ಮಲೆನಾಡು ಪ್ರದೇಶಾಭಿವೃದ್ದಿ ಮಂಡಳಿ ಸಭೆ: 50 ಕೋಟಿ ರೂ. ವೆಚ್ಚದ ಕ್ರಿಯಾಯೋಜನೆಗೆ ಅನುಮೋದನೆ

Update: 2019-06-14 17:46 GMT

ಶಿವಮೊಗ್ಗ, ಜೂ. 14: ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯ ವ್ಯಾಪ್ತಿಗೊಳಪಡುವ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗುವ ಸುಮಾರು 50 ಕೋಟಿ ವೆಚ್ಚದ ಕಾಮಗಾರಿಗಳ ಕ್ರಿಯಾ ಯೋಜನೆಗೆ ಪ್ರಾಧಿಕಾರದ ಅಧ್ಯಕ್ಷ ಡಿ.ಟಿ.ರಾಜೇಗೌಡರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸರ್ವಾನುಮತದ ಅನುಮೋದನೆ ನೀಡಲಾಯಿತು. 

ನಗರದ ಎಂಎಡಿಬಿ ಕಚೇರಿಯಲ್ಲಿ ಶುಕ್ರವಾರ ನಡೆದ ಮಂಡಳಿಯ ಪ್ರಸಕ್ತ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಇದೇ ವೇಳೆ ಪ್ರಾಧಿಕಾರದಿಂದ ಕೈಗೊಳ್ಳುವ ಕಾಮಗಾರಿ ಹಾಗೂ ಸಮಸ್ಯೆಗಳ ಪರಿಹಾರದ ಕುರಿತಂತೆ ಚರ್ಚಿಸಲಾಯಿತು. 
'ಪ್ರಸ್ತುತ ಸಂದರ್ಭದಲ್ಲಿ ಪ್ರಾಧಿಕಾರದ ವ್ಯಾಪ್ತಿಗೊಳಪಡುವ ಪ್ರತಿ ವಿಧಾನ ಪರಿಷತ್ ಹಾಗೂ ವಿಧಾನಸಭಾ ಕ್ಷೇತ್ರದ ಶಾಸಕರಿಗೆ, ತಲಾ 1 ಕೋಟಿ ರೂ. ಮೊತ್ತದ ಕಾಮಗಾರಿ ಕೈಗೊಳ್ಳಲು ಸರ್ಕಾರದಿಂದ ಅನುದಾನ ಮಂಜೂರಾಗಿದೆ' ಎಂದು ಡಿ.ಟಿ.ರಾಜೇಗೌಡ ತಿಳಿಸಿದರು. 

'ಮಂಡಳಿಯು 13 ಜಿಲ್ಲೆಗಳ ವಿಶಾಲ ವ್ಯಾಪ್ತಿ ಹೊಂದಿದೆ. ಜಿಲ್ಲಾ ಪಂಚಾಯತ್ ಗಳಿಗೆ ಬಿಡುಗಡೆಯಾಗುವ ಅನುದಾನವೂ ಕಡಿಮೆಯಾಗಿದೆ. ಆದ್ದರಿಂದ ಪ್ರಾಧಿಕಾರದ ವತಿಯಿಂದ ಜಿಲ್ಲಾ ಪಂಚಾಯತ್ ವ್ಯಾಪ್ತಿಗೂ ಅನುದಾನ ಬಿಡುಗಡೆಗೊಳಿಸಬೇಕು' ಎಂದು ದಾವಣಗೆರೆ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಒತ್ತಾಯಿಸಿದರು. ಈ ಬೇಡಿಕೆಯನ್ನು ಸಭೆಯ ನಡಾವಳಿಯಲ್ಲಿ ಸೇರಿಸಲಾಗುವುದು. ಸರ್ಕಾರದ ಗಮನ ಸೆಳೆಯಲಾಗುವುದು. ಅಗತ್ಯವಿದ್ದಲ್ಲಿ ಅಧ್ಯಕ್ಷರ ವಿವೇಚನಾ ನಿಧಿ ಬಳಕೆಯ ಬಗ್ಗೆಯೂ ಚಿಂತನೆ ನಡೆಸಲಾಗುವುದು ಡಿ.ಟಿ.ರಾಜೇಗೌಡ ಹೇಳಿದರು. 

