ಪಿ.ಜಿಯಲ್ಲೇ ಆತ್ಮಹತ್ಯೆಗೆ ಶರಣಾದ ಯುವತಿ

Update: 2019-06-14 13:57 GMT

ಮಡಿಕೇರಿ, ಜೂ.14 : ಜಿಲ್ಲಾಸ್ಪತ್ರೆಯಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿಯೊಬ್ಬಳು ತಾನು ವಾಸವಿದ್ದ ಪಿ.ಜಿ.ಯಲ್ಲೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಡಿಕೇರಿ ನಗರದ ಗೌಳಿಬೀದಿಯಲ್ಲಿ ನಡೆದಿದೆ. 

ಕಾಲೂರು ಗ್ರಾಮದ ಐಲಪಂಡ ವನಜಾ(23) ಎಂಬಾಕೆ ಆತ್ಮಹತ್ಯೆಗೆ ಶರಣಾದ ಯುವತಿ. ಇಂದು ಮಧ್ಯಾಹ್ನ ಊಟಕ್ಕೆಂದು ಪಿ.ಜಿ.ಗೆ ಬಂದಾಕೆ ಬಳಿಕ ಕೆಲಸಕ್ಕೆ ತೆರಳದೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ವನಜಾ ಅವರ ಮನೆ ಸಂಪೂರ್ಣ ಹಾನಿಗೆ ಒಳಗಾಗಿತ್ತು. ವನಜಾ ಮತ್ತು ಆಕೆಯ ತಂದೆ ಐಲಪಂಡ ಲಕ್ಷ್ಮಣ, ತಾಯಿ ರತಿ ಹಾಗೂ ಆಕೆಯ ಸಹೋದರಿ ಮಡಿಕೇರಿಯಲ್ಲಿ ಬಾಡಿಗೆ ಮನೆ ಮಾಡಿ ವಾಸ ಮಾಡಿಕೊಂಡಿದ್ದರು. 

ಜಿಲ್ಲಾಸ್ಪತ್ರೆಯಲ್ಲಿ ವನಜಾಗೆ ಗುತ್ತಿಗೆ ಆಧಾರದಲ್ಲಿ ಡಾಟಾ ಎಂಟ್ರಿ ಕೆಲಸ ದೊರೆತ ನಂತರ ಪೋಷಕರು ಕಾಲೂರಿಗೆ ಮರಳಿದ್ದರು. ಪಿ.ಜಿ.ಯಲ್ಲಿದ್ದ ವನಜಾ ಇದೀಗ ಆತ್ಮಹತ್ಯೆಗೆ ಶರಣಾಗಿದ್ದು, ಕಾರಣ ತಿಳಿದು ಬಂದಿಲ್ಲ. ಮಡಿಕೇರಿ ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News