ಶಿವಮೊಗ್ಗ: ಸಂಸದ ಬಿ.ವೈ.ರಾಘವೇಂದ್ರರ ಕಚೇರಿ ಉದ್ಘಾಟನೆ
ಶಿವಮೊಗ್ಗ, ಜೂ. 13: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರರವರ ಅಧಿಕೃತ ಕಚೇರಿಯು ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿರುವ ತಹಶೀಲ್ದಾರ್ ಕಚೇರಿಯಲ್ಲಿ ಗುರುವಾರ ವಿಧ್ಯುಕ್ತವಾಗಿ ಆರಂಭಗೊಂಡಿತು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದರು, 'ಜನಸ್ನೇಹಿಯಾಗಿ ಜನರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ತಮ್ಮ ಕಚೇರಿ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರ ಸೇವೆಗೆ ಕಚೇರಿ ಸದಾ ಮುಕ್ತವಾಗಿರಲಿದೆ' ಎಂದು ಹೇಳಿದರು.
ವೃದ್ಯಾಪ್ಯ ವೇತನ, ಆಯುಷ್ಮಾನ್ ಭಾರತ್ ಕಾರ್ಡ್ ಸೇರಿದಂತೆ ಮೊದಲಾದ ಸರ್ಕಾರಿ ಯೋಜನೆಗಳ ಸೌಲಭ್ಯ ಪಡೆಯಲು ನಾಗರೀಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಅರ್ಹ ಫಲಾನುಭವಿಗಳು ತಮ್ಮ ಕಚೇರಿಗೆ ಅರ್ಜಿ ತಂದು ಕೊಟ್ಟರೆ, ಕಚೇರಿ ಸಿಬ್ಬಂದಿಗಳೇ ಸಂಬಂಧಪಟ್ಟ ಕಚೇರಿ ಮೂಲಕ ನಾಗರಿಕರ ಕೆಲಸ ಮಾಡಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಶಿವಮೊಗ್ಗ ನಗರದ ಮುಖ್ಯ ರೈಲ್ವೆ ನಿಲ್ದಾಣದಲ್ಲಿ ಪ್ರೀಪೇಡ್ ಆಟೋ ನಿಲ್ದಾಣ ಆರಂಭಕ್ಕೆ ಒತ್ತು ಕೊಡಲಾಗುವುದು. ಶೀಘ್ರದಲ್ಲಿಯೇ ಪ್ರೀಪೇಡ್ ಆಟೋ ಕೌಂಟರ್ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಹಾಗೆಯೇ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸೇರಿದಂತೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲಾಗುವುದು. ಇಡೀ ರಾಷ್ಟ್ರದಲ್ಲಿಯೇ ಜಿಲ್ಲೆಯನ್ನು ಮಾದರಿಯಾಗಿ ರೂಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಂಸದರು ತಿಳಿಸಿದರು.