ದೇವೇಗೌಡರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಲಿ: ಸಂಸದ ಜಿ.ಎಸ್.ಬಸವರಾಜು

Update: 2019-06-13 18:23 GMT

ತುಮಕೂರು,ಜೂ.13: ಹೇಮಾವತಿ ನೀರು ಹಂಚಿಕೆ ವಿಚಾರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬಕ್ಕೆ ಇನ್ನೂ ಜಿಲ್ಲೆಯ ಮೇಲಿನ ಸೇಡು ಹೋಗಿಲ್ಲ. ಇಂತಹ ಮನೋಭಾವನೆ ಹೊಂದಿರುವುದಕ್ಕೆ ಜನರು ಸೋಲಿನ ರುಚಿ ತೋರಿಸಿದ್ದಾರೆ. ವಯೋವೃದ್ಧರಾಗಿರುವ ದೇವೇಗೌಡರು ತಮ್ಮ ಮಕ್ಕಳಿಗೆ ಒಳ್ಳೆಯ ಬುದ್ಧಿಯನ್ನು ಹೇಳಲಿ ಎಂದು ಸಂಸದ ಜಿ.ಎಸ್. ಬಸವರಾಜು ವ್ಯಂಗ್ಯವಾಡಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೇಮಾವತಿ ಕೆನಾಲ್ ನಿಂದ ಇಲ್ಲಿಯವರೆಗೆ ಎಂದೂ ಸಹ 16 ಟಿಎಂಸಿ ನೀರು ತುಮಕೂರು ಜಿಲ್ಲೆಗೆ ಹರಿದಿಲ್ಲ. ಸುಳ್ಳು ಮಾಹಿತಿ ನೀಡಿದ್ದಾರೆ, ತುಮಕೂರು ಏನಾದರೂ ಪಾಕಿಸ್ತಾನದಲ್ಲಿ ಇದೆಯೇ? ದೇವೇಗೌಡರ ಕುಟುಂಬ ತುಮಕೂರಿಗೆ ನೀರು ಹರಿಸುವ ವಿಚಾರದಲ್ಲಿ ಯಾವಾಗಲೂ ಅನ್ಯಾಯವನ್ನು ಮಾಡುತ್ತಲೇ ಬಂದಿದೆ ಎಂದು ಆರೋಪಿಸಿದರು.

ಕಳೆದ ವರ್ಷ ಮಳೆಯೇ ಇರಲಿಲ್ಲ. ಜಿಲ್ಲೆಗೆ ನೀರೇ ಬಿಟ್ಟಿಲ್ಲ. ಒಂದು ಕೆರೆಯೂ ತುಂಬಿಲ್ಲ. ಕುಡಿಯುವ ನೀರು ಮಾತ್ರ ಬುಗಡನಹಳ್ಳಿ ಕೆರೆಗೆ ಬಿಟ್ಟಿದ್ದರು. ಆದರೂ ಸಹ ನಾವು ತುಮಕೂರಿಗೆ 23.5 ಟಿಎಂಸಿ ನೀರು ಬಿಟ್ಟಿದ್ದೇವೆ ಎಂದು ಹೇಳುತ್ತಾರೆ. ಅವರಿಂದ ನೀರು ಬಿಡಲು ಸಾಧ್ಯವಿಲ್ಲವೆಂದರೆ ಅಣೆಕಟ್ಟಿನ ಕೀ ಕೊಡಲಿ, ನಾನೇ ನೀರುಗಂಟಿ ಕೆಲಸ ಮಾಡಿಸುತ್ತೇನೆ ಎಂದು ಕುಟುಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News