ನಿಸಲಾಗುವುದು ಎಂದು ಹೇಳಿದರು. 

ಜಿಲ್ಲಾ ಬಿಜೆಪಿ ಅಧ್ಯಕ್ಷ ಡಿ.ಎನ್.ಜೀವರಾಜ್, ಶಾಸಕ ಕುಮಾರಸ್ವಾಮಿ ಈ ವೇಳೆ ಉಪಸ್ಥಿತರಿದ್ದರು.

ಕಳೆದ ಕೇಂದ್ರ ಸರಕಾರ ಮೆಣಸಿನ ಆಮದಿನ ಮೇಲೆ ತೆರಿಗೆಯನ್ನು ಹೆಚ್ಚಿಸಿದ್ದರಿಂದಾಗಿ ಮೆಣಸಿನ ಬೆಲೆ ಸ್ಥಿರವಾಗಿತ್ತು. ಅಕ್ರಮವಾಗಿ ದೇಶಕ್ಕೆ ಆಮದಾಗುವ ಮೆಣಸನ್ನು ತಡೆಗಟ್ಟಬೇಕಾಗಿದೆ. ಈ ವಿಚಾರವಾಗಿ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು. ಈ ಹಿಂದಿನ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರೇ ಈಗ ಹಣಕಾಸು ಸಚಿವರಾಗಿದ್ದಾರೆ. ಅವರಿಗೆ ಕಾಫಿ ಸಮಸ್ಯೆ ಕುರಿತು ಹೆಚ್ಚಿನ ಮಾಹಿತಿ ಇದೆ. ಕೇಂದ್ರದಿಂದ ಕಾಫಿ ಬೆಳೆಗಾರರಿಗೆ ಆಗಬೇಕಿರುವ ಕೆಲಸದ ಕುರಿತು ಚರ್ಚಿಸಲು ಕಾಫಿ ಬೆಳೆಗಾರರ ನಿಯೋಗವನ್ನು ಜುಲೈ ತಿಂಗಳಲ್ಲಿ ಕರೆದೋಯ್ಯಲಾಗುವುದು. 
- ಶೋಭಾ ಕರಂದ್ಲಾಜೆ, ಸಂಸದೆ

ಉದ್ಯೋಗ ಖಾತ್ರಿ ಯೋಜನೆ ವ್ಯಾಪ್ತಿಯಿಂದ ಕಾಫಿ ತೋಟಗಳನ್ನು ಹೊರಗಿಡಲಾಗಿದೆ. ಕಾಫಿ ತೋಟಗಳನ್ನೂ ಸೇರಿಸಿದರೆ ಸಣ್ಣ ಬೆಳೆಗಾರರಿಗೆ ಅನುಕೂಲವಾಗುವುದರಿಂದ ಈ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚಿಸಲಾಗುವುದು. ಕಾಫಿಗೆ ಚಿಕೋರಿಯನ್ನು ಶೇ.49 ರಷ್ಟು ಸೇರಿಸಲು ಅವಕಾಶವಿದ್ದು, ಇದನ್ನು ಶೇ.28ಕ್ಕೆ ಇಳಿಸುವಂತೆ ಕಾಫಿ ಬೆಳೆಗಾರರು ಕೋರಿದ್ದಾರೆ. ಈ ಬಗ್ಗೆ ಎಫ್.ಎಸ್.ಎಸ್.ಎ.ಐ.ಗೆ ಪತ್ರ ಬರೆದು ಪರಿಶೀಲಿಸಲು ಕೋರಲಾಗುವುದು.
- ಶೋಭಾ ಕರಂದ್ಲಾಜೆ, ಸಂಸದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News