ಸರ್ಕಾರಕ್ಕೆ ಸಲ್ಲಿಸಲಾಗಿದ್ದ 70 ಕೋ. ರೂ.ಗಳ ಪ್ರಸ್ತಾವನೆಯ ಪೈಕಿ ಕಳೆದ ಬಜೆಟ್‍ನಲ್ಲಿ 27.42 ಕೋ. ರೂ. ಕಾಮಗಾರಿಗಳಿಗೆ ಅನುಮೋದನೆ ದೊರೆತಿದೆ. ಈ ಹಿಂದೆ ಬಳಕೆಯಾಗದೆ ಉಳಿದ 23 ಕೋ. ರೂ. ಅನುದಾನಕ್ಕೆ 300 ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ಸಿಎಂಗೆ ಮನವಿ: ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವಾನ್ ಡಿ'ಸೋಜರವರು ಮಾತನಾಡಿ, 'ಮಂಡಳಿಯು ವಿಶಾಲವಾದ ವ್ಯಾಪ್ತಿ ಹೊಂದಿದೆ. ಮಲೆನಾಡಿನ ಜಿಲ್ಲೆಗಳಲ್ಲಿ ಮಳೆಯಿಂದ ಹಾಗೂ ಪ್ರಾಕೃತಿಕ ವಿಕೋಪಗಳಿಗೆ ಗೋಡೆ ಕುಸಿತ, ರಸ್ತೆ ದುರಸ್ತಿ, ಕಾಲುಸಂಕ ನಿರ್ಮಾಣ, ಕೆರೆ-ಕಟ್ಟೆ-ಕಾಲುವೆಗಳ ದುರಸ್ತಿಗೆ ಅನುದಾನದ ಅಗತ್ಯವಿದೆ. ಮಂಡಳಿಯು ಕೈಗೊಳ್ಳುವ ಕಾಮಗಾರಿ ಹಾಗೂ ಯೋಜನೆಗಳಿಗೆ ಸರ್ಕಾರದಿಂದ ಬಿಡುಗಡೆಯಾಗುತ್ತಿರುವ ಅನುದಾನ ಬಹಳ ಕಡಿಮೆ. ಆದ್ದರಿಂದ ಇನ್ನಷ್ಟು ಹೆಚ್ಚಿನ ಮೊತ್ತದ ಅನುದಾನ ಅಗತ್ಯವಿದ್ದು, ಅದಕ್ಕಾಗಿ ಪ್ರತ್ಯೇಕ ಕ್ರಿಯಾಯೋಜನೆ ಸಲ್ಲಿಸಿ, ಅನುದಾನ ಬಿಡುಗಡೆಗೊಳಿಸಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಬೇಕಾಗಿದೆ ಎಂದರು. ಇದಕ್ಕೆ ಸಭೆಯಲ್ಲಿ ಉಪಸ್ಥಿತರಿದ್ದ ಎಲ್ಲಾ ಸದಸ್ಯರು ಸಮ್ಮತಿ ಸೂಚಿಸಿದರು. 

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕೆಲವು ಜಿಲ್ಲೆಗಳಿಗೆ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಮಾತ್ರವಲ್ಲದೆ ಬಯಲು ಸೀಮೆ ಅಭಿವೃದ್ಧಿ ಮಂಡಳಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಹೆಚ್ಚಿನ ಅನುದಾನ ಲಭ್ಯವಾಗುತ್ತಿದೆ. ಇದರಿಂದ ಮಲೆನಾಡಿನ ಜಿಲ್ಲೆಗಳಿಗೆ ಅನುದಾನದ ಕೊರತೆ ಕಾಣುತ್ತಿದೆ. ಇದನ್ನು ಸರಿದೂಗಿಸಿ ಮಲೆನಾಡಿನ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ಕಾಯ್ದಿರಿಸುವಂತೆ ಅವರು ಮನವಿ ಮಾಡಿದರು.

ಸಭೆಯಲ್ಲಿ ಶಾಸಕರಾದ ಕೆ.ಬಿ.ಅಶೋಕ್‍ ನಾಯ್ಕ್, ಡಿ.ಎಸ್.ಸುರೇಶ್, ಸಿ.ಎಂ.ನಿಂಬಣ್ಣನವರ್, ಹರೀಶ್ ಪೂಂಜಾ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಧರ್ಮಸೇನ, ಶ್ರೀಕಾಂತ್ ಎಲ್. ಆಡಳಿತಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಸೇರಿದಂತೆ ವಿವಿಧ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಉಪಸ್ಥಿತರಿದ್ದರು.

25 ಸಂವತ್ಸರ ಪೂರೈಸಿದ ಮಂಡಳಿ
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಯ ಚಟುವಟಿಕೆಗಳು ಕಾರ್ಯಾರಂಭಗೊಂಡು ಸುಮಾರು 25ಸಂವತ್ಸರಗಳು ಪೂರ್ಣಗೊಳ್ಳುತ್ತಿರುವ ಶುಭ ಸಂದರ್ಭದ ಸವಿನೆನಪಿಗಾಗಿ ರಜತ ಮಹೋತ್ಸವ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ಉದ್ದೇಶಿಸಲಾಗಿದೆ. ಆದ್ದರಿಂದ ಅದಕ್ಕೆ ಪೂರಕವಾಗಿ ಎಲ್ಲಾ ಸದಸ್ಯ ಅಗತ್ಯ ಸಲಹೆ-ಸಹಕಾರ ನೀಡುವಂತೆ' ಮಂಡಳಿಯ ಅಧ್ಯಕ್ಷ ರಾಜೇಗೌಡರವರು ಸದಸ್ಯರಿಗೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News